ಕನ್ನಡಪ್ರಭ ವಾರ್ತೆ ದಾಬಸ್ಪೇಟೆ
ಘಟನಾ ವಿವರ:
ಹಲವು ವರ್ಷಗಳಿಂದ ದಾಬಸ್ಪೇಟೆಯಲ್ಲಿಯೇ ಸಣ್ಣಪುಟ್ಟ ಕೆಲಸ ಮಾಡುತ್ತಾ ಉದ್ಧಾನೇಶ್ವರ ದೇವಾಲಯದ ಪಕ್ಕದ ಫ್ಲೈ ಓವರ್ ಬಳಿ ವಾಸಿಸುತ್ತಿದ್ದ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಹೆಜ್ಜಾಜಿ ಗ್ರಾಮದ ನರಸಿಂಹಮೂರ್ತಿ ಎಂಬ ವ್ಯಕ್ತಿ ಮಲಗಿದ್ದ ವೇಳೆ ಆತನ ತಲೆ ಮೇಲೆ ಶನಿವಾರ ರಾತ್ರಿ 8:30 ರವೇಳೆ ರಾಮನಗರ ಜಿಲ್ಲೆ ಕುದೂರು ಮೂಲದ ಉಮಾದೇವಿ ಎಂಬಾಕೆ ಏಕಾಏಕಿ ಕಲ್ಲಿನಿಂದ ಹಲ್ಲೆ ನಡೆಸಿದ್ದು, ತೀವ್ರ ರಕ್ತಸ್ರಾವದಿಂದ ಒದ್ದಾಟ ನಡೆಸುತ್ತಿದ್ದ ಆತನ ನೆರವಿಗೆ ಸ್ಥಳೀಯರು ಆಗಮಿಸಿ ಆ್ಯಂಬುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾರೆ. ಈ ಸಂಬಂಧ ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೈದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.ಕೊಲೆಗೈದಿರುವ ಆರೋಪಿ ಉಮಾದೇವಿಯು ಮಾನಸಿಕ ಅಸ್ವಸ್ಥೆಯಾಗಿದ್ದು, ಎಲ್ಲೆಂದರಲ್ಲಿ ಓಡಾಟ ನಡೆಸುತ್ತಾ, ಜನರನ್ನು ಕಂಡರೆ ಬೈಗುಳಗಳನ್ನು ಆಡುತ್ತಾ ಓಡಾಡುತ್ತಿದ್ದಳೆಂದು ಸಾರ್ವಜನಿಕರು ತಿಳಿಸಿದ್ದು, ಅವಳ ಈ ನಡೆ ಕಂಡು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ, ಇದೇ ರೀತಿ ಹಲವರು ಫ್ಲೈ ಓವರ್ ಸೇರಿ ಹಲವೆಡೆ ವಾಸಿಸುತ್ತಿದ್ದು ಅವರನ್ನು ನಿರಾಶ್ರಿತ ಕೇಂದ್ರಕ್ಕೆ ರವಾನಿಸಿ ಸಾರ್ವಜನಿಕರ ಆತಂಕ ದೂರ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.