- ಜನತಾ ಬಜಾರ್ ಸಭಾಂಗಣದಲ್ಲಿ ರಾಜ್ಯಮಟ್ಟದ ವಿಶೇಷ ಕಾರ್ಯದಕ್ಷತೆ ಶಿಬಿರ ಉದ್ಘಾಟಿಸಿ ಶೋಭಾ ಸಲಹೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಈ ಸ್ಪರ್ಧಾತ್ಮಕ ಯುಗದ ಸಹಕಾರ ಕ್ಷೇತ್ರದಲ್ಲಿ ನಿತ್ಯ ಆಗುತ್ತಿರುವ ಬದಲಾವಣೆಗಳನ್ನು ತಿಳಿಯಲು ಎಷ್ಟೇ ತರಬೇತಿ ಪಡೆದರೂ ಸಾಲದಂತಾಗಿದೆ. ಸಹಕಾರ ಕ್ಷೇತ್ರದ ಸಿಬ್ಬಂದಿ ಹೊಸತನ್ನು ತಿಳಿಯಲು ಸದಾ ಉತ್ಸುಕರಾಗಿರಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿರ್ದೇಶಕಿ ಶೋಭಾ ಉಮೇಶಕುಮಾರ ಹೇಳಿದರು.ನಗರದ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆ ನಿಯಮಿತ ಲಿ. (ಜನತಾ ಬಜಾರ್) ಸಭಾಂಗಣದಲ್ಲಿ ಬುಧವಾರ ಬೆಂಗಳೂರಿನ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತದಿಂದ ಜಿಲ್ಲೆಯ ಪತ್ತಿನ ಸಹಕಾರ ಸಂಘ, ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳ ಅಧ್ಯಕ್ಷರು, ವ್ಯವಸ್ಥಾಪಕರಿಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಒಂದು ದಿನದ ವಿಶೇಷ ಕಾರ್ಯದಕ್ಷತೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಕ್ಷೇತ್ರದಲ್ಲಿ ನಿತ್ಯವೂ ಹೊಸ ಬದಲಾವಣೆ ಆಗುತ್ತಿದ್ದು, ಕಾಲಕ್ಕೆ ತಕ್ಕಂತೆ ಬದಲಾವಣೆ ಆಗುತ್ತಿರುವುದನ್ನು ಅರಿಯಲು ಪ್ರತಿಯೊಬ್ಬ ಸಿಬ್ಬಂದಿ ಉತ್ಸುಕರಾಗಿಸಬೇಕು. ಸಹಕಾರ ಸಂಘಘಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಗ್ರಾಹಕರೊಂದಿಗೆ ಉತ್ತಮವಾಗಿ ವ್ಯವಹರಿಸಿದರೆ ಸಂಘಗಳು ಪ್ರಗತಿ ಹೊಂದಲು ಸಾಧ್ಯ. ಅಂತಹ ಮೂಲ ತತ್ವಗಳನ್ನು ಇಂತಹ ತರಬೇತಿ ಶಿಬಿರ, ಕಾರ್ಯಾಗಾರಗಳು ಕಲಿಸಿಕೊಡಲು ಸಹಕಾರಿ ಎಂದು ತಿಳಿಸಿದರು.ಜಿಲ್ಲಾ ಸಹಕಾರ ಒಕ್ಕೂಟ ನಿರ್ದೇಶಕ ಆರ್.ಜಿ. ಶ್ರೀನಿವಾಸಮೂರ್ತಿ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹಕಾರ ಕ್ಷೇತ್ರದ ಮಹತ್ವ ಅರಿತು, ಸಹಕಾರ ಸಚಿವಾಲಯವನ್ನೇ ಸ್ಥಾಪಿಸಿದ್ದಾರೆ. ಸಚಿವಾಲಯದ ಸೂಚನೆಯಂತೆ ಈಗಾಗಲೇ ದೇಶಾದ್ಯಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಗಣಕೀಕರಣ ವ್ಯವಸ್ಥೆಗೆ ಒಳಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಹಕಾರ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಿರುವುದು ಸ್ವಾಗತಾರ್ಹ. ಸಂಘಗಳು ಅಭಿವೃದ್ಧಿ ಹೊಂದಲು ಇಂತರ ಕಾರ್ಯಾಗಾರ ಸಹಕಾರಿ ಎಂದರು.
