ಕನ್ನಡಪ್ರಭ ವಾರ್ತೆ ಮೈಸೂರು
ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ದಸರಾದಲ್ಲಿ ಕಂಬಳ ಆಯೋಜನೆ ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿದರು. ಹಿಂಪಡೆಯದಿದ್ದರೇ ಹಂತ ಹಂತವಾಗಿ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ನಾವು ಕಂಬಳ ಕ್ರೀಡೆಯನ್ನು ವಿರೋಧಿಸುತ್ತಿಲ್ಲ. ಬಲತ್ಕಾರವಾಗಿ ಹೇರುವುದಕ್ಕೆ ವಿರೋಧ ಇದೆ. ಮೈಸೂರಲ್ಲಿ ಕೆಸರು ಗದ್ದೆಯೂ ಇಲ್ಲ. ಕೋಣಗಳೂ ಇಲ್ಲ. ದಸರಾದಲ್ಲಿ ಸ್ಥಳೀಯ ಕ್ರೀಡೆ, ಸಾಂಸ್ಕೃತಿಕ ಕಲೆಗಳಿಗೆ ಉತ್ತೇಜನ ಕೊಡಬೇಕು. ಜನರ ಭಾವನೆಯನ್ನು ಸರ್ಕಾರ ಗೌರವಿಸಿ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.ಜನರು ವಿರೋಧಿಸುವುದನ್ನೇ ಸರ್ಕಾರ ಹಠಕ್ಕೆ ಬಿದ್ದವರಂತೆ ಜಾರಿಗೆ ತರುತ್ತದೆ. ಸರ್ಕಾರ ವಾರದೊಳಗೆ ಸ್ಪಷ್ಟವಾದ ನಿರ್ಧಾರ ಕೈಗೊಳ್ಳದಿದ್ದರೆ ಬೀದಿಗಿಳಿದು ಅಹಿಂಸಾತ್ಮಕ ಹೋರಾಟದ ಜೊತೆಗೆ ಪ್ರತಿರೋಧ ಒಡ್ಡುತ್ತೇವೆ ಎಂದು ಅವರು ಹೇಳಿದರು.
ಪರಿಸರಕ್ಕಾಗಿ ನಾವು ಸಂಘಟನೆ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಮಾತನಾಡಿ, ದಸರಾದಲ್ಲಿ ಕಂಬಳ ಆಯೋಜನೆಗೆ ಹಠಬೇಡ. ಕಂಬಳಕ್ಕೆ ಅದರದೇ ಆದ ವೈಶಿಷ್ಟ್ಯ, ಧಾರ್ಮಿಕತೆ ಇದೆ. ಮೈಸೂರಲ್ಲಿ ಕಂಬಳ ಆಯೋಜನೆಗೆ ತುಳುನಾಡಿನ ಜನರೇ ವಿರೋಧ ಮಾಡುತ್ತಿದ್ದಾರೆ. ದಸರಾದಲ್ಲಿ ಕಂಬಳ ವಿರೋಧಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.