ಕಲಾ ಪೋಷಕ ರತ್ನ ನಾಗರಾಜ ವಿ. ಬೈರಿ

KannadaprabhaNewsNetwork | Published : Mar 17, 2025 12:31 AM

ಸಾರಾಂಶ

ಬೈರಿ ಅವರು ಕಳೆದ ಒಂದು ವರ್ಷದಲ್ಲಿ 20ಕ್ಕೂ ಹೆಚ್ಚು ಸುಗಮ ಸಂಗೀತ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. 300ಕ್ಕೂ ಹೆಚ್ಚು ಕಲಾವಿದರಿಗೆ ವೇದಿಕೆಯನ್ನು ಒದಗಿಸಿದ್ದಾರೆ.

ಫೋಟೋ 16 ಎಂವೈಎಸ್ 7

ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ವಿ. ಬೈರಿ ಅವರಿಗೆ ಗಾನನಂದನ ಹಾಗೂ ಸ್ಟಾರ್‌ ಸಿಂಗರ್ಸ್‌ ತಂಡದಿಂದ ಕಲಾಪೋಷಕರತ್ನ ಪ್ರಶಸ್ತಿಯನ್ನು ಭಾನುವಾರ ಪ್ರದಾನ ಮಾಡಲಾಯಿತು.

--

ಕನ್ನಡಪ್ರಭ ವಾರ್ತೆ ಮೈಸೂರು

ಗಾನ ನಂದನ ಹಾಗೂ ಸ್ಟಾರ್ ಸಿಂಗರ್ಸ್ ತಂಡದಿಂದ ಜೆ ಎಲ್ ಬಿ ರಸ್ತೆಯ ನಾದಬ್ರಹ್ಮ ಸಭಾಂಗಣದಲ್ಲಿ ಭಾನುವಾರ ಗಾನಯಾನ ಕನ್ನಡ, ಹಿಂದಿ, ತಮಿಳು ಹಾಗೂ ತೆಲುಗು ಚಲನಚಿತ್ರ ಗೀತೆಗಳ ರಾಗಸಂಗಮ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಇದೇ ಸಂದರ್ಭದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ವಿ, ಬೈರಿ ಅವರ ಜನ್ಮದಿನವನ್ನು ಆಚರಿಸಿ, "ಕಲಾ ಪೋಷಕ ರತ್ನ " ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ಬೈರಿ ಅವರು ಕಳೆದ ಒಂದು ವರ್ಷದಲ್ಲಿ 20ಕ್ಕೂ ಹೆಚ್ಚು ಸುಗಮ ಸಂಗೀತ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. 300ಕ್ಕೂ ಹೆಚ್ಚು ಕಲಾವಿದರಿಗೆ ವೇದಿಕೆಯನ್ನು ಒದಗಿಸಿದ್ದಾರೆ. ಕರೋಕೆ ಬದಲು ನೈಜ ವಾದ್ಯ ಸಂಗೀತಗಾರರಿಗೆ ಅವಕಾಶ ನೀಡುತ್ತಾ, ಸಾಂಸ್ಕೃತಿಕ ನಗರಿಯಲ್ಲಿ ಸುಗಮ ಸಂಗೀತದ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಮಾತನಾಡಿ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾ ಘಟಕಗಳ ಪೈಕಿ ಮೈಸೂರು ಅತ್ಯಂತ ಕ್ರಿಯಾಶೀಲವಾಗಿದೆ ಎಂಬ ಮಾತು ಬೆಂಗಳೂರಿನಿಂದ ಹಿಡಿದು ಎಲ್ಲೆಡೆ ಕೇಳಿ ಬರುತ್ತಿದೆ. ಇದಕ್ಕೆ ಬೈರಿ ಅವರ ಕ್ರಿಯಾಶೀಲತೆ, ಪ್ರೋತ್ಸಾಹ ಕಾರಣ ಎಂದರು.

ಹೀಗಾಗಿ ಮುಂದಿನ ಮೇ ತಿಂಗಳಲ್ಲಿ ಮೈಸೂರಿನಲ್ಲಿ ರಾಜ್ಯ ಮಟ್ಟದ ಸುಗಮ ಸಂಗೀತ ಸಮ್ಮೇಳನ ನಡೆಸುವ ಅವಕಾಶ ಲಭ್ಯವಾಗಿದೆ. ಬೈರಿ ಅವರು ಇದೇ ರೀತಿ ನೂರ್ಕಾಲ ಬಾಳಿ, ಸಾಂಸ್ಕೃತಿಕ ನಗರಿಯ ಹಿರಿಮೆ- ಗರಿಮೆಯನ್ನು ಎತ್ತಿ ಹಿಡಿಯಲಿ ಎಂದು ಅವರು ಆಶಿಸಿದರು.

ಸುಗಮ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ತಮ್ಮ ಜನ್ಮದಿನ ಆಚರಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದ ನಾಗರಾಜ ವಿ. ಬೈರಿ ಅವರು, ಮುಂದೆಯೂ ಇದೇ ರೀತಿ ಸಹಕಾರ ನೀಡುವಂತೆ ಮನವಿ ಮಾಡಿದರು.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಗೆದ್ದ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷ ಯೋಗೇಶ್‌, ನಿರ್ದೇಶಕರಾದ ಗಿರೀಶ್‌, ಸೋಮಣ್ಣ, ಹರೀಶ್‌ ಕುಮಾರ್‌, ನಿರಂಜನ, ಯೋಗಾನರಸಿಂಹೇಗೌಡ ಅವರನ್ನು ಸನ್ಮಾನಿಸಲಾಯಿತು. ಶಾಲಿನಿ ನಾಗರಾಜ ವಿ. ಬೈರಿ, ಎಸ್‌. ವೆಂಕಟೇಶ್‌, ಎನ್‌. ಬೆಟ್ಟೇಗೌಡ ಮೊದಲಾದವರು ಇದ್ದರು.

--

ಬಾಕ್ಸ್‌...

ಮನರಂಜಿಸಿದ ಸಂಗೀತ ಸಂಜೆ

ನಂತರ ಎನ್. ಬೆಟ್ಟೇಗೌಡ, ಎ.ಡಿ.ಶ್ರೀನಿವಾಸ್, ಇಂದ್ರಾಣಿ ಆನಂತರಾಮ್, ಡಾ. ವೈ.ಡಿ. ರಾಜಣ್ಣ, ಅಬ್ದುಲ್ ಖಯ್ಯಮ್, ಪೂರ್ಣಿಮಾ, ಶ್ರೀಲತಾ ಮನೋಹರ್, ವಾಣಿ, ಗೀತಾ ಲಕ್ಷ್ಮಿ ಕಿಣಿ, ಸುಜಾತಾ ಹಾಗೂ ಅಮೃತೇಶ್ ತಮ್ಮ ಗಾಯನದ ಮೂಲಕ ಎಲ್ಲರ ಮನರಂಜಿಸಿದರು. ಕನ್ನಡ, ಹಿಂದಿ, ತೆಲುಗು, ತಮಿಳು ಗೀತೆಗಳ ಗಾಯನಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಯಿತು. ಇಡೀ ನಾದಬ್ರಹ್ಮ ಸಭಾಂಗಣ ಕಿಕ್ಕಿರಿದು ತುಂಬಿತ್ತು.

Share this article