ತಾಲೂಕಿನಾದ್ಯಂತ ಎಡಬಿಡದೆ ಸುರಿಯುತ್ತಿರುವ ಬಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಾರಿ ಗಾಳಿ ಸಹಿತವಾಗಿ ಸುರಿಯುತ್ತಿರುವ ಮೃಗಶಿರಾ ಮಳೆಯ ಅಬ್ಬರಕ್ಕೆ ಜನ ಕಂಗಾಲಾಗಿದ್ದಾರೆ. ಹನಿಕಡಿಯದ ಮಳೆಗೆ ಇಡೀ ವಾತಾವರಣ ತಂಪಾಗಿದ್ದು ಶೀತ ಗಾಳಿಗೆ ಚಳಿ ಕೊರೆಯುತ್ತಿದೆ.
ಕನ್ನಡಪ್ರಭ ವಾರ್ತೆ ಸಾಗರ
ತಾಲೂಕಿನಾದ್ಯಂತ ಎಡಬಿಡದೆ ಸುರಿಯುತ್ತಿರುವ ಬಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಾರಿ ಗಾಳಿ ಸಹಿತವಾಗಿ ಸುರಿಯುತ್ತಿರುವ ಮೃಗಶಿರಾ ಮಳೆಯ ಅಬ್ಬರಕ್ಕೆ ಜನ ಕಂಗಾಲಾಗಿದ್ದಾರೆ. ಹನಿಕಡಿಯದ ಮಳೆಗೆ ಇಡೀ ವಾತಾವರಣ ತಂಪಾಗಿದ್ದು ಶೀತ ಗಾಳಿಗೆ ಚಳಿ ಕೊರೆಯುತ್ತಿದೆ.ಶನಿವಾರದಿಂದಲೇ ಚುರುಕುಗೊಂಡಿದ್ದ ಮಳೆ ಭಾನುವಾರ ಬೆಳಗಿನಿಂದಲೇ ಮತ್ತಷ್ಟು ಬಿರುಸುಗೊಂಡಿದೆ. ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗಿನವರೆಗೆ ಬಿಟ್ಟುಬಿಡದೆ ಸುರಿದ ಮಳೆಗೆ ಕೆರೆಕಟ್ಟೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಪಟ್ಟಣದಲ್ಲಿ ಚರಂಡಿ ನೀರು ರಸ್ತೆಯ ಮೇಲೆ ಹರಿದು ಜನ ಹಾಗೂ ವಾಹನ ಸಂಚಾರಕ್ಕೆ ತೀರಾ ಅಡಚಣೆಯುಂಟಾಗಿತ್ತು. ಮಳೆಗಾಲದ ಆರಂಭದಲ್ಲಿಯೇ ಮಳೆಯ ಅಬ್ಬರ ಜೋರಾಗಿರುವುದರಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ.ವಿಪರೀತ ಮಳೆಯಿಂದ ಪಟ್ಟಣದ ಬಹುತೇಕ ಭಾಗಗಳಲ್ಲಿ ರಾಜಕಾಲುವೆ, ಚರಂಡಿ ಕಟ್ಟಿ ನಿಂತಿದ್ದು ನಗರಸಭೆ ವತಿಯಿಂದ ಸಮರೋಪಾದಿಯ ಪರಿಹಾರ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ವಿ. ಪಾಟೀಲ್ ತಿಳಿಸಿದರು.
ಕೆಳದಿ ರಸ್ತೆಯಲ್ಲಿ ಕಟ್ಟಿಕೊಂಡಿರುವ ರಾಜಕಾಲುವೆ ತೆರವುಗೊಳಿಸುವ ಕಾಮಗಾರಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ವಿಪರೀತ ಮಳೆ ಸುರಿಯುತ್ತಿದೆ. ವಿಪರೀತ ಮಳೆಗೆ ಕೆಳದಿ ರಸ್ತೆ ರಾಜಕಾಲುವೆ, ಶಿವಾಜಿರಸ್ತೆ, ಜೆ.ಪಿ.ನಗರ, ಸೂರನಗದ್ದೆ ವೃತ್ತ ಇನ್ನಿತರ ಭಾಗಗಳಲ್ಲಿ ಚರಂಡಿ ತುಂಬಿ ರಸ್ತೆಯಲ್ಲಿ ನೀರು ಹರಿಯುತ್ತಿದ್ದು ಅದನ್ನು ತೆರವುಗೊಳಿಸಿ ಸಾರ್ವಜನಿಕರು, ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ಚಾಮರಾಜಪೇಟೆಯಲ್ಲಿ ಗಾಳಿಮಳೆಗೆ ಮರವೊಂದು ನೆಲಕ್ಕೆ ಉರುಳಿದ್ದು ಯಾವುದೇ ಹಾನಿಯಾಗಿಲ್ಲ. ನಗರಸಭೆಯ ಪೌರಕಾರ್ಮಿಕರನ್ನು ಎಲ್ಲ ಸ್ಥಳಗಳಿಗೆ ನೇಮಿಸಲಾಗಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ನಗರಸಭೆ ಪರಿಸರ ವಿಭಾಗದ ಮದನ್, ಪರಿಸರ ಮತ್ತು ಆರೋಗ್ಯ ವಿಭಾಗದ ಅಧಿಕಾರಿಗಳು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.