ಬುಡಕಟ್ಟು ಸಮುದಾಯಕ್ಕೆ ಸೇರಿರುವ ಕಾಡುಗೊಲ್ಲ ಜನಾಂಗಕ್ಕೆ ತಾಲೂಕು ಕಚೇರಿಗಳಲ್ಲಿ ಕಾಡುಗೊಲ್ಲ, ಹಟ್ಟಿಗೊಲ್ಲ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಸಿಂಧುತ್ವ ಪ್ರಮಾಣ ಪತ್ರ ನೀಡಿ ಎಂದು ಕಾಡುಗೊಲ್ಲರ ಸಂಘದ ತಾಲೂಕು ಅಧ್ಯಕ್ಷ ಈಶ್ವರಪ್ಪ ಒತ್ತಾಯಿಸಿದರು.
ನಗರದ ಮಿನಿವಿಧಾನಸೌಧದಲ್ಲಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಕೆ ಕನ್ನಡಪ್ರಭ ವಾರ್ತೆ ಶಿರಾ ಬುಡಕಟ್ಟು ಸಮುದಾಯಕ್ಕೆ ಸೇರಿರುವ ಕಾಡುಗೊಲ್ಲ ಜನಾಂಗಕ್ಕೆ ತಾಲೂಕು ಕಚೇರಿಗಳಲ್ಲಿ ಕಾಡುಗೊಲ್ಲ, ಹಟ್ಟಿಗೊಲ್ಲ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಸಿಂಧುತ್ವ ಪ್ರಮಾಣ ಪತ್ರ ನೀಡಿ ಎಂದು ಕಾಡುಗೊಲ್ಲರ ಸಂಘದ ತಾಲೂಕು ಅಧ್ಯಕ್ಷ ಈಶ್ವರಪ್ಪ ಒತ್ತಾಯಿಸಿದರು. ನಗರದ ಮಿನಿವಿಧಾನಸೌಧದಲ್ಲಿ ತಹಸೀಲ್ದಾರ್ ಎಲ್.ಮರಳೀಧರ ಅವರಿಗೆ ರಾಜ್ಯ ಕಾಡುಗೊಲ್ಲರ ಸಂಘದ ವತಿಯಿಂದ ಮನವಿ ಸಲ್ಲಿಸಿ ಮಾತನಾಡಿದರು. ಕಾಡುಗೊಲ್ಲ ಜನಾಂಗವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿದ್ದು, ಮೊದಲು ಹಿಂದೂ ಗೊಲ್ಲ ಎಂದು ಪ್ರವರ್ಗ-೧ರಲ್ಲಿ ಜಾತಿ ಪ್ರಮಾಣ ಪತ್ರ ಪಡೆಯಲಾಗುತ್ತಿತ್ತು. ಆದರೆ, ರಾಜ್ಯ ಕಾಡುಗೊಲ್ಲ ಸಂಘ ಹಾಗೂ ಇತರೆ ಸಂಘಗಳ ವತಿಯಿಂದ ಹೋರಾಟ ನಡೆಸಿದ್ದರಿಂದ ರಾಜ್ಯ ಸರಕಾರ ಹಿಂದೂ ಗೊಲ್ಲ ಬದಲಾಗಿ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡಲು ೨೦೧೮ರಲ್ಲಿ ಆದೇಶ ನೀಡಿದೆ. ಈ ಆದೇಶದ ಪ್ರಕಾರ ತಾಲೂಕಿನಲ್ಲಿ ಗೊಲ್ಲರಹಟ್ಟಿಗಳಲ್ಲಿ ವಾಸಿಸುತ್ತಿರುವ ಕಾಡುಗೊಲ್ಲ ಸಮುದಾಯಕ್ಕೆ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡಬೇಕು. ಜಾತಿ ಪ್ರಮಾಣ ಪತ್ರ ನೀಡಲು ಶಾಲಾ ದಾಖಲಾತಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಆರ್.ಕೆ.ಶ್ರೀನಿವಾಸ್ ಮಾತನಾಡಿ, ಕಾಡುಗೊಲ್ಲ ಜಾತಿ ಪ್ರಮಾಣ ಪತ್ರಗಳನ್ನು ತಾ.