ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ದಸರಾ ಅಂಗವಾಗಿ ಶ್ರೀರಂಗ ವೇದಿಕೆಯಲ್ಲಿ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡ ನಡೆಸಿಕೊಟ್ಟ ಸಂಗೀತ ರಸಸಂಜೆ ಜನರನ್ನು ಸಮ್ಮೋಹನ ಗೊಳಿಸಿತು.ಆರಂಭದಲ್ಲಿ ರೈತರ ಜೀವನಾಡಿ ಕಾವೇರಿಗೆ ನಮಿಸಿ ಕಾವೇರಿಯ ವಿಶೇಷ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದ ಗಾಯಕ ಡಾ.ಕಿಕ್ಕೇರಿ ಇಡೀ ಕಾರ್ಯಕ್ರಮವನ್ನು ರೈತರಿಗೆ ಸಮರ್ಪಿಸಿದರು. ಉಳುವಾ ಯೋಗಿಯ ನೋಡಲ್ಲಿ ಹಾಡನ್ನು ಹಾಡಿ ನೆರೆದಿದ್ದ ಸಾವಿರಾರು ಪ್ರೇಕ್ಷಕರಿಂದಲೂ ಉಳುವಾ ಯೋಗಿಯ ನೋಡಲ್ಲಿ ಎಂದು ಹಾಡಿಸಿ ರೋಮಾಂಚನಗೊಳಿಸಿದರು.
ನಂತರ ಪುರಂದರ ದಾಸರ ದಾರಿ ಯಾವುದಯ್ಯ ವೈಕುಂಠಕೆ ಗೀತೆಯನ್ನು ಹಾಡಿ ಶ್ರೀರಂಗನಾಥರಿಗೆ ಸಮರ್ಪಿಸಿದರು. ಕೋರಿಕೆ ಮೇರೆಗೆ ರಾಷ್ಟ್ರಕವಿ ಕುವೆಂಪು ಅವರ ಸತ್ಯಾವತಾರ ಗೀತೆ ನೆರೆದಿದ್ದ ಪ್ರೇಕ್ಷಕರ ಚಪ್ಪಾಳೆಯೊಂದಿಗೆ ವಿಲೀನವಾಯಿತು.ಶಿಶುನಾಳ ಷರೀಫರ ಸುಗ್ಗಿ ಮಾಡೋಣು ಬಾರವ್ವಾ, ದ.ರಾ.ಬೇಂದ್ರೆಯವರ ಒಂದೇ ಒಂದೇ ಕರ್ನಾಟಕ ಒಂದೇ, ಕುರುಡು ಕಾಂಚಾಣ ಕುಣಿಯುತಲಿತ್ತು, ಆನಂದ ಕಂದರ ನಾ ಸಂತಿಗಿ ಹೋಗಿನ್ನಿ, ಮಂಡ್ಯ ಜಿಲ್ಲೆಯ ಹೆಮ್ಮೆಯ ಕವಿ ಕೆಎಸ್.ನರಸಿಂಹ ಸ್ವಾಮಿ ಅವರ ಒಂದಿರುಳು ಕನಸಿನಲಿ, ಮತ್ತಿತರ ಗೀತೆಗಳು ಜನಮನ ಗೆದ್ದಿತು.
ಸಹ ಗಾಯನದಲ್ಲಿ ಕಲಾವಿದರಾದ ಶಶಿಕಲಾ, ಪೂರ್ಣಿಮಾ, ಲಿಖಿತ್, ಕೃಷ್ಣ, ಅದ್ಭುತ ಸಾಥ್ ನೀಡಿದರು. ಅಭಿಷೇಕ್ , ರಾಮಪ್ರಸಾದ್ ತಂಡದವರ ವಾದ್ಯ ಸಹಕಾರ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತ್ತು.ಅ.2ರಂದು ಮಂಡ್ಯ ದಸರಾ
ಕನ್ನಡಪ್ರಭ ವಾರ್ತೆ ಮಂಡ್ಯಪ್ರತಿ ವರ್ಷದಂತೆ ಈ ಬಾರಿಯೂ ಮಂಡ್ಯ ಯೂತ್ ಗ್ರೂಪ್ನಿಂದ ಅನಿಲ್ ಆನಂದ್ ಡ್ರೀಮ್ ವರ್ಕ್ಸ್ ಸಹಯೊಗದೊಂದಿಗೆ ಹನ್ನೊಂದನೇ ಬಾರಿಗೆ ಅ.2ರ ವಿಜಯದಶಮಿ ದಿನದಂದು ಮಂಡ್ಯ ದಸರಾ ನಡೆಸಲಾಗುವುದು ಎಂದು ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ತಿಳಿಸಿದ್ದಾರೆ.
ನಗರದ ಶ್ರೀಕಾಳಿಕಾಂಬ ದೇವಾಲಯದ ಆವರಣದಲ್ಲಿರುವ ಗಜೇಂದ್ರ ಮೋಕ್ಷ ಕೊಳದ ಬಳಿ ಸಂಪ್ರದಾಯದಂತೆ ಮಧ್ಯಾಹ್ನ 3:50ಕ್ಕೆ ಸಲ್ಲುವ ಕುಂಭಲಗ್ನದಲ್ಲಿ ಬನ್ನಿಮರಕ್ಕೆ ಪೂಜೆ ನೆರವೇರಿಸಲಾಗುವುದು. ನಂತರ ಶ್ರೀಚಾಮುಂಡೇಶ್ವರಿ ದೇವಿಯನ್ನು ಜಾನಪದ ಕಲಾತಂಡದೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದ್ದಾರೆ.ನಾಗರಹೊಳೆಯ ಕಾಡು ಜನರ ನೃತ್ಯ, ಪೊನ್ನಂಪೇಟೆಯ ಎರವರ ಕುಣಿತ, ಕೇರಳದ ಚಂಡೆ, ಭದ್ರಕಾಳಿ ಮತ್ತು ಅಘೋರಿಯ ವೀರಗಾಸೆ, ಮಹಿಳಾ ಕೋಲಾಟ, ಬಂಡೂರು ಕುರಿ, ಪೂಜಾ ಕುಣಿತ, ಚಿಲಿಪಿಲಿ ಗೊಂಬೆ, ಡೊಳ್ಳು ಕುಣಿತ, ಕೀಲು ಕುದುರೆ, ಲಗಾನ್ ಬ್ಯಾಂಡ್, ಪಟ ಕುಣಿತ, ಸೋಮನ ಕುಣಿತ, ಶ್ರೀರಂಗಪಟ್ಟಣ ಅಶೋಕ್ ಡ್ರಮ್ಸ್, ಬೆಂಕಿ ಭರಾಟೆ ಮತ್ತಿತರ ತಂಡಗಳು ಮಂಡ್ಯ ದಸರಾ ಮೆರವಣಿಗೆಯಲ್ಲಿ ಗಮನ ಸೆಳೆಯಲಿವೆ. ಆಸಕ್ತ ತಂಡಗಳು 8073229050 ರಕ್ಷಿತ್ ರನ್ನು ಸಂಪರ್ಕಿಸಲು ಕೋರಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.