ಸಿಎಂ ಪತ್ನಿಯ ಶಾಪ ಬಿಜೆಪಿಯವರಿಗೆ ತಟ್ಟುತ್ತೆ: ಶಾಸಕ ನಂಜೇಗೌಡ

KannadaprabhaNewsNetwork | Published : Oct 4, 2024 1:11 AM

ಸಾರಾಂಶ

ಸಿದ್ದರಾಮಯ್ಯ ಅವರ ಪತ್ನಿಗೆ ಅರಿಶಿಣ- ಕುಂಕುಮ ರೂಪದಲ್ಲಿ ಕೊಟ್ಟಿರುವ ಜಾಗವನ್ನು ಇಟ್ಟುಕೊಂಡು ಬಿಜೆಪಿ- ಜೆಡಿಎಸ್ ಆರೋಪ ಮಾಡುತ್ತಿವೆ, ಇದು ಬಿಟ್ಟು ಬೇರೆ ಏನಾದರೂ ಹಗರಣ ಇದ್ದರೆ ತೋರಿಸಿ, ಸಿದ್ದರಾಮಯ್ಯನವರು ಬಡವರಿಗೆ, ಸಾಮಾನ್ಯ ವರ್ಗದವರಿಗೆ, ಎಲ್ಲಾ ಜಾತಿ ಜನಾಂಗದವರಿಗೆ, ಎಲ್ಲಾ ಧರ್ಮದವರಿಗೆ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರ

ಸಿದ್ದರಾಮಯ್ಯನವರ ೪೦ ವರ್ಷಗಳ ರಾಜಕೀಯ ಜೀವನದಲ್ಲಿ ಒಂದು ದಿನವೂ ಕಾರ್ಯಕ್ರಮದಲ್ಲಿ ಅವರ ಪತ್ನಿ ಕಾಣಿಸಿಕೊಂಡಿಲ್ಲ, ಯಾವುದೇ ರಾಜಕಾರಣಿಯ ಪತ್ನಿಯರು ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಾರೆ, ನನ್ನ ಶ್ರೀಮತಿಯವರೂ ಸಹ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ನನ್ನ ಜೊತೆ ಕುಳಿತುಕೊಳ್ಳುತ್ತಾರೆ, ಆದರೆ ಸಿದ್ದರಾಮಯ್ಯನವರ ಪತ್ನಿ ಮನೆ ಬಿಟ್ಟು ಹೊರಗೆ ಬಂದಿಲ್ಲ, ಆ ತಾಯಿಯ ಶಾಪ ಬಿಜೆಪಿಯವರಿಗೆ ತಟ್ಟುತ್ತದೆ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಮಾಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರ ಪತ್ನಿಗೆ ಅರಿಶಿಣ- ಕುಂಕುಮ ರೂಪದಲ್ಲಿ ಕೊಟ್ಟಿರುವ ಜಾಗವನ್ನು ಇಟ್ಟುಕೊಂಡು ಬಿಜೆಪಿ- ಜೆಡಿಎಸ್ ಆರೋಪ ಮಾಡುತ್ತಿವೆ, ಇದು ಬಿಟ್ಟು ಬೇರೆ ಏನಾದರೂ ಹಗರಣ ಇದ್ದರೆ ತೋರಿಸಿ, ಸಿದ್ದರಾಮಯ್ಯನವರು ಬಡವರಿಗೆ, ಸಾಮಾನ್ಯ ವರ್ಗದವರಿಗೆ, ಎಲ್ಲಾ ಜಾತಿ ಜನಾಂಗದವರಿಗೆ, ಎಲ್ಲಾ ಧರ್ಮದವರಿಗೆ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ. ಆದರೆ ಬಿಜೆಪಿಯವರು ಆ ಸಿದ್ದರಾಮಯ್ಯನವರ ಪತ್ನಿ, ತಾಯಿಯ ಹೆಸರೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ, ಈಗ ತಕ್ಷಣಕ್ಕೆ ಬಿಜೆಪಿಯವರು ಖುಷಿ ಪಡುತ್ತಿರಬಹುದು, ಆದರೆ ಮುಂದಿನ ದಿನಗಳಲ್ಲಿ ಆ ತಾಯಿಯ ಶಾಪ ಬಿಜೆಪಿಯವರಿಗೆ ತಟ್ಟುತ್ತದೆ ಎಂದು ಕಿಡಿಕಾರಿದರು.