ಪಂ.ಗಳಲ್ಲಿ ನೀಡಬೇಕು ಎಂದು ಸರ್ಕಾರ ಆದೇಶ ಮಾಡಿದೆ. ಈಗಾಗಲೇ ಸಂವಿಧಾನಿಕವಾಗಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ಎಂದು ಮಾಡಲಾಗಿದೆ. ಸರ್ಕಾರದ ಜಾತಿಪಟ್ಟಿಯಲ್ಲೂ ಕಾಡುಗೊಲ್ಲ ಎಂದು ಇದೆ. ಕಾಡುಗೊಲ್ಲ ಜನಾಂಗದ ಕುಲಶಾಸ್ತ್ರ ಅಧ್ಯಯನ ಆಗಿದೆ. ಆದರೆ, ಶಾಲಾ ದಾಖಲೆಗಳಲ್ಲಿ ಮಕ್ಕಳನ್ನು ದಾಖಲಿಸುವಾಗ ಕೆಲವರು ಗೊಲ್ಲ ಹಾಗೂ ಕಾಡುಗೊಲ್ಲ ಎಂದು ಬರೆಸಿದ್ದಾರೆ. ಈಗಾಗಲೇ ಕರ್ನಾಟಕದಲ್ಲಿ ಬೇರೆ ಬೇರೆ ತಾಲೂಕುಗಳಲ್ಲಿ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡುತ್ತಿದ್ದಾರೆ. ಶಿರಾ ತಾಲೂಕು ಕಚೇರಿಯಲ್ಲೂ ಜಾತಿ ಪ್ರಮಾಣ ಪತ್ರ ನೀಡಬೇಕು. ಶಿರಾ ತಾಲೂಕಿನಲ್ಲಿ ಬಹುತೇಕ ಕಾಡುಗೊಲ್ಲ ಜನಾಂಗದವರೇ ಇರುವುದರಿಂದ ಗ್ರಾಮ ಲೆಕ್ಕಿಗರಿಂದ ಮಾಹಿತಿ ಪಡೆದು, ಅವರ ಶಾಲಾ ದಾಖಲೆಗಳಲ್ಲಿ ಗೊಲ್ಲ ಎಂದು ಇದ್ದರೂ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಾಡುಗೊಲ್ಲ ಸಂಘದ ಕಾರ್ಯದರ್ಶಿ ಚಂದ್ರಣ್ಣ, ಸಿದ್ದಪ್ಪ ವಕೀಲರು, ಗುಮ್ಮನಹಳ್ಳಿ ಈರಣ್ಣ, ಹಾರೋಗೆರೆ ಮಹೇಶ್, ಶ್ರೀನಿವಾಸ ಬಾಬು, ಆರ್.ಕೆ.ಶ್ರೀನಿವಾಸ್, ಜಿ.ಪಂ. ಮಾಜಿ ಸದಸ್ಯ ಸಿದ್ದಣ್ಣ, ಗ್ರಾ.ಪಂ. ಸದಸ್ಯ ಗೌಡಪ್ಪ, ಗುಮ್ಮನಹಳ್ಳಿ ರೇವಣ್ಣ, ರಂಗಸ್ವಾಮಿ, ತಿಮ್ಮೇಗೌಡ, ದೊಡ್ಡಕ್ಕ ಬಾಣಗೆರೆ, ದೇವರಹಳ್ಳಿ ಮೂರ್ತಿ, ಬಾಣಗೆರೆ ಈರಣ್ಣ, ಕರಿಯಪ್ಪ ಕುಂಟನಹಟ್ಟಿ, ಹುಲಿಕುಂಟೆ ಜನಾರ್ದನ್ ಸೇರಿದಂತೆ ಹಲವರು ಹಾಜರಿದ್ದರು. ಫೋಟೊ..... 30ಶಿರಾ1: ಶಿರಾ ನಗರದಲ್ಲಿ ತಾಲೂಕು ಕಚೇರಿಗಳಲ್ಲಿ ಕಾಡುಗೊಲ್ಲ, ಹಟ್ಟಿಗೊಲ್ಲ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಎಲ್.ಮರಳೀಧರ ಅವರಿಗೆ ರಾಜ್ಯ ಕಾಡುಗೊಲ್ಲರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಈಶ್ವರಪ್ಪ, ಆರ್.ಕೆ.ಶ್ರೀನಿವಾಸ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.