ನಿಗೂಢ ಹುದುಗಿಸಿಕೊಂಡಿರುವ ಕೋಟೆ-ಕೊತ್ತಲಗಳು: ಡಾ. ಎಂ.ಕೊಟ್ರೇಶ್

KannadaprabhaNewsNetwork |  
Published : Aug 21, 2025, 02:00 AM IST
ಸರಳಾದೇವಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಜರುಗಿದ ‘ಕರ್ನಾಟಕದ ಕೋಟೆಗಳು’  ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ತುಮಕೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಂ.ಕೊಟ್ರೇಶ್ ಚಾಲನೆ ನೀಡಿದರು.  | Kannada Prabha

ಸಾರಾಂಶ

ಕರ್ನಾಟಕದಲ್ಲಿ ಹಲವಾರು ರಾಜವಂಶಗಳು ಆಳ್ವಿಕೆ ನಡೆಸಿವೆ. ಅವರೆಲ್ಲರೂ ತಮ್ಮ ಆಳ್ವಿಕೆಯ ಪ್ರದೇಶದಲ್ಲಿ ಕೋಟೆ ಕೊತ್ತಲಗಳನ್ನು ನಿರ್ಮಾಣ ಮಾಡುವುದರ ಮೂಲಕ ಆಯಾ ಪ್ರದೇಶವನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಕರ್ನಾಟಕದಲ್ಲಿ ಹಲವಾರು ರಾಜವಂಶಗಳು ಆಳ್ವಿಕೆ ನಡೆಸಿವೆ. ಅವರೆಲ್ಲರೂ ತಮ್ಮ ಆಳ್ವಿಕೆಯ ಪ್ರದೇಶದಲ್ಲಿ ಕೋಟೆ ಕೊತ್ತಲಗಳನ್ನು ನಿರ್ಮಾಣ ಮಾಡುವುದರ ಮೂಲಕ ಆಯಾ ಪ್ರದೇಶವನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಸಚಿವ ಡಾ. ಎಂ.ಕೊಟ್ರೇಶ್ ಹೇಳಿದರು.

ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಇತಿಹಾಸ ವಿಭಾಗದಿಂದ ಆಯೋಜಿಸಿದ್ದ ‘ಕರ್ನಾಟಕದ ಕೋಟೆಗಳು’ ಎನ್ನುವ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಗೋಡೆ, ಕಂದಕ, ಗೋಪುರ ಮತ್ತು ದ್ವಾರಗಳು ಕೋಟೆಗೆ ರಕ್ಷಣೆ ಒದಗಿಸಿದರೆ, ಕೋಟೆಗಳು ಶತ್ರುಗಳು

ಒಳನುಗ್ಗದಂತೆ ನೋಡಿಕೊಳ್ಳುತ್ತಿದ್ದವು. ದೊಡ್ಡ ದೊಡ್ಡ ಕಲ್ಲುಗಳನ್ನು ಬಳಸಿಕೊಂಡು, ಗಟ್ಟಿಮುಟ್ಟಾಗಿ ಕೋಟೆಗಳನ್ನು ನಿರ್ಮಿಸಿರುವುದರಿಂದ ನಮಗಿಂದಿಗೂ ಅವು ಐತಿಹಾಸಿಕ ಸ್ಮಾರಕಗಳಾಗಿ ಉಳಿದಿವೆ ಎಂದರು.

ರಾಜಮಹಾರಾಜರ ಆಳ್ವಿಕೆಯಲ್ಲಿ ನಿರ್ಮಿಸಲಾದ ಕೋಟೆ ಕೊತ್ತಲಗಳು ಎಷ್ಟೋ ನಿಗೂಢಗಳನ್ನು ತನ್ನ ತೆಕ್ಕೆಯಲ್ಲಿ ಹುದುಗಿಸಿಕೊಂಡಿವೆ. ಅವುಗಳ ಅಧ್ಯಯನ ಮಾಡುತ್ತಾ ಸಾಗಿದಂತೆ ಅನೇಕ ವಿಸ್ಮಯಗಳು ತೆರೆದುಕೊಳ್ಳುತ್ತವೆ. ಕೆಲವು ಕೋಟೆಗಳು ಕೇವಲ ರಕ್ಷಣೆಗಾಗಿ ಅಲ್ಲದೆ, ಆಡಳಿತ, ಆಡಳಿತಗಾರರ ವಾಸಸ್ಥಳ ಮತ್ತು ಆರ್ಥಿಕ ಚಟುವಟಿಕೆಗಳಿಗಾಗಿ ಸಹ ಬಳಸಲಾಗುತ್ತಿತ್ತು. ಪುರಾತನ ಕಾಲದ ಕೋಟೆಗಳು ಇಂದಿಗೂ ಕೌತುಕದ ಮೂಟೆ ಎನಿಸಿವೆ. ಅವುಗಳ ವಿನ್ಯಾಸ, ನಿರ್ಮಾಣದಲ್ಲಿನ ಜಾಣ್ಮೆ, ಆಧುನಿಕ ಯುಗದಲ್ಲಿ ಇರುವ ನಮಗೆ ಅಚ್ಚರಿ ಮೂಡಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಪ್ರಹ್ಲಾದ್ ಚೌದ್ರಿ, ಹೊಸ ತಲೆಮಾರಿನವರು ಇತಿಹಾಸವನ್ನು ಹೊಸ ದೃಷ್ಟಿಕೋನದಿಂದ ನೋಡಬೇಕು. ಕೋಟೆ ಕೊತ್ತಲಗಳ ಮಹತ್ವವನ್ನು ತಿಳಿದುಕೊಳ್ಳುವುದರ ಜೊತೆಗೆ ಅವುಗಳ ಸಂರಕ್ಷಣೆಗೂ ಮುಂದಾಗಬೇಕಾದ ಅವಶ್ಯಕತೆಯಿದೆ. ಕೋಟೆ ಕೊತ್ತಲಗಳ ಬಗ್ಗೆ ಸಮಗ್ರ ಮಾಹಿತಿ ಅರಿಯಲು ಹೆಚ್ಚಿನ ಅಧ್ಯಯನ ಅಗತ್ಯವಿದೆ. ಕರ್ನಾಟಕದ ಕೋಟೆಗಳ ಕುರಿತು ಅನೇಕ ಕೃತಿಗಳು ಇದ್ದು, ವಿದ್ಯಾರ್ಥಿಗಳು ಈ ಬಗ್ಗೆ ಆಸ್ಥೆ ವಹಿಸಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ನಾಜಿಯಾ ಖಾಜಿ, ಡಾ. ಕೆ.ಬಸಪ್ಪ, ಆಂತರಿಕ ಗುಣಮಟ್ಟದ ಭರವಸೆ ಕೋಶದ ಸಂಚಾಲಕ ಪ್ರೊ. ಜಯಶ್ರೀ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