ಟೈರ್ ಬೆಂಕಿ ಹಚ್ಚಿ ಆಕ್ರೋಶ । ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕನ್ನಡಪ್ರಭ ವಾರ್ತೆ ಮಸ್ಕಿ
ಪಟ್ಟಣದಲ್ಲಿ ಬೆಳಗ್ಗೆ ಅಲ್ಲಲ್ಲಿ ಕೆಲವು ಹೊಟೇಲ್ಗಳು ತೆರೆದಿದ್ದವು. ಪ್ರತಿಭಟನಕಾರರು ತೆರಳಿ ಅಂಗಡಿಗಳನ್ನು ಮುಚ್ಚಿ ಸಹಕರಿಸುವಂತೆ ಮನವಿ ಮಾಡುತ್ತಿದ್ದ ದೃಶ್ಯ ಕಂಡು ಬಂತು. ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಕುಳಿತು ಪ್ರತಿಭಟನಕಾರರು ಪ್ರತಿಭಟಿಸಿದರು.
ಅಶೋಕ ವೃತ್ತದಲ್ಲಿ ಪ್ರತಿಭಟನಾಕಾರರು ಟೈರ್ಗೆ ಬೆಂಕಿ ಹಚ್ಚಿ ಒಳ ಮೀಸಲಾತಿ ಜಾರಿ ಗೊಳಿಸುವಂತೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಸದಾಶಿವ ವರದಿ ಜಾರಿಗೆ ಆಗ್ರಹಿಸಿದರು.ಶೋಕ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸಾಹಿತಿ ಸಿ.ದಾನಪ್ಪ, ದೊಡ್ಡಪ್ಪ ಮುರಾರಿ, ಹನುಮಂತಪ್ಪ ವೆಂಕಟಾಪೂರ, ಮಲ್ಲಯ್ಯ ಬಳ್ಳಾ, ಮೌನೇಶ ಮುರಾರಿ ಸೇರಿ ಹಲವಾರು ಮುಖಂಡರು ಮಾತನಾಡಿ, ಒಳ ಮೀಸಲಾತಿ ಜಾರಿ ಆಗುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ಗುರುವಾರ ಒಳ ಮೀಸಲಾತಿ ಜಾರಿಗಾಗಿ ಮಸ್ಕಿ ತಾಲೂಕು ಬಂದ್ಗೆ ಕರೆ ನೀಡಿ ಪ್ರತಿಭಟನೆ ನಡೆಸುವ ವೇಳೆ ರಸ್ತೆ ಮೂಲಕ ಸಂಚರಿಸುತ್ತಿದ್ದ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರ ಕಾರನ್ನು ತಡೆದ ಪ್ರತಿಭಟನಕಾರರು ಒಳ ಮೀಸಲಾತಿ ಜಾರಿ ಮಾಡಲು ವಿಳಂಭ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಕಾರಿನಿಂದ ಇಳಿದ ಶಾಸಕರು ಹೋರಾಟ ಸಮಿತಿಯ ಸದಸ್ಯರೊಂದಿಗೆ ಮೀಸಲಾತಿ ಕುರಿತು ಚರ್ಚಿಸಿದರು.