ಕಾವೇರಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಪರಿಷ್ಕರಣೆಗಾಗಿ ನಗರಸಭೆ ಪ್ರತಿನಿಧಿ ಆಯ್ಕೆ

KannadaprabhaNewsNetwork |  
Published : Aug 13, 2025, 12:30 AM IST
50 | Kannada Prabha

ಸಾರಾಂಶ

ಅರ್ಜಿದಾರರ ಮೇಲ್ಮನವಿಯ ವಿಚಾರಣೆ ಅಂಗೀಕರಿಸುವ ಮೂಲಕ ಜೆಡಿಎಸ್-ಬಿಜೆಪಿ ಸದಸ್ಯರು, ಶಾಸಕ ಜಿ.ಡಿ. ಹರೀಶ್‌ ಗೌಡ ಸೇರಿದಂತೆ ಒಟ್ಟು 17 ಸದಸ್ಯರು ನಿರ್ಣಯದ ಪರಿವಾಗಿ ಕೈ ಎತ್ತುವ ಮೂಲಕ ಬೆಂಬಲಿಸಿದರೆ, 12 ಮಂದಿ ಕಾಂಗ್ರೆಸ್ ಸದಸ್ಯರು ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹುಣಸೂರು

ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಕಾವೇರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಗರಸಭೆ ಅನುಮೋದಿತ ನಕ್ಷೆಯನ್ನು ಉಲ್ಲಂಘಿಸಿ ಕಟ್ಟಿರುವ ಕಟ್ಟಡದ ತೆರವು ಕುರಿತಂತೆ ಹೈಕೋರ್ಟ್‌ ನೀಡಿರುವ ಆದೇಶದ ಪರಿಷ್ಕರಣೆಗಾಗಿ ಆಸ್ಪತ್ರೆ ವ್ಯವಸ್ಥಾಪಕರು ನಗರಸಭೆಗೆ ಸಲ್ಲಿಸಿರುವ ಮೇಲ್ಮನವಿಯನ್ನು ನಗರಸಭೆಯ ವಿಶೇಷಸಭೆಯಲ್ಲಿ ಬಹುಮತದೊಂದಿಗೆ ಅಂಗೀಕರಿಸಿ ಸದಸ್ಯ ಎಚ್.ಪಿ. ಸತೀಶ್‌ ಕುಮಾರ್‌ ಅವರನ್ನು ನಗರಸಭೆ ಪ್ರತಿನಿಧಿ (ಡೆಲಿಗೇಟ್)ಯಾಗಿ ಆಯ್ಕೆ ಮಾಡಿ ಪರಿಷ್ಕರಣೆ ನಡೆಸಲು ತೀರ್ಮಾನಿಸಿತು.

ಅರ್ಜಿದಾರರ ಮೇಲ್ಮನವಿಯ ವಿಚಾರಣೆ ಅಂಗೀಕರಿಸುವ ಮೂಲಕ ಜೆಡಿಎಸ್-ಬಿಜೆಪಿ ಸದಸ್ಯರು, ಶಾಸಕ ಜಿ.ಡಿ. ಹರೀಶ್‌ ಗೌಡ ಸೇರಿದಂತೆ ಒಟ್ಟು 17 ಸದಸ್ಯರು ನಿರ್ಣಯದ ಪರಿವಾಗಿ ಕೈ ಎತ್ತುವ ಮೂಲಕ ಬೆಂಬಲಿಸಿದರೆ, 12 ಮಂದಿ ಕಾಂಗ್ರೆಸ್ ಸದಸ್ಯರು ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದರು.

ಎಸ್‌.ಡಿಪಿಐನ ಇಬ್ಬರು ಸದಸ್ಯರು ತಟಸ್ಥರಾಗಿ ಉಳಿದರೆ, ಜೆಡಿಎಸ್‌ ನ ಒಬ್ಬ ಸದಸ್ಯರಾದ ಮಾಜಿ ಅಧ್ಯಕ್ಷ ಶರವಣ ಗೈರಾಗಿದ್ದರು.

