ಪುರಸಭೆ ಉಪಾಧ್ಯಕ್ಷ ಅಣ್ಣಯ್ಯಸ್ವಾಮಿಮೇಲೆ ಪ್ರಕರಣ: ಚರ್ಚೆಗೆ ಗ್ರಾಸ

KannadaprabhaNewsNetwork | Published : May 11, 2025 1:17 AM
Follow Us

ಸಾರಾಂಶ

ಇಲ್ಲಿನ ಪುರಸಭೆ ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ ಮತ್ತವರ ಕುಟುಂಬದ ಮೇಲೆ ದಾಖಲಾದ ಪ್ರಕರಣ ನಾನಾ ಚರ್ಚೆಗೆ ಗ್ರಾಸವಾಗಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಇಲ್ಲಿನ ಪುರಸಭೆ ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ ಮತ್ತವರ ಕುಟುಂಬದ ಮೇಲೆ ದಾಖಲಾದ ಪ್ರಕರಣ ನಾನಾ ಚರ್ಚೆಗೆ ಗ್ರಾಸವಾಗಿದೆ.ಪುರಸಭೆ ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ ಮತ್ತವರ ಕುಟುಂಬದ ೯ ಮಂದಿ ಮೇಲೆ ದೂರುದಾರರಾದ ಲಕ್ಷ್ಮೀ ಮೇ ೩ರಂದು ಕೇಸು ದಾಖಲಿಸಿ, ಮೇ ೨ರ ರಾತ್ರಿ ೭.೩೦ರ ಸಮಯದಲ್ಲಿ ಆರೋಪಿಗಳು ಮಾನಭಂಗಕ್ಕೆ ಯತ್ನಿಸಿದ್ದು, ನಮ್ಮೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಅಣ್ಣಯ್ಯಸ್ವಾಮಿ ಮತ್ತು ಅಭಿ ನನ್ನ ತಾಳಿ ಚೈನು, ಕಿವಿ ಓಲೆಯನ್ನು ಕಿತ್ತು ಹಾಕಿದ್ದಾರೆ. ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.

ಆದರೆ ದೂರುದಾರರ ಪ್ರಕಾರ ಮೇ ೨ರ ಸಂಜೆ ೭.೩೦ರಲ್ಲಿ ಗಲಾಟೆ ನಡೆದು, ಹಲ್ಲೆ, ಮಾನಭಂಗಕ್ಕೆ ಯತ್ನಿಸಿದ್ದಾರೆ. ಕೊಲೆ ಬೆದರಿಕೆ ಹಾಕಿದ್ದಾರೆ, ದೂರಿನ ಆಧಾರದ ಮೇಲೆ ಗುಂಡ್ಲುಪೇಟೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಆದರೆ, ವಾಸ್ತವ ಸಂಗತಿ, ಮೇ೨ ರ ಸಂಜೆ ೭.೩೦ರ ಸಮಯದಲ್ಲಿ ಆರೋಪಿಗಳಾದ ಅಣ್ಣಯ್ಯಸ್ವಾಮಿ, ಅಭಿ, ರಾಮಕೃಷ್ಣ ದೂರುದಾರರ ಪತಿ ಬಿಳಿಗಿರಿ ಅಲಿಯಾಸ್‌ ಮುತ್ತರಿಂದ ಹಲ್ಲೆಗೊಳಗಾಗಿ ಗುಂಡ್ಲುಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಆರೋಪಿಗಳಲ್ಲಿ ವರ್ಷ ಮೈಸೂರಿಂದ ಸಾರಿಗೆ ಬಸ್‌ನಲ್ಲಿ ಸಂಜೆ ೭.೩೦ಕ್ಕೆ ಬಂದಿದ್ದಾರೆ. (ಬಸ್‌ ಟಿಕೆಟ್‌ ಹಾಗೂ ಆಟೋದಲ್ಲಿ ಹೋಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಯಾಗಿದೆ). ಮತ್ತೋರ್ವ ಶಾಂತ ಪಟ್ಟಣದ ಕುರುಬಗೇರಿಯಲ್ಲಿ ಹಾಸ್ಟೆಲ್‌ನಲ್ಲಿ ಅಡುಗೆ ತಯಾರಿಕೆಯಲ್ಲಿ ತೊಡಗಿದ್ದರು. (ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ) ಪ್ರಮುಖ ಆರೋಪಿ ರವಿ ಕೂಡ ಮೇ ೨ ಸಂಜೆ ೭ಗಂಟೆಗೆ ಹಲ್ಲೆಗೊಂಡ ಅಣ್ಣಯ್ಯಸ್ವಾಮಿ, ಅಭಿ, ರಾಮಕೃಷ್ಣರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.

ಚರ್ಚೆಗೆ ಗ್ರಾಸ:

ಆಸ್ಪತ್ರೆಯಲ್ಲಿ ಗಾಯಗೊಂಡ ಚಿಕಿತ್ಸೆ ಪಡೆಯುತ್ತಿದ್ದವರ ಮೇಲೆ ತನಿಖೆ ನಡೆಸದೆ ಪೊಲೀಸರು ಪಕರಣ ದಾಖಲು ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪೊಲೀಸರು ತನಿಖೆ ನಡೆಸಿದ್ದರೆ ಸುಳ್ಳು ದೂರು ದಾಖಲಾಗುತ್ತಿರಲಿಲ್ಲ ಎಂಬ ಮಾತು ಕೇಳಿ ಬಂದಿದೆ.