ನಾಡಗೌಡರಿಗೆ ಮತ್ತೊಮ್ಮೆ ''''''''ಕೈ''''''ತಪ್ಪಿದ ಸಚಿವ ಸ್ಥಾನ

KannadaprabhaNewsNetwork |  
Published : Jun 05, 2026, 03:00 AM IST
ಅಪ್ಪಾಜಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ನೇತೃತ್ವದ ಹೊಸ ಸರ್ಕಾರದ ಮೊದಲ ಸಚಿವ ಸಂಪುಟದಲ್ಲಿ ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನ ಸಿಗುವ ಭರವಸೆಯಲ್ಲಿದ್ದ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ಕಾರ್ಯಕರ್ತರು ತೀವ್ರ ನಿರಾಶೆಗೊಳಗಾಗಿದ್ದಾರೆ. ಅಲ್ಲದೇ, ಎರಡನೇ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ಸ್ಥಾನ ನೀಡದಿದ್ದರೆ ಹೋರಾಟಕ್ಕೂ ಅವರು ಮುಂದಾಗಿದ್ದಾರೆ.ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಕೊನೆಯ ಕ್ಷಣದಲ್ಲಿಯೇ ಸಚಿವ ಸ್ಥಾನ ಕೈತಪ್ಪಿತ್ತು.

ನಾರಾಯಣ ಮಾಯಾಚಾರಿ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ನೇತೃತ್ವದ ಹೊಸ ಸರ್ಕಾರದ ಮೊದಲ ಸಚಿವ ಸಂಪುಟದಲ್ಲಿ ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನ ಸಿಗುವ ಭರವಸೆಯಲ್ಲಿದ್ದ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ಕಾರ್ಯಕರ್ತರು ತೀವ್ರ ನಿರಾಶೆಗೊಳಗಾಗಿದ್ದಾರೆ. ಅಲ್ಲದೇ, ಎರಡನೇ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ಸ್ಥಾನ ನೀಡದಿದ್ದರೆ ಹೋರಾಟಕ್ಕೂ ಅವರು ಮುಂದಾಗಿದ್ದಾರೆ.ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಕೊನೆಯ ಕ್ಷಣದಲ್ಲಿಯೇ ಸಚಿವ ಸ್ಥಾನ ಕೈತಪ್ಪಿತ್ತು. ಆಗಲೂ ತೀವ್ರ ನಿರಾಶೆಗೊಂಡಿದ್ದ ಅವರ ಅಭಿಮಾನಿಗಳು, ನಾಡಗೌಡರಿಗೆ ಪದೇ ಪದೇ ಅನ್ಯಾಯವಾಗುತ್ತಿದೆ ಎಂದು ಬಹಿರಂವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು. ಮಾತ್ರವಲ್ಲ, ಸಚಿವ ಸ್ಥಾನಕ್ಕೆ ಶಾಸಕ ಸಿ.ಎಸ್‌.ನಾಡಗೌಡ ಅವರನ್ನು ಪರಿಗಣನೆ ಮಾಡುವಂತೆ ಹೈಕಮಾಂಡ್‌ಗೂ ಒತ್ತಾಯ ಮಾಡಿದ್ದರು.

ಆದರೆ, ಸಚಿವ ಸ್ಥಾನ ವಂಚಿತರಾಗಿದ್ದ ಇವರನ್ನು ಕರ್ನಾಟಕ ಸೋಪ್‌ ಮತ್ತು ಡಿಟರ್ಜೆಂಟ್‌ ಲಿಮಿಟೆಡ್‌ (ಮೈಸೂರು ಸ್ಯಾಂಡಲ್‌ ಸೋಪ್‌)ಗೆ ಅಧ್ಯಕ್ಷರಾಗಿ ನೇಮಿಸಿದ್ದರು. ಆದರೆ, ಹಲ್ಲಿಲ್ಲದ ಹಾವು ಎಂಬಂತೆ ಅಧಿಕಾರ ಕೊಟ್ಟು ನಡೆಸದಂತೆ ಮಾಡುವ ಯತ್ನ ಮಾಡಿತು ಎಂಬ ಮಾತು ಅವರ ಬೆಂಬಲಿಗರಿಂದ ವ್ಯಕ್ತವಾಗಿದೆ. ಈ ರೀತಿ ಕೇವಲ ಮೂಗಿಗೆ ತುಪ್ಪ ಸವರಿದಂತೆ ಪ್ರಾಧಿಕಾರ, ನಿಗಮ ಮಂಡಳಿಗೆ ಅಧ್ಯಕ್ಷ ಸ್ಥಾನ ಕೊಟ್ಟು ಸಮಾಧಾನಪಡಿಸುವ ಯತ್ನ ನಡೆಯುತ್ತಿದೆಯೇ ಹೊರತು ಅವರ ಅನುಭವಕ್ಕೆ ತಕ್ಕುದಾದ ಸಚಿವ ಸ್ಥಾನ ನೀಡುವಲ್ಲಿ ಕಾಂಗ್ರೆಸ್‌ ವಿಫಲವಾಗುತ್ತಿದೆ ಎಂದು ಕ್ಷೇತ್ರದಲ್ಲಿ ತೀವ್ರ ಕುದಿಮೌನ ವ್ಯಕ್ತವಾಗಿದೆ. ಯಾವುದೇ ವ್ಯಕ್ತಿ ಪೂಜೆಗೆ ಹೊಂದಿಕೊಳ್ಳದೇ ಪಕ್ಷ ನಿಷ್ಠೆ ಹಾಗೂ ಪಕ್ಷದ ಬಲವರ್ಧನೆ ಗಾಗಿ ಹಗಲಿರುಳು ಶ್ರಮಿಸಿದ ಮುಖಂಡರಿಗೆ ಗೌರವ ಸಿಗುತ್ತಿಲ್ಲವೇಕೆ ಎಂಬುದು ಕಾರ್ಯಕರ್ತರ ಪ್ರಶ್ನೆಯಾಗಿದೆ.

ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದ ಅಪ್ಪಾಜಿ:

2013ರಲ್ಲಿಯೂ ಕಾಂಗ್ರೆಸ್‌ ಸರ್ಕಾರ ರಚನೆಯಾದ ಸಮಯದಲ್ಲಿ ದೆಹಲಿಯಿಂದ ಬಂದ ಪಟ್ಟಿಯಲ್ಲಿ ನಾಡಗೌಡರ ಹೆಸರಿತ್ತು. ಆದರೆ ಕೊನೆ ಗಳಿಗೆಯಲ್ಲಿ ಕೈಬಿಡಲಾಗಿತ್ತು. ಅಲ್ಲದೆ, 2023ರ ಕಾಂಗ್ರೆಸ್‌ ಸರ್ಕಾರದ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಸಚಿವ ಸ್ಥಾನಾಂಕಾಕ್ಷಿಗಳ ಪಟ್ಟಿಯಲ್ಲಿಯೂ ಇವರ ಹೆಸರಿತ್ತು. ಆದರೆ, ಕೊನೆಯ ಕ್ಷಣದಲ್ಲಿ ತಮ್ಮ ಹೆಸರನ್ನು ಕೈಬಿಡಲಾಗಿದೆ ಎಂದು ಸ್ವತಃ ಶಾಸಕ ಸಿ.ಎಸ್‌.ನಾಡಗೌಡ (ಅಪ್ಪಾಜಿ) ಅವರು ಈ ಹಿಂದೆ ಬಹಳಷ್ಟು ಬಾರಿ ಆಕ್ರೋಶ ವ್ಯಕ್ತಪಡಿಸಿದ್ದರು.

30-40 ವರ್ಷಗಳಿಂದ ರಾಜಕೀಯ ಮಾಡಿಕೊಂಡು ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ಸಚಿವ ಸ್ಥಾನಕ್ಕಾಗಿ ಎಂದಿಗೂ ಲಾಭಿ ಮಾಡದೆ, ನನ್ನ ದುಡಿಮೆಗೆ, ಪ್ರಾಮಾಣಿಕತೆ ಹಾಗೂ ಹಿರಿತನಕ್ಕೆ ಸಚಿವ ಸ್ಥಾನ ಸಿಗಬೇಕು ಎಂದು ಆಗಾಗ ಹೇಳುತ್ತಲೇ ಇದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿ ಪೂಜೆ ಹಾಗೂ ಲಾಬಿಗೆ ಮಾತ್ರ ಪ್ರಾಧಾನ್ಯತೆ ಇದೆ. ಹೀಗಾಗಿ, ನಮ್ಮ ನಾಯಕರಿಗೆ ಸಚಿವ ಸ್ಥಾನ ಸಿಗುತ್ತಿಲ್ಲ ಎಂಬ ಮಾತು ಮುದ್ದೇಬಿಹಾಳ ಮತಕ್ಷೇತ್ರದ ಜನರಿಂದ ಕೇಳಿ ಬರುತ್ತಿದೆ.

ಸಾಮೂಹಿಕ ರಾಜೀನಾಮೆಗೆ ಅಣಿ:

