ಹೊನ್ನಾವರ: ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಿರಂತರ ಅಪಪ್ರಚಾರದ ಜತೆ ವದಂತಿಗಳನ್ನು ಹಬ್ಬಿಸುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಜನಾಗ್ರಹ ಧರ್ಮಸಭೆ ಹಮ್ಮಿಕೊಳ್ಳಲಾಯಿತು.ಸಭೆಯಲ್ಲಿ ಮಾತನಾಡಿದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಧರ್ಮಸ್ಥಳದ ಬಗ್ಗೆ ಹಾಗೂ ವೀರೇಂದ್ರ ಹೆಗ್ಗಡೆ ಬಗ್ಗೆ ನಮಗೆ ಗೊತ್ತಿದ್ದರೂ ಅವರ ಬಗ್ಗೆ ಧ್ವನಿಯನ್ನು ಈಗ ಎತ್ತಿದ್ದೇವೆ. ಅವರ ಬಗ್ಗೆ ತಿಳಿದರೂ ಗುಂಡಿಯಲ್ಲಿ ಏನಾದರೂ ಸಿಗಬಹುದು ಅನ್ನುವ ಭಾವನೆಯೇ ಇಷ್ಟು ದಿನ ನಾವು ಸುಮ್ಮನಿರಲು ಕಾರಣವಾಗಿದೆ. ಹಿಂದೂ ಸಮಾಜವನ್ನು ಮುರಿಯುವ ಕೆಲಸ ವ್ಯವಸ್ಥಿತವಾಗಿದೆ. ಮೆರವಣಿಗೆ ಅಷ್ಟಕ್ಕೆ ನಿಲ್ಲಬಾರದು ಎಂದರು.
ಸಮೀರ್ ಧರ್ಮಸ್ಥಳದ ವಿಡಿಯೋ ಮಾಡಿ ಹಾಕುವ ಆಸಕ್ತಿ ತೋರಿಸಿದ. ಆದರೆ ಅಜ್ಮೀರ್ ದರ್ಗಾದಲ್ಲಿ ಆದ ಘಟನೆಯ ಕುರಿತು ಅವರ ಸಮಾಜದ ಕುರಿತು ಧ್ವನಿ ಎತ್ತಲಿಲ್ಲ. ಇದು ವ್ಯವಸ್ಥಿತ ಪಿತೂರಿಯ ಭಾಗ ಎನ್ನುವುದನ್ನು ಜನರ ಎದುರಿಗೆ ಹೇಳುತ್ತಾ, ಹಿಂದೂ ಸಂಘಟನೆ ಜಾಗೃತವಾಗಬೇಕು. ಧರ್ಮಸ್ಥಳ ಒಂದಲ್ಲ, ಮುಂದಿನ ದಿನಗಳಲ್ಲಿ ನಮ್ಮ ಊರಿನ ದೇವಾಲಯದ ಮೇಲೂ ಕುತಂತ್ರಗಳು ನಡೆಯಬಹುದು. ಎಲ್ಲರೂ ಒಟ್ಟಾಗಿರಬೇಕು ಎಂದರು.
ಹಿಂದೂ ಸಂಘಟನೆ ಮುಖ್ಯಸ್ಥ ನಾಗೇಶ್ ಕಾಮತ್ ಧರ್ಮಸ್ಥಳದ ಕೊಡುಗೆ ಬಗ್ಗೆ ಜನರಿಗೆ ತಿಳಿಸಿದರು.ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಜನರು ಧರ್ಮಸ್ಥಳದ ವಿರುದ್ಧ ಇರುವವರ ಮೇಲೆ ಕ್ರಮ ಜರುಗಿಸಲು ಒತ್ಗತಾಯಿಸಿ ಮೆರವಣಿಗೆ ನಡೆಸಿದರು. ನಂತರ ತಾಲೂಕು ಆಡಳಿತ ಕಚೇರಿಯಲ್ಲಿ ತಹಸೀಲ್ದಾರ್ ಪ್ರವೀಣ್ ಕರಾಂಡೆಗೆ ಮನವಿ ಸಲ್ಲಿಸಿದರು.