ಮುಡಾ ಹಗರಣ ವಿಚಾರವಾಗಿ ವಿನ:ಕಾರಣ ಸಿಎಂ ವಿರುದ್ಧ ಆರೋಪಿದ್ದಾರೆ, ಇಡಿ ತನಿಖೆ ನಡೆಸಲು ಇಲ್ಲೇನು ಸಾವಿರಾರು ಕೋಟಿ ಅವ್ಯವಹಾರ ಆಗಿಲ್ಲ.

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ- ಜೆಡಿಎಸ್ ಒತ್ತಾಯ ಮಾಡುತ್ತಿವೆ, ಸಿದ್ದರಾಮಯ್ಯ ಅವರು ಕಾನೂನು ಪ್ರಕಾರ ಹೋರಾಟ ಮಾಡುತ್ತಾರೆ. ಅವರ ಪರ ಕಾಂಗ್ರೆಸ್ ಹೈಕಮಾಂಡ್, ಎಐಸಿಸಿ, ಕೆಪಿಸಿಸಿ, ೧೩೬ ಶಾಸಕರು ಸೇರಿದಂತೆ ಎಲ್ಲರೂ ಬೆನ್ನೆಲುಬಾಗಿ ನಿಂತಿದ್ದಾರೆ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ಪ್ರಮೇಯ ಬರುವುದಿಲ್ಲ. ಇಂತಹ ನಾಯಕರು ಸಿಎಂ ಆಗಿ ಮುಂದುವರಿಯಬೇಕು. ಸಿದ್ದರಾಮಯ್ಯನವರು ಯಾರಿಗೂ ಮೋಸ ಮಾಡಿಲ್ಲ. ಬಿಜೆಪಿ ಸರ್ಕಾರ ಇದ್ದಾಗಲೇ ಆ ನಿವೇಶನಗಳನ್ನು ಕೊಟ್ಟಿರುವುದು. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ವೀಕ್ ಆಗಲ್ಲ. ನಾವೆಲ್ಲಾ ಅವರ ಪರ ನಿಂತಿದ್ದೇವೆ. ನಮ್ಮ ಸರ್ಕಾರವೇ ತನಿಖೆ ಮಾಡಿಸುತ್ತಿದೆ. ಆದರೆ ಬಿಜೆಪಿಯವರು ಅವರದೇ ಏಜೆನ್ಸಿಗಳ ಮೂಲಕ ತನಿಖೆ ಮಾಡಿಸುತ್ತಿದ್ದಾರೆ. ಏನೇ ಮಾಡಿದರೂ ಅವರು ಯಶಸ್ವಿಯಾಗುವುದಿಲ್ಲ ಎಂದರು.ತಾವೂ ಸಚಿವ ಸ್ಥಾನದ ಆಕಾಂಕ್ಷಿಯೇ ಎಂಬ ಬಗ್ಗೆ ಉತ್ತರಿಸಿ, ನಾನು ಸಚಿವ ಸ್ಥಾನವನ್ನು ಕೇಳಿಕೊಂಡು ಹೋಗುವುದಿಲ್ಲ. ನನ್ನ ಕೆಲಸ ಗುರುತಿಸಿ ಸಚಿವ ಸ್ಥಾನ ಕೊಟ್ಟರೆ ಗೌರವಯುತವಾಗಿ ನಿಭಾಯಿಸಿಕೊಂಡು ಹೋಗುತ್ತೇನೆ. ನಾನೂ ಸಹ ಕೆಳ ಹಂತದ ರಾಜಕೀಯದಿಂದ ಬಂದಿದ್ದೇನೆ. ಪಕ್ಷ ಕೊಟ್ಟಿರುವ ಜವಾಬ್ದಾರಿ ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಬಂದಾಗ ನನ್ನನ್ನು ಗುರುತಿಸುತ್ತಾರೆ ಎಂದು ನಾನು ನಂಬಿದ್ದೇನೆ. ಮಾಲೂರು ತಾಲೂಕಿಗೆ ಒಳ್ಳೆಯ ಯೋಜನೆಗಳನ್ನು ತಂದಿದ್ದೇನೆ. ೧೨೦೦ ಕೋಟಿ ರು. ವೆಚ್ಚದ ಯೋಜನೆಗಳಿಗೆ ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯನವರಿಂದ ಗುದ್ದಲಿ ಪೂಜೆ ಮಾಡಿಸುತ್ತೇನೆ. ಕ್ಷೇತ್ರದ ಜನತೆಯ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ ಎಂದರು.

Share this article