ಘಟನೆ ವಿವರ: ಇತ್ತೀಚೆಗೆ ನಿರ್ಮಾಣಗೊಂಡಿರುವ ಕಾವೇರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಗರಸಭೆ ಅನುಮೋದಿತ ನಕ್ಷೆಯನ್ನು ಉಲ್ಲಂಘಿಸಿ, ನಿಯಮಬಾಹಿರವಾಗಿ ಸರ್ಕಾರಿ ರಸ್ತೆ ಸೆಪ್ಟಿಕ್ ಜಾಗ, ಸರ್ಕಾರಿ ಉದ್ಯಾನದ ಜಾಗವನ್ನು ಅತಿ ಕ್ರಮಿಸಿ ಕಟ್ಟಡ ನಿರ್ಮಿಸಿದ್ದಾರೆಂದು ಆರ್‌ಟಿಐ ಕಾರ್ಯಕರ್ತ ಒಬೇದುಲ್ಲ ಮತ್ತು ನಗರಸಭೆಯ ಕೆಲ ಸದಸ್ಯರು ಹೈಕೋರ್ಟ್‌ 2024ರಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯ ವಿಚಾರಣೆ ನಡೆಸಿ ಕಾನೂನಿನ ಉಲ್ಲಂಘನೆಯಾಗಿದೆ ಎಂದು ತಿಳಿಸಿ ನಗರಸಭೆ ಪೌರಾಯುಕ್ತರಿಗೆ ಅಕ್ರಮ ಕಟ್ಟಡವನ್ನು ತೆರವುಗೊಳಿಸಲು ತಮ್ಮ ಅಧಿಕಾರವನ್ನು ಬಳಸಲು ಸೂಚಿಸಿತ್ತು. ಇತ್ತೀಚೆಗೆ ನಗರಸಭೆಯಿಂದ ಈ ಕುರಿತು ಆಸ್ಪತ್ರೆ ವ್ಯವಸ್ಥಾಪಕರಿಗೆ ನೋಟೀಸ್ ಜಾರಿ ಮಾಡಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಸೂಚಿಸಿತ್ತು.

ತದ ನಂತರ ಆಸ್ಪತ್ರೆ ವ್ಯವಸ್ಥಾಪಕರು ನಗರಸಭಾಧ್ಯಕ್ಷರಿಗೆ ವಕೀಲರ ಮೂಲಕ ಮೇಲ್ಮನವಿ ಸಲ್ಲಿಸಿ ಪೌರಾಯುಕ್ತರ ಆದೇಶದ ಕುರಿತು ಪುನರ್ ಪರಿಶೀಲನೆಗೆ ಕೋರಿದ್ದರು.

ಅದರಂತೆ ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ ಸೋಮವಾರ ವಿಶೇಷ ಸಭೆ ಆಯೋಜಿಸಿ ಮೇಲ್ಮನವಿಯ ಪುನರ್ ಪರಿಶೀಲನೆಗೆ ಮಾಡಲು ಸದಸ್ಯರ ಅಭಿಪ್ರಾಯ ಕೋರಿದ್ದರು. ಅದರಂತೆ ನಗರಸಭಾಧ್ಯಕ್ಷರು ಮೇಲ್ಮನವಿಯ ಪರಿಶೀಲನೆಗೆ ಬಹುಮತದ ಬೆಂಬಲ ಗಳಿಸಿದರು. ಶಾಸಕ ಜಿ.ಡಿ. ಹರೀಶ್‌ ಗೌಡ ಸಭೆಯಲ್ಲಿ ಹಾಜರಿದ್ದು, ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಕರ್ನಾಟಕ ಮುನಿಸಿಪಾಲಿಟಿ ಅಪೀಲುಗಳು ಮತ್ತು ಪರಿಷ್ಕರಣೆಗಳ ನಿಯಮದಡಿ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಲು ನಗರಸಭೆಗೆ ಕೌನ್ಸಿಲ್‌ ಗಳ ಅಧಿಕಾರವಿರುತ್ತದೆ. ಪೌರಾಯುಕ್ತರು ನೀಡಿರುವ ಆದೇಶಕ್ಕೆ ತಡೆಯಾಜ್ಞೆ ನೀಡಲು, ದಾಖಲಾತಿಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಲು ಅಧಿಕಾರವಿದೆ. ಅದರಂತೆ ಈ ಮೇಲ್ಮನವಿಯನ್ನು ಅಂಗೀಕರಿಸಲು ಸದಸ್ಯರ ಅಭಿಪ್ರಾಯಕ್ಕಾಗಿ ಮತ್ತು ತೀರ್ಮಾನಕ್ಕಾಗಿ ಸಭೆಯಲ್ಲಿ ಮಂಡಿಸಲಾಗಿದೆ ಎಂದರು.