ಜಿಲ್ಲೆಯಲ್ಲಿಯೇ ಅದರಲ್ಲೂ ಕಾಂಗ್ರೆಸ್‌ನಲ್ಲಿ ಹಿರಿಯರು ಆಗಿರುವ ಶಾಸಕ ಸಿ.ಎಸ್‌.ನಾಡಗೌಡ ಅವರಿಗೆ ಕಾಂಗ್ರೆಸ್‌ ಸರ್ಕಾರ ಇದ್ದಾಗಲೇ ಪ್ರತಿ ಬಾರಿ ಅನ್ಯಾಯವಾಗುತ್ತಲೇ ಇದೆ. ಮೊದಲ ಹಂತದಲ್ಲಿಯೇ ಸೀನಿಯಾರಿಟಿ ಹಾಗೂ ಅನುಭವದ ಆಧಾರದ ಮೇಲೆ ಅವರಿಗೆ ಸಚಿವ ಸ್ಥಾನವನ್ನು ವರಿಷ್ಠರು ನೀಡಬೇಕಿತ್ತು. ಅದಾಗಿಲ್ಲ. ಆದರೆ, ಎರಡನೇ ಹಂತದಲ್ಲಿಯೂ ಅವರಿಗೆ ಇದೆ ರೀತಿ ಅನ್ಯಾಯವಾದರೆ ಸುಮ್ಮನೆ ಕೂಡಲು ಆಗುವುದಿಲ್ಲ ಎಂದು ಕಾಂಗ್ರೆಸ್‌ ವರಿಷ್ಠರಿಗೆ ಅವರ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಬೆಂಬಲಿಗರು ತೀಕ್ಷ್ಣ ಸಂದೇಶ ರವಾನಿಸಿದ್ದಾರೆ.

ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಮಾತ್ರವಲ್ಲ, ಜಿಲ್ಲೆಯಲ್ಲಿಯೂ ಕಾಂಗ್ರೆಸ್‌ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಅವರ ಪಾತ್ರ ಹಿರಿದಾಗಿದೆ. ಹೀಗಾಗಿ ಅವರನ್ನು ಎರಡನೇ ಹಂತದ ಸಂಪುಟದಲ್ಲಿ ಪರಿಗಣನೆ ಮಾಡಬೇಕು ಎಂದು ಆಗ್ರಹಿಸಿರುವ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು, ಪರಿಗಣಸದೇ ಇದ್ದರೆ ಸಾಮೂಹಿಕ ರಾಜೀನಾಮೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನಮ್ಮ ನಾಯಕರಿಗೆ ಸ್ಥಾನ ಸಿಗದೇ ಹೋದರೆ ನಮಗೂ ಅಧಿಕಾರ. ಹೊಣೆಗಾರಿಕೆ ಬೇಡ ಎಂದು ಹೇಳುತ್ತಿದ್ದಾರೆ.

-----

ಬಾಕ್ಸ್‌...

ಸಮರ್ಥ ಆಡಳಿತಗಾರ, ರಾಜಕೀಯ ಚತುರ

ಪ್ರತಿ ಸಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗೊಮ್ಮೆ ಸಿ.ಎಸ್‌.ನಾಡಗೌಡರ ಅಪಾರ ಶ್ರಮವಿರುತ್ತದೆ. ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ಬಾಗಲಕೋಟೆ ಉಪಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿ ಗೆಲುವಿಗೆ ನಾನಾ ತಂತ್ರಗಳನ್ನು ರೂಪಿಸುವಲ್ಲಿ ಇವರ ಪಾತ್ರವೂ ಇದೆ ಎಂಬುವುದರಲ್ಲಿ ಎರಡು ಮಾತಿಲ್ಲ. ರಾಜ್ಯ ಮಾತ್ರವಲ್ಲ, ಕೇಂದ್ರದ ವರಿಷ್ಠರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ನಾಡಗೌಡರು ಉತ್ತಮ ಆಡಳಿತಗಾರ. ಜತೆಗೆ ವಿಧಾನಸಭೆಯಲ್ಲಿ ಉತ್ತಮ ವಾಗ್ಮಿಯೂ ಹೌದು ಎನ್ನುವುದರಲ್ಲಿ ಎರಡು ಮಾತಿಲ್ಲ. ವಿಪಕ್ಷಗಳನ್ನು ತಮ್ಮ ಮಾತುಗಳಲ್ಲಿ ಕಟ್ಟಿ ಹಾಕಬಲ್ಲ ಸಮರ್ಥ ವಾಕ್‌ ಚತುರರು ಹೌದು ಎಂಬುವುದು ಅವರ ಬೆಂಬಲಿಗರ ವಾದ.

--------------

ಕೋಟ್‌

ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗದೆ ಇರುವುದು ಬೇಸರ ತಂದಿದೆ. ಮೂರು ದಶಕಗಳಿಂದ ಪಕ್ಷಕ್ಕೆ ನಿಷ್ಠೆ, ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ. ಹೀಗಾಗಿ, ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಮುಂದೆ ಸಿಗುತ್ತದೆ ಎಂಬ ವಿಶ್ವಾಸವಿದೆ.

-ಸಿ.ಎಸ್‌.ನಾಡಗೌಡ, ಶಾಸಕ ಮುದ್ದೇಬಿಹಾಳ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರು ಜನ ಹತ್ಯೆ: ಮತ್ತೆ 6 ಆರೋಪಿಗಳ ಸೆರೆ
ನ್ಯಾಯಾಧೀಕರಣದ ತೀರ್ಪಿನ ಬಗ್ಗೆ 8ಕ್ಕೆ ವಿಚಾರ ಸಂಕಿರಣ