ಕೊಪ್ಪಳ: ಗ್ರಾಮೀಣ ಭಾಗದಲ್ಲಿ ಕನ್ನಡ ಸಾಹಿತ್ಯ ಚಟುವಟಿಕೆ ವಿಸ್ತರಿಸುವ ಹೊಣೆ ಹೋಬಳಿ ಘಟಕದ ಮೇಲಿದೆ. ಶಾಲೆ, ಕಾಲೇಜು ಹಾಗೂ ಸಾರ್ವಜನಿಕ ಸಮಾರಂಭಗಳನ್ನು ಆಯೋಜಿಸುವ ಮೂಲಕ ಕನ್ನಡದ ಬಗ್ಗೆ ಕಾರ್ಯಕ್ರಮ ಆಯೋಜಿಸಬೇಕು. ಕನ್ನಡ ನಾಡು, ನುಡಿ ಸಂಸ್ಕೃತಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣೆಗೌಡ ಪಾಟೀಲ ಹೇಳಿದ್ದಾರೆ.ಸಮೀಪದ ಭೈರಾಪುರ ಗ್ರಾಮದ ಶ್ರೀರಾಮ ಮಂದಿರದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ, ಕೊಪ್ಪಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಅಪ್ಪು ಪ್ರಕಾಶನ ಭೈರಾಪುರ ಗ್ರಾಮದ ಸಂಯುಕ್ತ ಆಶ್ರಯದಲ್ಲಿ ನಡೆದ ಹೊಬಳಿ ಕನ್ನಡ ಸಾಹಿತ್ಯ ಪರಿಷತ್ ಅಳವಂಡಿ ಘಟಕದ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಹಾಗೂ ದ್ಯಾಮರಾಜ. ವೈ.ಸಿಂದೋಗಿ ಅವರ ಕವನ ಸಂಕಲನ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನ ನೀಡಿದ ರಾಷ್ಟ್ರೀಯ ಸ್ಥಾನಮಾನದ ಭಾಷೆಯಲ್ಲಿ ಕನ್ನಡ ಕೂಡ ಒಂದು. 21 ಭಾಷೆಗಳಲ್ಲಿ ಕೇವಲ 5 ಭಾಷೆಗಳು ಶಾಸ್ತ್ರೀಯ ಭಾಷೆಯ ಸ್ಥಾನಮಾನ ಹೊಂದಿವೆ. ಅದರಲ್ಲಿ ಕನ್ನಡ ಕೂಡ ಒಂದು. ಕನ್ನಡಕ್ಕೆ ಸಂಬಂಧಪಟ್ಟ ಹೆಚ್ಚು ಹೆಚ್ಚು ಕಾರ್ಯಕ್ರಮ ಆಯೋಜಿಸುವದರಿಂದ ಕನ್ನಡ ಮತ್ತು ಕನ್ನಡದ ಬಗ್ಗೆ ಸಾಹಿತ್ಯ ಆಸಕ್ತಿ ಹುಟ್ಟುತ್ತದೆ ಎಂದರು.
ಶ್ರೀಮರುಳಾರಾದ್ಯ ಶಿವಾಚಾರ್ಯರು ಮಾತನಾಡಿ, ಕನ್ನಡ ಹೃದಯದ ಭಾಷೆಯಾಗಿದೆ. ಭಾಷೆಯನ್ನು ನಿರಂತರವಾಗಿ ಬಳಸುವದರಿಂದ ಭಾಷೆ ಉಳಿಯಲು ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿ ಎಲೆ ಮರೆಯ ಕಾಯಿಯಂತೆ ಕನ್ನಡ ಸಾಹಿತ್ಯದ ಅನೇಕ ಪ್ರತಿಭೆಗಳು ಇವೆ.ಅವುಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಕೆಲಸ ಕನ್ನಡದ ಮನಸುಗಳು ಮಾಡಬೇಕಿದೆ. ಯುವ ಜನತೆ ಪುಸ್ತಕ ಓದುವದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಪುಸ್ತಕವನ್ನು ತಲೆ ತಗ್ಗಿಸಿ ಓದಿದರೆ ಮುಂದೆ ಅದು ನಿಮ್ಮನ್ನು ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ ಎಂದರು.ಭೈರಾಪುರ ಗ್ರಾಮದ ದ್ಯಾಮರಾಜ ಸಿಂದೋಗಿ ಅವರು ರಚಿಸಿದ ದೇವರ ಜನ್ಮದಾತ ಕವನ ಸಂಕಲನವನ್ನು ಸಾಹಿತಿ ಎಚ್.ಎಸ್. ಗೌಡರ ಇಲಕಲ್, ಬೆಳ್ಳಿ ನನ್ನ ಹಳ್ಳಿ ಕವನ ಸಂಕಲನ ಉಪನ್ಯಾಸಕ ಶಂಕರ ಮಾಳೆಕೊಪ್ಪ ಬಿಡುಗಡೆ ಮಾಡಿದರು.