ಡ್ರಾಮಾ ಮಾಸ್ಟರ್ ಮಂಗಲದ ಆರ್.ಶಿವಣ್ಣಗೆ ಬಂಗಾರದ ಕಡಗ ಸಮರ್ಪಣೆ ಕನ್ನಡಪ್ರಭ ವಾರ್ತೆ ಚಾಮರಾಜನಗರ
ಯುವಜನಾಂಗ ಪಾಶ್ಚಿಮಾತ್ಯದ ಕಡೆ ಗಮನ ಕೊಡುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಪೌರಾಣಿಕ ಕಲೆಗಳು ನಶಿಸಿ ಹೋಗುತ್ತಿವೆ ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು. ಗುರುವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಗರದ ವರನಟ ಡಾ.ರಾಜ್ಕುಮಾರ್ ರಂಗಮಂದಿರದಲ್ಲಿ ಜಿಲ್ಲಾ ಸಮಸ್ತ ರಂಗಭೂಮಿ ಕಲಾವಿದರ ಬಳಗದ ವತಿಯಿಂದ ನಡೆದ ಮಂಗಲ ಗ್ರಾಮದ ಡ್ರಾಮಮಾಸ್ಟರ್ ಯಜಮಾನ್ ಆರ್.ಶಿವಣ್ಣ ಅವರಿಗೆ ಬಂಗಾರದ ಕಡಗ ಸಮರ್ಪಣಾ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಹಳ್ಳಿಗಾಡಿನ ರೈತಾಪಿ ಜನರು ಇಂದಿಗೂ ಸಹ ಕಲೆಯನ್ನು ಇಂತಹ ಪೌರಾಣಿಕ ನಾಟಕವನ್ನು ಹೇಳಿಕೊಡುವ ಗುರುಗಳ ಮಾರ್ಗದರ್ಶನದಲ್ಲಿ ಹಬ್ಬ, ಹರಿದಿನ ಇತರ ಸಂದರ್ಭಗಳಲ್ಲಿ ಪೌರಾಣಿಕ ನಾಟಕ ಕಲಿತು ಅವರಲ್ಲಿರುವ ಕಲೆಯನ್ನು ಹೊರಬಿಂಬಿಸಲು ಅವಕಾಶ ಇದೆ. ಹಾಗಾಗಿ ಇವತ್ತು ಪೌರಾಣಿಕ ಕಲೆ ಉಳಿದಿದೆ ಎಂದರು.
ಶಿವಣ್ಣ ಅವರ ಬದುಕ ಬಂಗಾರವಾಗಲಿ:
ಮೂಲ ಸಂಸ್ಕೃತಿ ಗುಣಗಳನ್ನು ಬೆಳೆಸುತ್ತದೆ. ನಾಟಕ, ಹರಿಕಥೆ, ಹಬ್ಬಗಳು ಮನಸ್ಸಿಗೆ ಸಂತಸ ಉಂಟುಮಾಡುತ್ತವೆ. ಸಂಸ್ಕೃತಿ, ಸಂಸ್ಕಾರ ಪಾಲನೆ ಮಾಡಬೇಕು. ಯಾವುದೇ ಕಲಾವಿದ ಯಾವುದೇ ಪಾತ್ರದಲ್ಲಿ ವಿಶೇಷ ವ್ಯಕ್ತಿಯಾಗುತ್ತಾನೆ. ಕಲಾವಿದ ಸಮಾಜದ ಉನ್ನತಿಗಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಕಲಾವಿದರು ಮಾದರಿ ಪ್ರಜೆಗಳಾಗಬೇಕು. ಬಂಗಾರದ ಕಡಗ ಸ್ವೀಕರಿಸಿದ ಶಿವಣ್ಣ ಅವರಿಗೆ ನೂರಾರು ಕಡಗ, ಸನ್ಮಾನ, ಪ್ರಶಸ್ತಿಗಳು ಬರಲಿ ಎಂದು ನಿವೃತ್ತ ಅರಣ್ಯಾಧಿಕಾರಿ ಡಾ. ಆರ್. ರಾಜು ಆಶಿಸಿದರು.
ಪದವಿಪೂರ್ವ ಇಲಾಖೆ ಉಪನಿರ್ದೇಶಕ ಸಿ.ಮಂಜುನಾಥಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿ, ಡ್ರಾಮಾ ಮಾಸ್ಟರ್ ಶಿವಣ್ಣ ಅವರು ಜಿಲ್ಲಾ ಕೇಂದ್ರ ಸ್ಥಾನ ಹಾಗೂ ತಾಲೂಕಿನ ಹಳ್ಳಿಗಳಲ್ಲಿ ನಾಟಕಕಲೆಯನ್ನು ಜನರಿಗೆ ಕಲಿಸಿ ನೂರಾರು ಕಲಾವಿರದನ್ನು ಸೃಷ್ಠಿ ಮಾಡಿದ್ದು, ನೂರಾರು ನಾಟಕಗಳಿಗೆ ನಿರ್ದೇಶನ ಮಾಡಿದ್ದಾರೆ. ಅವರ ಅವಿರತ ಕಲಾಸೇವೆಯಲ್ಲಿ ತುಂಬಾ ಹೆಸರು ಗಳಿಸಿದ್ದಾರೆ. ಅವರಿಗೆ ಜಿಲ್ಲಾ ಸಮಸ್ತ ರಂಗಭೂಮಿ ಕಲಾವಿದರ ಬಳಗ ಬಂಗಾರದ ಕಡಗ ಸಮರ್ಪಣೆ ಮಾಡಿರುವುದು ಅವರ ಕಲಾಸೇವೆಗೆ ಸಂದ ದೊಡ್ಡಗೌರವವಾಗಿದೆ ಎಂದರು.
ಕಾರ್ಯಕ್ರಮ ನಂತರ ಶ್ರೀಸಿದ್ದಮಲ್ಲೇಶ್ವರ ಕಲಾ ಸಂಘದ ವತಿಯಿಂದ ಹೊಂಡರಬಾಳು ದಿ.ಲಿಂಗರಾಜೇ ಅರಸ್ ಅವರಿಂದ ವಿರಚಿತವಾದ ದಕ್ಷಯಜ್ಞ ಪೌರಾಣಿಕ ನಾಟಕ ನಡೆಯಿತು.
ನಿವೃತ್ತ ಅರಣ್ಯಾಧಿಕಾರಿ ಡಾ. ಆರ್. ರಾಜು ಮಾತನಾಡಿ, ಯಾವುದೇ ಧರ್ಮದ ಉನ್ನತಿ, ಆಧೋಗತಿ ಅದು ಸಂಸ್ಕೃತಿ, ಸಂಸ್ಕಾರ ಕಾರಣವಾಗುತ್ತದೆ. ರಾಮಾಯಣ, ಭಗವದ್ಗೀತೆ ಆಧಾರದ ಮೇಲೆ ಧರ್ಮ ನಡೆಯುತ್ತದೆ. ಧರ್ಮದ ಪ್ರಚಾರ ಮಾಡುವ ಅಂಗ ನಾಟಕವಾಗಿದೆ. ನಾಟಕದಲ್ಲಿ ಸಾಮಾಜಿಕ ಶಿಸ್ತು ಇರುತ್ತದೆ. ಕಲಾವಿದರಲ್ಲಿ ಶಿಸ್ತು ಬರುತ್ತದೆ. ಅ ಮೂಲಕ ಪ್ರಬುದ್ದ ಸಮಾಜ ಕಟ್ಟಲು ಸಾಧ್ಯ ಎಂದರು.