ಸಂಗೀತ ಸ್ವರ ನಮನ ಕಾರ್ಯಕ್ರಮದಲ್ಲಿ ಸ್ಥಳೀಯ ಅನ್ನದಾನೀಶ್ವರ ಶಾಖಾಮಠದ ಶ್ರೀ
ಸಂಗೀತದಿಂದ ಮನಸ್ಸು ಪ್ರಫುಲ್ಲವಾಗುತ್ತದೆ. ಸಂಗೀತ ಕಲಿಕೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಸ್ಥಳೀಯ ಅನ್ನದಾನೀಶ್ವರ ಶಾಖಾಮಠದ ಮಹಾದೇವ ದೇವರು ಹೇಳಿದರು.
ಪಟ್ಟಣದ ಶ್ರೀ ಅನ್ನದಾನೇಶ್ವರ ಭವನದಲ್ಲಿ ಶ್ರೀ ಪಂಚಾಕ್ಷರಿ ಸಂಗೀತ ಸಾಹಿತ್ಯ ಕ್ರೀಡೆ ಹಾಗೂ ಗ್ರಾಮೀಣಾಭಿವೃದ್ದಿ ಸಂಸ್ಥೆ, ಕುಕುನೂರು ಪಂಚಾಕ್ಷರಿ ಸಂಗೀತ ಪಾಠಶಾಲೆ ಅಭಿಮಾನಿ ಬಳಗ ಹಾಗೂ ಶಿಷ್ಯ ಬಳಗದ ವತಿಯಿಂದ ಕರ್ನಾಟಕ ಕಲಾ ಶ್ರೀ ಪ್ರಶಸ್ತಿ ಪುರಸ್ಕೃತ ತಬಲಾ ಪ್ರವೀಣ ದಿ.ಪಂ. ಶಿವಕುಮಾರ ಕುಕನೂರವರ 9ನೇ ವರ್ಷದ ಪುಣ್ಯಸ್ಮರಣೆ ಹಾಗೂ ಸಂಗೀತ ಸ್ವರ ನಮನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.ಪಟ್ಟಣದಲ್ಲಿ ಸಂಗೀತ ದಿಗ್ಗಜ ತಬಲಾ ಪ್ರವೀಣ ಕುಕನೂರಿನ ಪ್ರತಿಮ ಕಲಾವಿದ ದಿವಂಗತ ಶಿವಕುಮಾರ ಕುಕನೂರ ಅವರ ಹೆಸರಿನಲ್ಲಿ ದೊಡ್ಡದಾದ ಸಂಗೀತ ಭವನ ನಿರ್ಮಾಣವಾಗಬೇಕಿದೆ. ಜೀವನದುದ್ದಕ್ಕೂ ಸಂಗೀತ ಕಲೆ ಮೈಗೂಡಿಸಿಕೊಂಡು ಸಾವಿರಾರು ಶಿಷ್ಯ ಬಳಗ ಹೊಂದಿರುವ ಶಿವಕುಮಾರ ಮೇರು ಕಲಾವಿದರಾಗಿದ್ದರು. ಇಂತಹ ಮಹಾನೀಯ ಕಲಾವಿದರ ಸ್ಮರಣೆ ಪ್ರಯುಕ್ತ ಪ್ರತಿ ವರ್ಷ ಅವರ ಹೆಸರಿನಲ್ಲಿ ಕಾರ್ಯಕ್ರಮವಾಗಬೇಕು. ಸಂಗೀತಗಾರರಿಗೆ ಜಾತಿ, ಧರ್ಮ, ಮತ ಭೇದವಿಲ್ಲ. ಸಂಗೀತ ಒಂದು ದಿವ್ಯಶಕ್ತಿ. ಕಠಿಣ ಪರಿಶ್ರಮದಿಂದ ಮಾತ್ರ ಸಂಗೀತ ಒಲಿಯುತ್ತದೆ ಎಂದರು.ಹಿರಿಯ ಮುಖಂಡ ಬಸವಲಿಂಗಪ್ಪ ಭೂತೆ ಮಾತನಾಡಿ, ಕುಕನೂರಿನ ಪ್ರಮುಖ ರಸ್ತೆಗೆ ಶಿವಕುಮಾರ ಅವರ ಹೆಸರಿಡಬೇಕೆಂದರು.
ಸಂಸ್ಥೆಯ ಅಧ್ಯಕ್ಷ ಮುರಾರಿ ಕುಕನೂರು, ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ, ವೀರಣ್ಣ ಖಂಡಿ, ಡಾ. ಬಸವರಾಜ ಬಣ್ಣದಭಾವಿ, ಶಂಬಣ್ಣ ಯಲಬುರ್ಗಿ, ವೀರಯ್ಯ ತೋಂಟದಾರ್ಯಮಠ, ಕಳಕಪ್ಪ ಕುಂಬಾರ ಇತರರಿದ್ದರು.