ರಾಜಕೀಯಕ್ಕಾಗಿ ಭಾಲ್ಕಿಗೆ ಎಂಟ್ರಿ, ನಾಗಮಾರಪಾಳ್ಳಿ ಸುಳಿವು

KannadaprabhaNewsNetwork |  
Published : Mar 11, 2025, 12:48 AM IST
ಚಿತ್ರ 10ಬಿಡಿಆರ್‌2ಬೀದರ್‌ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ. | Kannada Prabha

ಸಾರಾಂಶ

ಇನ್ನು, ಭಾಲ್ಕಿಯಲ್ಲಿ ಜಮೀನು ಖರೀದಿಸಲಾಗುತ್ತಿರುವ ಕುರಿತಾದ ಪ್ರಶ್ನೆಗೆ ಉತ್ತರಿಸಿ ರಾಜಕೀಯ ನಿಂತ ನೀರಲ್ಲ. ಜನ ಅಪೇಕ್ಷೆ ಪಟ್ಟರೆ ಎಲ್ಲಿಯಾದರೂ ಚುನಾವಣಾ ಕಣಕ್ಕೆ ಧುಮುಕಬಹುದು ಎಂದು ಉಮಾಕಾಂತ ನಾಗಮಾರಪಲ್ಲಿ ಸುಳಿವಿತ್ತರು,

