ಕೊಪ್ಪಳ: ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಬ್ಯಾಂಕ್ ನೌಕರರನ್ನು ಇಲ್ಲಿನ ಪೊಲೀಸರು ಬಂಧಿಸುವಲ್ಲಿ ಸೋಮವಾರ ಯಶಸ್ವಿಯಾಗಿದ್ದಾರೆ.ಬ್ಯಾಂಕ್ ನೌಕರ, ಜಡ್ಡಾ ನಾರಾಯಣಸ್ವಾಮಿ ಬಂಧಿತ ಆರೋಪಿ. ತಾಲೂಕಿನ ಡಂಬರಳ್ಳಿಯ ಚಂದ್ರಗೌಡ ನಿಂಗನಗೌಡ ನಂದನಗೌಡ ಕೊಲೆಯಾದಾತ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕೊಲೆಯಾದ ಚಂದ್ರಗೌಡ ಹಾಗೂ ಆರೋಪಿ ನಾರಾಯಣಸ್ವಾಮಿ ನಡುವೆ ಹಣದ ವ್ಯವಹಾರ ಹಾಗೂ ವೈಯಕ್ತಿಕ ದ್ವೇಷ ಇತ್ತು ಎನ್ನಲಾಗಿದೆ. ಈ ನಡುವೆ ಇಬ್ಬರಲ್ಲಿ ವೈಮನಸ್ಸು ಏರ್ಪಟ್ಟಿತ್ತು. ಕೊಪ್ಪಳ ಬಳಿಯ ಮಂಗಳಾಪುರದ ತೋಟವೊಂದರಲ್ಲಿ ಚಂದ್ರಗೌಡನನ್ನು ಊಟಕ್ಕೆ ಕರೆದು, ಊಟದ ನಂತರ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಂದಿದ್ದ ಆರೋಪ ಈತನ ವಿರುದ್ಧ ಕೇಳಿಬಂದಿದೆ. ಆರೋಪಿಯು ಈತನನ್ನು ಕೊಲೆಗೈಯಲು ಆಂಧ್ರಪ್ರದೇಶ ಮೂಲದ ಸುಧೀರಕುಮಾರ ಶ್ರೀಹರಿ ಎಂಬವರಿಗೆ ಸುಪಾರಿ ನೀಡಿ, ಹತ್ಯೆಗೈದಿದ್ದರು.ನಂತರ ಕಾರಿನ ಡಿಕ್ಕಿಯಲ್ಲಿ ಕಾರಿನ ಕವರ್ನಲ್ಲಿ ಶವ ಸುತ್ತಿ ತಾಲೂಕಿನ ಕುಕನೂರು ಠಾಣಾ ವ್ಯಾಪ್ತಿಯ ತಳಬಾಳ ಸೀಮಾದಲ್ಲಿ ಸೆ.29-ಅ.4ರ ಸಂಜೆಯ ಅವಧಿಯಲ್ಲಿ ಕೈಗಳಿಗೆ ಕಲ್ಲು ಕಟ್ಟಿ ಶವವನ್ನು ಬಾವಿಯಲ್ಲಿ ಮುಳುಗಿಸಿದ್ದರು. ಬಳಿಕ ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದರು.
ಸುಪಾರಿ ಪಡೆದಿದ್ದ ಸುಧೀರಕುಮಾರ ಶ್ರೀಹರಿ ಇತ್ತೀಚೆಗೆ ಪೊಲೀಸರ ವಶವಾಗಿದ್ದ. ಕೊಲೆಯಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತ ಆರೋಪಿ ಜಡ್ಡಾ ನಾರಾಯಣಸ್ವಾಮಿಯನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.