ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಎಂ.ವಿ.ರಂಗನಾಥ್ ಸಲಹೆ

KannadaprabhaNewsNetwork | Published : Feb 22, 2025 12:47 AM

ಸಾರಾಂಶ

ಕಾಯಿಲೆಯ ಆರಂಭದಲ್ಲೇ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ರೋಗವನ್ನು ನಿಯಂತ್ರಣಕ್ಕೆ ತರಬಹುದು. ಇಲ್ಲವಾದರೆ ದೊಡ್ಡದಾದ ಮೇಲೆ ಅದನ್ನು ನಿಯಂತ್ರಣಕ್ಕೆ ತರಲು ಸಾಧ್ಯವಿಲ್ಲ. ಬಿಪಿ, ಷುಗರ್ ಸೇರಿ ಸಣ್ಣಪುಟ್ಟ ಆರೋಗ್ಯದಲ್ಲಿ ಸಮಸ್ಯೆ ಬಂದರೆ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಕಲ್ಯಾ ಗ್ರಾಮದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ

ಕನ್ನಡಪ್ರಭ ವಾರ್ತೆ ಮಾಗಡಿ

ಹಣ ಯಾವಾಗ ಬೇಕಾದರೂ ಸಂಪಾದಿಸಬಹುದು, ಆದರೆ ಉತ್ತಮ ಆರೋಗ್ಯ ಕಳೆದುಕೊಂಡರೆ ಮತ್ತೆ ಪಡೆಯಲು ಸಾಧ್ಯವಿಲ್ಲ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕಲ್ಯಾ ಗ್ರಾಮ ಪಂಚಾಯಿತಿ ಸದಸ್ಯ ಎಂ.ವಿ.ರಂಗನಾಥ್ ಹೇಳಿದರು.

ತಾಲೂಕಿನ ಕಲ್ಯಾ ಗ್ರಾಮದ ಶ್ರೀ ಉರಿ ಗದ್ದಿಗೇಶ್ವರ ಸೋಮನಾಥ ಪ್ರೌಢಶಾಲೆಯಲ್ಲಿ ಬಿಜಿಎಸ್ ವೈದ್ಯಕೀಯ ಕಾಲೇಜು ಆಸ್ಪತ್ರೆ, ಬಿಜಿಎಸ್ ವಿಜ್ಞಾತಂ ಸೌತ್ ಕ್ಯಾಂಪಸ್ ನಗರೂರು, ದಾಸನಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಆರೋಗ್ಯ ಉಚಿತ ತಪಾಸಣಾ ಶಿಬಿರದ ನೇತೃತ್ವ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ, ಕಾಯಿಲೆಯ ಆರಂಭದಲ್ಲೇ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ರೋಗವನ್ನು ನಿಯಂತ್ರಣಕ್ಕೆ ತರಬಹುದು. ಇಲ್ಲವಾದರೆ ದೊಡ್ಡದಾದ ಮೇಲೆ ಅದನ್ನು ನಿಯಂತ್ರಣಕ್ಕೆ ತರಲು ಸಾಧ್ಯವಿಲ್ಲ. ಬಿಪಿ, ಷುಗರ್ ಸೇರಿ ಸಣ್ಣಪುಟ್ಟ ಆರೋಗ್ಯದಲ್ಲಿ ಸಮಸ್ಯೆ ಬಂದರೆ ವೈದ್ಯರ ಸಲಹೆ ಪಡೆಯುವುದು ಸೂಕ್ತ, ಈಗ ಕಣ್ಣಿನ ಪರೀಕ್ಷೆಗೆ ಹೆಚ್ಚಿನ ಶಿಬಿರಾರ್ಥಿಗಳು ಬಂದಿದ್ದು, 40ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಲಾಗುತ್ತದೆ. ಬಿಜಿಎಸ್ ವೈದ್ಯಕೀಯ ಕಾಲೇಜು ಆರೋಗ್ಯ ಶಿಬಿರಕ್ಕೆ ಸಂಪೂರ್ಣ ಸಹಕಾರ ನೀಡಿದ್ದು ಆದಿಚುಂಚನಗಿರಿ ಮಠಾಧ್ಯಕ್ಷರಿಗೆ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ಕಲ್ಯಾ ಗ್ರಾಪಂ ಅಧ್ಯಕ್ಷ ಕುಮಾರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಹೆಚ್ಚಾಗಿ ನಡೆಯುವ ಮೂಲಕ ಗ್ರಾಮೀಣ ಭಾಗದವರಿಗೆ ಉತ್ತಮ ಆರೋಗ್ಯ ಸೇವೆ ಸಿಗುವ ಕೆಲಸ ಆಗಬೇಕಿದೆ ಎಂದರು.

ಆರೋಗ್ಯ ಶಿಬಿರದಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸೆ, ನೇತ್ರ ಚಿಕಿತ್ಸೆ, ಕೀಲು, ಮೂಳೆ, ಮಕ್ಕಳ ತಜ್ಞರು ಹಾಗೂ ಬಿಪಿ, ಷುಗರ್ ತಪಾಸಣೆ, ಇಸಿಜಿ ಪರೀಕ್ಷೆ ಮಾಡಿಸಲಾಯಿತು. ಶಿಬಿರದಲ್ಲಿ 300ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿ ತಪಾಸಣೆ ಮಾಡಿಸಿಕೊಂಡರು.

ಮುಖ್ಯ ವೈದ್ಯಾಧಿಕಾರಿ ಡಾ. ವಿ.ಆರ್.ಕೃಷ್ಣಮೂರ್ತಿ, ವಿಎಸ್ಎಸ್ ಏನ್ ಉಪಾಧ್ಯಕ್ಷೆ ಕಮಲಮ್ಮ ಚಂದ್ರಪ್ಪ, ಮುಖಂಡರಾದ ಲಕ್ಷ್ಮೀದೇವಿ ಶಿವರಾಮಯ್ಯ, ಸುರೇಶ್, ಬುಲೆಟ್ ರಾಮು, ಕೃಷ್ಣಪ್ಪ, ಬಾಬುರಾವ್, ಚಂದ್ರು, ನರಸಿಂಹಮೂರ್ತಿ, ಆಟೋ ಕುಮಾರ್ ಸೇರಿ ಹಲವು ಮುಖಂಡರು ಭಾಗವಹಿಸಿದ್ದರು.

Share this article