ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಬದುಕಿನ ಜಂಜಾಟದಲ್ಲಿ ಸದಾ ಮುಳುಗಿರುವವರಿಗೆ ಸಂಗೀತ ಸಂತೋಷ ಸಮಾಧಾನ ನೀಡುವ ಸಂಜೀವಿನಿಯಾಗಿದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಇತ್ತೀಚೆಗೆ ನಡೆದ ಸಂಗೀತ ಸೌರಭ ಹಾಗೂ ಸಂಗೀತ ದಿಗ್ಗಜರಿಗೆ ಸತ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಗದುಗಿನ ಪಂಡಿತ ಡಾ.ರಾಜಗುರು ಗುರುಸ್ವಾಮಿ ಕಲಕೇರಿ ಹಾಗೂ ಧಾರವಾಡದ ಪಂಡಿತ ಡಾ.ಎಂ.ವೆಂಕಟೇಶಕುಮಾರ್ ಇವರಿಗೆ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ವಿಶೇಷ ಸತ್ಕಾರ ಹಾಗೂ ಗೌರವ ಗುರುರಕ್ಷೆ ನೀಡಲಾಗಿದೆ. ಪ್ರತಿ ವರ್ಷದ ಜಯಂತಿ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಉಭಯ ಸಂಗೀತ ದಿಗ್ಗಜರು ಎರಡು ಗಂಟೆಗಳ ವಿಶೇಷ ಸಂಗೀತ ನಡೆಸಿಕೊಡುವುದಾದರೆ ಅದಕ್ಕೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಪಂ.ಡಾ.ಎಂ.ವೆಂಕಟೇಶ ಕುಮಾರ್ ಅವರು ಬಸಂತರಾಗ, ದ್ರುತ ತಾಳದಲ್ಲಿ ಪಶುಪತೇ ಗಿರಿಜಾಪತಿ, ಹಾನಗಲ್ ಕುಮಾರಸ್ವಾಮಿಗಳಿಂದ ವಿರಚಿತ ‘ಸುಶಾಂತ ಗುರುವರೇಣ್ಯ ರೇಣುಕಾರ್ಯಭೋ’ ಗೀತೆಯನ್ನು ಭೀಮಪಲಾಸ ರಾಗ ಜಪ್ ತಾಳದಲ್ಲಿ ನಂತರ ಗದಗಿನ ಕವಿ ಪುಟ್ಟರಾಜ ಗವಾಯಿಗಳಿಂದ ವಿರಚಿತ ವೀರಶೈವದ ಜಗದ್ಗುರು ಪಂಚಾಚಾರ್ಯರ ನಮಿಸುವೆನು’ ಹಾಡನ್ನು ರಾಗೇಶ್ರೀ ರಾಗ ಕೇರವ ತಾಳದಲ್ಲಿ ಅಮೋಘವಾಗಿ ಪ್ರಸ್ತುತಪಡಿಸಿ ಜನಮನ ಸೂರೆಗೊಂಡರು.ನಂತರ ಪಂ.ಡಾ.ರಾಜಗುರು ಗುರುಸ್ವಾಮಿ ಕಲಕೇರಿ ಅವರು ‘ಮಲತ್ರಯಗಳನು ತೊಲಗಿಸುವಂಥ ಜಾಣ್ಮೆಯುಳ್ಳವನೇ ವೀರಶೈವನು’ ಅಲ್ಲಮಪ್ರಭುಗಳ ವಚನವನ್ನು ಜೋಗ ರಾಗ ತೀನತಾಳದಲ್ಲಿ ಹಾಗೂ ತಮ್ಮ ಸ್ವರಚಿತ ಕವನ ‘ಅಂದಿಂದು ಕಂದದಾ ಮುಂದೆಂದು ನಂದದಾ ಪಂಚ ಪೀಠಾಧೀಶರ ಬೆಳಕು’ ಗೀತೆಯನ್ನು ಚಾಂದ ರಾಗದಲ್ಲಿ ದಾದ್ರಾ ತಾಳದಲ್ಲಿ ಪ್ರಸ್ತುತಪಡಿಸಿ ಶ್ರೋತೃಗಳ ಮನಸ್ಸಿಗೆ ಮುದ ನೀಡಿದರು. ಗದಗಿನ ಶರಣಯ್ಯನವರು ತಬಲಾ, ಪಂ.ಬಸವರಾಜ ಹಿರೇಮಠ ಹರ್ಮೋನಿಯಂ ಸಾಥ್ ನೀಡಿದರು.
ಎಡೆಯೂರು ರೇಣುಕ ಶಿವಾಚಾರ್ಯರು, ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು, ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ಗದಗಿನ ಗಾನಭೂಷಣ ವೀರೇಶ ಕಿತ್ತೂರ, ಡಾ. ಗುರುಪಾದಯ್ಯ ಸಾಲಿಮಠ ಇದ್ದರು.