- ತಾಯಿಗೆ ಆರೋಗ್ಯ ಸುಧಾರಣೆ । 3 ದಶಕಗಳಿಂದ ಆರಾಧಕರು - - - ಹೊನ್ನಾಳಿ: ನ್ಯಾಮತಿ ತಾಲೂಕಿನ ತುಂಗಭದ್ರಾ ನದಿ ಮಧ್ಯದಲ್ಲಿರುವ ಕುರುವ ಗಡ್ಡೆ ರಾಮೇಶ್ವರ ದೇವಸ್ಥಾನದ ಶ್ರೀ ದುರ್ಗಾದೇವಿಗೆ ಭದ್ರಾವತಿ ತಾಲೂಕು ಸಿದ್ಲೀಪುರದ ಮುಸ್ಲಿಂ ಸಮುದಾಯದ ಕುಟುಂಬದವರು 3 ದಶಕಗಳಿಂದ ದುರ್ಗಾದೇವಿ ಆರಾಧಕರಾಗಿದ್ದಾರೆ. ರಥೋತ್ಸವ ಹಿನ್ನೆಲೆ ದೇವಾಲಯಕ್ಕೆ ಬಂದು ಹರಕೆ ತೀರಿಸುವ ಮೂಲಕ ಭಾವೈಕ್ಯತೆಗೂ ಸಾಕ್ಷಿಯಾಗಿದ್ದಾರೆ.
ಭದ್ರಾವತಿ ತಾಲೂಕಿನ ಸಿದ್ಲೀಪುರ ಗ್ರಾಮದ ಮುಸ್ಲಿಂ ಭಕ್ತ ಆರೀಫ್ ಉಲ್ಲಾ ಹೇಳುವಂತೆ, ಪ್ರತಿ ವರ್ಷ ಯುಗಾದಿಯಂದು ನಡೆಯುವ ಕುರುವ ಗಡ್ಡೆ ರಾಮೇಶ್ವರ ರಥೋತ್ಸವಕ್ಕೆ 3 ದಶಕಗಳಿಂದ ಕುಟುಂಬ ಸಮೇತರಾಗಿ ಬರುತ್ತಿದ್ದೇವೆ. ತಮ್ಮ ತಾಯಿಗೆ ಆರೋಗ್ಯ ಸರಿ ಇಲ್ಲದ ಸಮಯದಲ್ಲಿ ದುರ್ಗಾದೇವಿಗೆ ಹರಕೆ ಹೊತ್ತಿದ್ದೆವೆ. ಬಳಿಕ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿತು. ಅಲ್ಲದೇ, ನಮ್ಮ ವ್ಯಾಪಾರ, ವ್ಯವಹಾರಗಳು ಕೂಡ ಚೆನ್ನಾಗಿ ನಡೆಯಲಾರಂಭಿಸಿವೆ. ಇದಕ್ಕೆಲ್ಲ ಆ ದೇವಿಯ ಮೇಲಿನ ನಂಬಿಕೆಯೇ ಕಾರಣ. ಹಾಗಾಗಿ ಪ್ರತಿ ವರ್ಷ ದೇವಿಗೆ ಬೆಳ್ಳಿಯ ವಸ್ತುಗಳನ್ನು ಹರಕೆ ರೂಪದಲ್ಲಿ ಅರ್ಪಿಸುತ್ತಿದ್ದೇವೆ ಎಂದು ಮುಸ್ಲಿಂ ಭಕ್ತ ಆರೀಫ್ ಉಲ್ಲಾ, ತಾಯಿ ಪ್ಯಾರಿಜಾನ್ ಮತ್ತು ಕುಟುಂಬದವರು ತಿಳಿಸಿದರು.ಪ್ರತಿವರ್ಷ ತಪ್ಪದೇ ರಥೋತ್ಸವಕ್ಕೆ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿ, ಹರಕೆ ಅರ್ಪಿಸುತ್ತಾರೆ. ದೇವಿಯ ಮೇಲೆ ಅಪಾರ ಭಕ್ತಿ, ನಂಬಿಕೆ ಹೊಂದಿದ್ದಾರೆ ಎಂದು ಕುರುವ ಗಡ್ಡೆ ರಾಮೇಶ್ವರ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಸುರೇಶ ನವುಲೆ, ಪುರೋಹಿತರಾದ ಕುಮಾರ ಭಟ್ ಸಹ ಹೇಳಿದರು.
ಕುರುವ ಗಡ್ಡೆ ರಾಮೇಶ್ವರ ರಥೋತ್ಸವ ಅಂಗವಾಗಿ ಓಕಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ದೇವರು ಕ್ಷೇತ್ರಕ್ಕೆ ಆಗಮಿಸುವುದು, ರಾಂಪುರ ಬೃಹನ್ಮಠದ ಸದ್ಗರು ಹಾಲಸ್ವಾಮಿ ಅವರ ಸಾನ್ನಿಧ್ಯದಲ್ಲಿ ಕಾರ್ಣಿಕ ಭವಿಷ್ಯವಾಣಿ, ರೊಟ್ಟಿ, ಬುತ್ತಿ ಹಂಚಿಕೆ ನಡೆಯುವುದು ಇಲ್ಲಿನ ವಿಶೇಷ. ಏ.2ರಂದು ಕುರುವ ಗ್ರಾಮಸ್ಥರಿಂದ ದುರ್ಗಾದೇವಿಗೆ ಉಡಿಅಕ್ಕಿ ಸಮರ್ಪಣೆ ಹಾಗೂ ಸಾಮೂಹಿಕ ಅನ್ನ ಸಂತರ್ಪಣೆ ಇದೆ.- - -
-1ಎಚ್.ಎಲ್.ಐ1:ಕುರುವ ಗಡ್ಡೆ ರಾಮೇಶ್ವರ ದೇವಸ್ಥಾನ ದುರ್ಗಮ್ಮ ದೇವಿಗೆ ಸಿದ್ಲೀಪುರದ ಆರಿಫ್ ಉಲ್ಲಾ ಕುಟುಂಬದವರು ಯುಗಾದಿ ರಥೋತ್ಸವಕ್ಕೆ ಬೆಳ್ಳಿ ಆಭರಣಗಳನ್ನು ಹರಕೆಯಾಗಿ ದೇವಸ್ಥಾನ ಸಮಿತಿಯವರಿಗೆ ಅರ್ಪಿಸಿ, ಭಕ್ತಿ ಹಾಗೂ ಸೌಹಾರ್ದತೆಗೆ ಸಾಕ್ಷಿಯಾದರು.