ಸಹಕಾರ ಸಂಘಗಳ ಉಪ ನಿಬಂಧಕ ಟಿ.ಮಧು ಶ್ರೀನಿವಾಸ ಮಾತನಾಡಿ, ಜಿಲ್ಲೆಯ ಪತ್ತಿನ ಸಹಕಾರ ಸಂಘಗಳು ಈಗಾಗಲೇ ಗಣಕೀಕರಣಗೊಂಡಿವೆ. ಆದರೆ, ಈಚಿನ ಸೈಬರ್ ಅಪರಾಧದಂತದ ಮೋಸದ ಪ್ರಕರಣ ಹೆಚ್ಚುತ್ತಿವೆ. ಅದನ್ನು ತಡೆಯುವುದು ಎಲ್ಲ ಸಹಕಾರ ಸಂಘಗಳ ಸಿಬ್ಬಂದಿ ಆದ್ಯ ಕರ್ತವ್ಯವಾಗಿವೆ. ಸಂಘದ ಸಾಫ್ಟ್ವೇರ್ ಎಷ್ಟು ಸುರಕ್ಷಿತ ಎಂಬುದನ್ನು ತಿಳಿಯುವುದು ಅತ್ಯವಶ್ಯಕ. ಕ್ರಮಾನುಸಾರ ಸೆಕ್ಯೂರಿಟಿ ಆಡಿಟ್ ಅಳವಡಿಸಿಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮಾತನಾಡಿ, ಜಿಲ್ಲೆಯ ಬಹುತೇಕ ಪತ್ತಿನ ಸಂಘಗಳು ಆರ್ಥಿಕವಾಗಿ ಸಬಲವಾಗಿವೆ. ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಇದಕ್ಕಾಗಿ ತರಬೇತಿ ನೀಡಲಾಗುತ್ತಿದೆ ಎಂದರು.
ಒಕ್ಕೂಟ ಉಪಾಧ್ಯಕ್ಷ ಬೇತೂರು ಟಿ.ರಾಜಣ್ಣ, ನಿರ್ದೇಶಕರಾದ ಡಿ.ಎಂ. ಮುರುಗೇಂದ್ರಯ್ಯ, ಕೆ.ಜಿ.ಸುರೇಶ, ಸಾಗರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಕೋಡಿಹಳ್ಳಿ, ಸಿಬ್ಬಂದಿ ಕೆ.ಎಂ.ಜಗದೀಶ ಕುರುಡಿಮಠ, ವಿ.ರಂಗನಾಥ, ಆರ್.ಸ್ವಾಮಿ, ಶಿಕ್ಷಕ ಕೆ.ಎಚ್.ಸಂತೋಷಕುಮಾರ ಇತರರು ಇದ್ದರು.ಕಾರ್ಯಕ್ರಮದಲ್ಲಿ ಸುಷ್ಮಾ ಮತ್ತು ತಂಡ ಪ್ರಾರ್ಥಿಸಿತು. ಶಿವಮೊಗ್ಗದ ಸನ್ನದು ಲೆಕ್ಕ ಪರಿಶೋಧಕ ಬಿ.ವಿ.ರವೀಂದ್ರನಾಥ ಸಹಕಾರ ಸಂಸ್ಥೆಗಳಲ್ಲಿ ಸಾಲ ನಿರ್ವಹಣೆ ವಿಷಯವಾಗಿ, ಹೊಸಪೇಟೆಯ ಸಹಕಾರ ಸಂಘಗಳ ಸಹಾಯಕ ನಿಬಂಧಕ ಲಿಯಾಖತ್ ಅಲಿ ಸಹಕಾರ ಸಂಘಗಳ ಚುನಾವಣೆ ಪ್ರಕ್ರಿಯೆ ಹಾಗೂ ಸಹಕಾರ ಸಂಘಗಳಿಗೆ ಅನ್ವಯಿಸುವ ವಿವಿಧ ಕಾಯ್ದೆ ಮತ್ತು ನಿಯಮಗಳು ವಿಷಯವಾಗಿ ಉಪನ್ಯಾಸ ನೀಡಿದರು.
ಜಿಲ್ಲೆಯ ಪತ್ತಿನ ಸಹಕಾರ ಸಂಘಗಳು, ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕು, ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕರು ಸೇರಿಂತೆ ಒಟ್ಟು 95 ಪ್ರತಿನಿಧಿಗಳು ಭಾಗವಹಿಸಿದ್ದರು.- - -
ಕೋಟ್ ದೇಶದ ಅಭಿವೃದ್ಧಿ, ಪ್ರಗತಿಯಲ್ಲಿ ಸಹಕಾರ ಕ್ಷೇತ್ರದ ಕೊಡುಗೆ ದೊಡ್ಡದಿದೆ. ಸಹಕಾರ ಕ್ಷೇತ್ರವನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಅಧಿಕಾರಿ, ಸಿಬ್ಬಂದಿ, ಅಧ್ಯಕ್ಷರಿಗೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ಈ ಮೂಲಕ ನೀವೆಲ್ಲರೂ ಸಂಘಗಳ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸಿಬೇಕು- ಶೋಭಾ ಉಮೇಶಕುಮಾರ, ನಿರ್ದೇಶಕಿ
- - - -16ಕೆಡಿವಿಜಿ1, 2:ರಾಜ್ಯಮಟ್ಟದ ವಿಶೇಷ ಕಾರ್ಯದಕ್ಷತೆ ಶಿಬಿರವನ್ನು ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿರ್ದೇಶಕಿ ಶೋಭಾ ಉಮೇಶಕುಮಾರ ಉದ್ಘಾಟಿಸಿದರು.