ಕಾಂಗ್ರೆಸ್ ನ ಸ್ವಾಮಿಗೌಢ ಮಾತನಾಡಿ, ನ್ಯಾಯಾಲಯ ನೀಡಿರುವ ತೀರ್ಪನ್ನು ಜಾರಿಗೊಳಿಸುವುದೇ ನಮ್ಮ ಆಯ್ಕೆಯಾಗಬೇಕು. ಸರ್ಕಾರಿ ಜಾಗ ಕಬಳಿಕೆ ಅಕ್ರಮವಾಗಿದ್ದು, ಮೇಲ್ಮನವಿ ಪರಿಷ್ಕರಣೆಗೆ ನಮ್ಮ ಬೆಂಬಲವಿಲ್ಲವೆಂದು ಘೋಷಿಸಿದರು.

ಶಾಸಕ ಜಿ.ಡಿ. ಹರೀಶ್‌ ಗೌಡ ಮಾತನಾಡಿ, ಹುಣಸೂರು ನಗರಸಭೆ ಸದಸ್ಯರು ತಮಗೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸುವ ಮೂಲಕ ಜವಾಬ್ದಾರಿ ಮೆರೆದಿದ್ದಾರೆ. ಆರೋಗ್ಯಪೂರ್ಣ ಚರ್ಚೆಯ ಬಳಿಕ ಬಹುಮತ ಸಾಬೀತಾಗಿದೆ. ಮೇಲ್ಮನವಿಯ ಪರಿಷ್ಕರಣೆ ನಡಸಲು ತೀರ್ಮಾನಿಸಲಾಗಿದೆ ಎಂದರು.

ಹುಣಸೂರು ನಗರಸಭೆಯ ಆಸ್ತಿಗಳೆಷ್ಟು? ಆದಾಯವೆಷ್ಟು? ನಿಮ್ಮ ಆಸ್ತಿಗಳನ್ನು ಉಳಿಸಿಕೊಂಡಿದ್ದೀರಾ? ಆದಾಯ ಹೆಚ್ಚಿಸಲು ಕ್ರಮಗಳೇನು ವಹಿಸಿದ್ದೀರಿ ಎಂದು ಶಾಸಕ ಜಿ.ಡಿ. ಹರೀಶ್‌ ಗೌಡ ಅಧಿಕಾರಿಗಳಿಗೆ ಪ್ರಶ್ನಿಸುವ ಮೂಲಕ ತೀವ್ರ ತರಾಟೆಗೆ ತೆಗೆದುಕೊಂಡರು.

ನಗರಸಭಾ ಸದಸ್ಯ ಕೃಷ್ಣರಾಜ ಗುಪ್ತ, ಮಾತನಾಡಿ, ಹುಣಸೂರು ನಗರಸಭೆಯ ಆಸ್ತಿಯದ ಹಳೆತಾಲುಕು ಕಚೇರಿ ಬಳಿಯ 7 ಮಳಿಗೆಗಳ ಪೈಕಿ ಚೇತನ್ ಎನ್ನುವವರು ಮೃತಪಟ್ಟು 8 ವರ್ಷಗಳೇ ಸಂದಿವೆ. ಅವರ ಹೆಸರಿನಲ್ಲಿದ್ದ ಮಳಿಗೆಯನ್ನು ಬೇರೊಬ್ಬರು ಬಳಸುತ್ತಿದ್ದಾರೆ. ಪುಟ್ಟರಾಜೇಗೌಡರಿಗೆ ಸೇರಿದ ಮಳಿಗೆ ಬೇರೊಬ್ಬರ ಪಾಲಾಗಿದೆ. ಪುಟ್ಟರಾಜೇಗೌಡರ ಫೋರ್ಜರಿ ಸಹಿ ಬಳಿಸಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.

ಸಭೆಯಲಿ ಪೌರಾಯುಕ್ತೆ ಕೆ.ಮಾನಸ, ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಸಾಮಾಜಿಕಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್‌ಕುಮಾರ್, ಸದಸ್ಯರಾದ ದೊಡ್ಡಹೆಜ್ಜೂರು ರಮೇಶ್, ಮಾಲಿಕ ಪಾಷಾ, ದೇವರಾಜ್, ಮನು, ಮಂಜು, ಗೀತಾ ನಿಂಗರಾಜು, ಅಧಿಕಾರಿಗಳು ಇದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