ಕನ್ನಡಪ್ರಭ ವಾರ್ತೆ ಅಥಣಿ
ಶ್ರೀಮಠದಲ್ಲಿ ಶ್ರೀಗಳ ಪಾರ್ಥಿವ ಶರೀರಕ್ಕೆ ಬಸವ ತತ್ವದಂತೆ ಪೂಜಿ ಸಲ್ಲಿಸಿ ಇಂದು ಭಾನುವಾರ ಸಂಜೆ 3 ಗಂಟೆಯವರೆಗೆ ಭಕ್ತರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಾಡಿನ ಹರ ಗುರು ಚರಮೂರ್ತಿಗಳು, ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಯ ಮುಖಂಡರು ಸೇರಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಅಂತಿಮ ದರ್ಶನ ಪಡೆದರು. ಗ್ರಾಮಕ್ಕೆ ಆಗಮಿಸಿದ ಭಕ್ತರಿಗೆ ಗ್ರಾಮಸ್ಥರು ಅಲ್ಲಲ್ಲಿ ಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು.
ಸಂಜೆ ನಾಲ್ಕು ಗಂಟೆಗೆ ವಿವಿಧ ವಾದ್ಯ ಮೇಳಗಳೊಂದಿಗೆ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ಆರಂಭಿಸಿ. ಸಂಜೆ 5ಗಂಟೆಗೆ ಶ್ರೀ ಮಠದಲ್ಲಿ ವಿಧಿ ವಿಧಾನದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.ಶ್ರೀಗಳ ಸಂತಾಪ : ಶ್ರೀ ಮಠದಲ್ಲಿ ಸಂತಾಪ ಸೂಚನೆ ಸಭೆ ಜರುಗಿತು. ನಿಡಸೋಶಿಯ ಪಂಚಮ ಲಿಂಗೇಶ್ವರ ಜಗದ್ಗುರುಗಳು ಮಾತನಾಡಿ, ಮುರುಗೇಂದ್ರ ಸ್ವಾಮೀಜಿ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರದ ಅನೇಕ ಗ್ರಾಮಗಳಲ್ಲಿ ಸಂಚರಿಸಿ ಬಸವ ತತ್ವವನ್ನು ಪ್ರಸಾರ ಮಾಡಿದ್ದಾರೆ. ಅಕ್ಷರ, ಅರಿವು ಮತ್ತು ದಾಸೋಹ ಪರಂಪರೆಯನ್ನು ಮುನ್ನಡೆಸುತ್ತಾ ಭಕ್ತರ ಕಷ್ಟಕಾರ್ಪಣ್ಯಗಳಿಗೆ ಸದಾ ಮಾರ್ಗದರ್ಶನ ನೀಡುತ್ತಿದ್ದರು ಎಂದ ಅವರು, ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದರು.
ಅಥಣಿ ಶಾಸಕ ಲಕ್ಷ್ಮಣ ಸವದಿ, ಶಿವಾನಂದ ಪಾಟೀಲ್ರಿ, ಅಪ್ಪು ಪಟ್ಟಣಶೆಟ್ಟಿ, ಮಂಜುನಾಥ ವಂದಾಲ ಸೇರಿದಂತೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಅನೇಕ ಮುಖಂಡರು ಸಂತಾಪ ಸಭೆಯಲ್ಲಿ ಭಾಗವಹಿಸಿ ಸಂತಾಪ ವ್ಯಕ್ತಪಡಿಸಿದರು.