ಕೈ ತೋಟದ ಜೊತೆಗೆ ಕೃಷಿ ಭೂಮಿಗಾಗಿ ಹುಡುಕಾಟ !

KannadaprabhaNewsNetwork | Published : Jul 3, 2025 12:32 AM
ದಮಯಂತಿ 1 | Kannada Prabha

ಸಾರಾಂಶ

ಪಕ್ಕದ ಖಾಲಿ ನಿವೇಶನದಲ್ಲಿ ಕೈತೋಟ ಮಾಡಿದ್ದಾರೆ. ಅಲ್ಲಿ ರಾಮಪಲ, ಸೀತಾಫಲ, ಲಕ್ಷ್ಮಣಫಲ, ಬಿಲ್ವಪತ್ರೆ, ಬಟರ್‌ ಫ್ರೂಟ್‌, ಸೇಬು, ಸೀಬೆ, ಹಿರಳಿಕಾಯಿ, ಕಿತ್ತಳೆ, ಮೊಸಂಬಿ ಮೊದಲಾದ ಹಣ್ಣಿನ ಗಿಡಗಳು,

ಅಂಶಿ ಪ್ರಸನ್ನಕುಮಾರ್‌ಕನ್ನಡಪ್ರಭ ವಾರ್ತೆ ಮೈಸೂರುಮೂಲತಃ ಹುಣಸೂರು ತಾಲೂಕು ಹನಗೋಡು ಹೋಬಳಿ ಹಿಂಡಗುಡ್ಲು ಗ್ರಾಮದವರಾದ ಎಚ್‌.ಎನ್‌. ದಮಯಂತಿ ಅವರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಳ್ಳಿ ಬಿಟ್ಟ ಪಟ್ಟಣ ಸೇರಿದ್ದರೂ ಕೃಷಿಯ ನಂಟು ಬಿಟ್ಟಿಲ್ಲ!. ನಗರದಲ್ಲಿಯೂ ಕೈತೋಟ ಮಾಡಿ, ಹಣ್ಣು, ಹೂವು, ತರಕಾರಿ ಬೆಳೆದಿದ್ದಾರೆ. ಜೊತೆಗೆ ಈಗ ಮಕ್ಕಳು ವಿದ್ಯಾಭ್ಯಾಸ ಮುಗಿಸಿ ನೌಕರಿ ಹಿಡಿದಿರುವುದರಿಂದ ಮತ್ತೆ ಕೃಷಿ ಕಡೆಗೆ ಮರಳಲು ಭೂಮಿಗಾಗಿ ಹುಡುಕಾಟ ನಡೆಸಿದ್ದಾರೆ.ದಮಯಂತಿ ಅವರ ತಂದೆ ಮೂಲತಃ ಕೃಷಿಕರು ಜೊತೆಗೆ ಶಿಕ್ಷಕರಾಗಿದ್ದರು. ಹೀಗಾಗಿ ದಮಯಂತಿ ಅವರಿಗೆ ಚಿಕ್ಕಂದಿನಿಂದಲೂ ಕೃಷಿಯ ನಂಟು.ಅವರ ವಿವಾಹ ಲ್ಯಾಂಪ್ಸ್‌ ಸೊಸೈಟಿಯ ಉದ್ಯೋಗಿ ನಾಗರಾಜ್‌ ಅವರೊಂದಿಗೆ ನಡೆಯಿತು. ನಂತರ ಅವರು ಹಳ್ಳಿ ಬಿಟ್ಟು ಹುಣಸೂರಿಗೆ ಸ್ಥಳಾಂತರವಾದರು. ಮುಂದೆ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಸ್ಥಳಾಂತರವಾದರು. ವಿಜಯನಗರ ನಾಲ್ಕನೇ ಹಂತ ಮೊದಲ ಘಟ್ಟದಲ್ಲಿ ಸ್ವಂತ ಮನೆಯನ್ನು ನಿರ್ಮಿಸಿದರು. ಏಷ್ಯಾದಲ್ಲಿಯೇ ಬೃಹತ್‌ ಬಡಾವಣೆ ಎನಿಸಿರುವ ವಿಜಯನಗರದಲ್ಲಿ ನಿವೇಶನಗಳನ್ನು ಹಂಚಿ ಎರಡೂವರೆ ದಶಕಗಳೇ ಕಳೆದಿದ್ದರೂ ಇನ್ನೂ ಸಾವಿರಾರು ನಿವೇಶನಗಳಲ್ಲಿ ಮನೆಗಳು ನಿರ್ಮಾಣವಾಗಿಲ್ಲ. ದಮಯಂತಿ ಅವರ ಮನೆಯ ಪಕ್ಕದಲ್ಲಿ ನಿವೇಶನ ಖಾಲಿ ಇದೆ. ಜೊತೆಗೆ ಎದುರುಗಡೆ ವಾಹನ ನಿಲುಗಡೆ ಪ್ರದೇಶ, ಪಕ್ಕದಲ್ಲಿಯೇ ಇರುವ ಉದ್ಯಾನ- ಎಲ್ಲವನ್ನು ಬಳಸಿಕೊಂಡರು. ಪಕ್ಕದ ಖಾಲಿ ನಿವೇಶನದಲ್ಲಿ ಕೈತೋಟ ಮಾಡಿದ್ದಾರೆ. ಅಲ್ಲಿ ರಾಮಪಲ, ಸೀತಾಫಲ, ಲಕ್ಷ್ಮಣಫಲ, ಬಿಲ್ವಪತ್ರೆ, ಬಟರ್‌ ಫ್ರೂಟ್‌, ಸೇಬು, ಸೀಬೆ, ಹಿರಳಿಕಾಯಿ, ಕಿತ್ತಳೆ, ಮೊಸಂಬಿ ಮೊದಲಾದ ಹಣ್ಣಿನ ಗಿಡಗಳು, ಅಲಸಂದೆ, ಹೆಸರು, ಹುರುಳಿ ಮೊದಲಾದ ಧಾನ್ಯಗಳು, ಕ್ಯಾರೆಟ್, ಬೀನ್ಸ್‌, ಸೊರೆಕಾಯಿ, ಪಡವಲಕಾಯಿ, ನುಗ್ಗೆ ಕಾಯಿ, ಸೌತೆ ಕಾಯಿ, ಬಳ್ಳಿ ಆಲೂಗಡ್ಡೆ, ಕುಂಬಳಕಾಯಿ ಸೇರಿದಂತೆ ವಿವಿಧ ತರಕಾರಿ, ಈರುಳ್ಳಿ, ಬೆಳ್ಳುಳ್ಳಿ, ಬಟಾಣಿ, ಮೆಣಸು ಬೆಳೆಯುತ್ತಿದ್ದಾರೆ. ದಾಸವಾಳ, ಗಂಟೆ ಹೂವು, ಗುಲಾಬಿ, ಮಲ್ಲಿಗೆ, ಸೂಜಿ ಮಲ್ಲಿಗೆ, ಸಂಪಿಗೆ, ಸೇವಂತಿಗೆ,, ಪಾರಿಜಾತ, ಕಣಗಲೆ, ಕನಕಾಂಬರ, ತುಂಬೆ, ಬಿಲ್ವಪತ್ರೆ, ವೀಳ್ಯದೆಲೆ, ಕರಿಬೇವು, ಕೊತ್ತಂಬರಿ, ಪುದೀನ, ಬಸಳೆ, ಹೊನಗಾನೆ, ದಂಟು, ಕೀರೆ, ಸಂಬಾರ, ಸಬ್ಬಸೀಗೆ ಸೇರಿದಂತೆ ವಿವಿಧ ಸೊಪ್ಪುಗಳು, ಅಡಿಕೆ, ಬಾಳೆ, ತೆಂಗು, ಪಪ್ಪಾಯ, ನಿಂಬೆ,. ಕ್ರಿಸ್ಮಸ್‌, ಹಲಸು ಮರಗಳಿವೆ.ಇದಕ್ಕೆ ಹಸಿರೆಲೆ ಗೊಬ್ಬರ ನೀಡುತ್ತಾರೆ. ಸುತ್ತಮುತ್ತ ಓಡಾಡುವಾಗ ಸಗಣಿ ಸಂಗ್ರಹಿಸಿ, ತಂದು ಜೀವಾಮೃತ ತಯಾರಿಸಿಸ ಹಾಕುತ್ತಾರೆ. ತರಕಾರಿ ಮನೆ ಬಳಕೆಗೆ ಆಗುತ್ತದೆ. ನುಗ್ಗೆ ಪೌಡರ್‌ ತಯಾರಿಸಿ, ಇತರರಿಗೂ ನೀಡುತ್ತಾರೆ.ಸಂಪರ್ಕ ವಿಳಾಸಎಚ್‌.ಎನ್‌. ದಮಯಂತಿ ಕೋಂ ನಾಗರಾಜ್‌ಮನೆ ನಂ.1364, ವಿಜಯನಗರ ನಾಲ್ಕನೇ ಹಂತ, ಮೊದಲ ಘಟ್ಟಮೈಸೂರು ಮೊ.96325 30959 ಕೋಟ್‌ಮಕ್ಕಳ ಓದಿಗಾಗಿ ಮೈಸೂರಿಗೆ ಬಂದೆವು. ಈಗ ಇಬ್ಬರು ಓದು ಪೂರ್ಣಗೊಳಿಸಿ, ನೌಕರಿಯಲ್ಲಿದ್ದಾರೆ. ಹೀಗಾಗಿ ಎರಡು ಎಕರೆ ಭೂಮಿ ಖರೀದಿಸಿ, ವ್ಯವಸಾಯದಲ್ಲಿ ತೊಡಗಿಸಿಕೊಳ್ಳುತ್ತೇವೆ. ಇದೇ ಕಾರಣಕ್ಕಾಗಿ ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಸ್ತರಣಾ ಶಿಕ್ಷಣ ಘಟಕ, ಸುತ್ತೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯುವ ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೇವೆ.- ಎಚ್‌.ಎನ್‌. ದಮಯಂತಿ, ಮೈಸೂರು--- ಬಾಕ್ಸ್‌... ಇಬ್ಬರು ಮಕ್ಕಳು ಎಂಜಿನಿಯರ್‌ಗಳುದಮಯಂತಿ ನಾಗರಾಜ್‌ ಅವರ ಪುತ್ರಿ ಎಚ್.ಎನ್‌. ಸಚಿನ್‌ ಬಿ.ಇ ಓದಿದ್ದು, ಸದ್ಯ ಬ್ಲಫ್‌ನಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಆಗಿದ್ದಾರೆ. ಪುತ್ರಿ ಎಚ್.ಎನ್‌. ಸಹನಾ ಕೂಡ ಬಿ.ಇ ಓದಿದ್ದು, ಕೆಪಿಟಿಸಿಎಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

PREV