ಕನ್ನಡಪ್ರಭ ವಾರ್ತೆ, ಬೀದರ್‌

ರಾಜಕಾರಣ ನಿಂತ ನೀರಲ್ಲ. ಭಾಲ್ಕಿಯಲ್ಲಿ ಜಾಗ ಖರೀದಿಸಲಾಗುತ್ತಿದೆ. ಸೂಕ್ತ ಸಮಯದಲ್ಲಿ ನಿರ್ಧಾರ ಪ್ರಕಟಿಸುವುದಾಗಿ ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಉಮಾಕಾಂತ ನಾಗಮಾರಪಳ್ಳಿ ಸ್ಪಷ್ಟಪಡಿಸಿದರು.ಅವರು ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ, ಸಕ್ರೀಯ ರಾಜಕೀಯಕ್ಕೆ ಇಳಿಯುವ ಕುರಿತು ಕಾರ್ಯ ಕರ್ತರು, ಸ್ನೇಹಿತರು ಒತ್ತಾಯಿಸುತ್ತಿರುವದೇನೋ ಹೌದು, ಸದ್ಯ ಯಾವುದೇ ಕ್ಷೇತ್ರ ಖಾಲಿ ಇಲ್ಲ ಹಾಗಾಗಿ ಯಾವುದನ್ನೂ ನಿರ್ಧಾರ ಮಾಡಿಲ್ಲ ಎಂದರು.ಇನ್ನು, ಭಾಲ್ಕಿಯಲ್ಲಿ ಜಮೀನು ಖರೀದಿಸಲಾಗುತ್ತಿರುವ ಕುರಿತಾದ ಪ್ರಶ್ನೆಗೆ ಉತ್ತರಿಸಿ ರಾಜಕೀಯ ನಿಂತ ನೀರಲ್ಲ. ಜನ ಅಪೇಕ್ಷೆ ಪಟ್ಟರೆ ಎಲ್ಲಿಯಾದರೂ ಚುನಾವಣಾ ಕಣಕ್ಕೆ ಧುಮುಕಬಹುದು ಎಂದು ಮುಂಬರುವ ದಿನಗಳಲ್ಲಿ ಈಶ್ವರ ಖಂಡ್ರೆ ವಿರುದ್ಧ ತೊಡೆ ತಟ್ಟುವ ಬಗ್ಗೆ ಪರೋಕ್ಷವಾಗಿ ಉಮಾಕಾಂತ ನಾಗಮಾರಪಳ್ಳಿ ಸುಳಿವು ನೀಡಿದರು.ಇನ್ನು ಡಿಸಿಸಿ ಬ್ಯಾಂಕ್‌ ಆಡಳಿತ ನಿರ್ವಹಣೆ ಬಗ್ಗೆ ಹೇಳಿಕೊಳ್ಳುವಂಥದ್ದೇನೂ ಇಲ್ಲ. ನಾನು ಸಲಹೆಗಳನ್ನು ನೀಡುತ್ತೇನೆ ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಇರೋಲ್ಲ. ನಾವು ಹೇಳಿದ್ದನ್ನು ಬರೆದುಕೊಟ್ಟು ಅದಕ್ಕೆ ಹಿಂಬರಹ ಪಡೆಯುವ ಸ್ಥಿತಿ ಇದೆ. ನಾವು ಕಟ್ಟಿದ ಸಹಕಾರ ಸಂಸ್ಥೆಗಳನ್ನು ಉಳಿಸಲು ಸಾಕಷ್ಟು ಪ್ರಯತ್ನ ಮಾಡ್ತೇವೆ ಎಂದರು.ಇನ್ನು ಸ್ಥಳೀಯ ಸಹಕಾರ ಸಂಸ್ಥೆಯ ಚುನಾವಣೆಯೊಂದರಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಮರ್‌ ಖಂಡ್ರೆ ಅವರ ಪಿಎ ಎಂದು ಹೇಳಿಕೊಂಡಿರುವ ರಮೇಶ ಚಿದ್ರಿ ಹಾಗೂ ಅಭಿವೃದ್ಧಿ ಅಧಿಕಾರಿಯೊಬ್ಬರೂ ಬಂದಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ಅಭ್ಯರ್ಥಿ ಹೊರತುಪಡಿಸಿ ಬೇರೆಯವರಿಗೆ ಅವಕಾಶ ಇರೋಲ್ಲ, ಅವರ ಒಳ ನುಸುಳುವಿಕೆಯನ್ನು ಪ್ರಶ್ನಿಸಿದ್ದು ಸತ್ಯ ನಂತರ ಹೊರಗಡೆ ನಡೆದ ವಾಗ್ವಾದವನ್ನು ಮುಂದಿಟ್ಟ ನನ್ನ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಅದಕ್ಕೆ ಕಾನೂನು ಮೊರೆ ಹೋಗಿದ್ದೇವೆ ಎಂದು ನಾಗಮಾರಪಳ್ಳಿ ಸ್ಪಷ್ಟನೆ ನೀಡಿದರು.ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಷ್ಟೇ ಏಕೆ ಜಿಲ್ಲೆಯ ಮೂರು ಕಾರ್ಖಾನೆಗಳಿಗೂ ಕೇಂದ್ರದ ಎನ್‌ಸಿಡಿಸಿಯಿಂದ ಹಣ ಸಿಗುತ್ತೆ. ಆದರೆ, ಅದಕ್ಕೆ ರಾಜ್ಯ ಸರ್ಕಾರ ಬ್ಯಾಂಕ್‌ ಗ್ಯಾರಂಟಿ ಕೊಡಬೇಕು. ಅದು ಆಗುತ್ತಿಲ್ಲ. ಸದ್ಯ ಓಟಿಎಸ್‌ ಇಲ್ಲವಾದಲ್ಲಿ ಬ್ಯಾಂಕ್‌ ಗ್ಯಾರಂಟಿ ಬಿಟ್ಟರೆ ಕಾರ್ಖಾನೆಗಳು ಉಳಿಯೋದು ಅಸಾಧ್ಯ. ಇದರೊಟ್ಟಿಗೆ ಡಿಸಿಸಿ ಬ್ಯಾಂಕ್‌ ಸಹ ಕಷ್ಟಕ್ಕೆ ಸಿಲುಕುತ್ತೆ ಎಂದರು.ಸದ್ಯ ನಾರಂಜಾ ಸಕ್ಕರೆ ಕಾರ್ಖಾನೆಯ ಸಾಲ ವಸೂಲಾತಿಗಾಗಿ ಡಿಸಿಸಿ ಬ್ಯಾಂಕ್‌ನ ವರ್ತನೆ ಬೇಸರ ಮೂಡಿಸಿದೆ. ಬ್ಯಾಂಕ್‌ ಹಿತಕರ ನಿರ್ಣಯ ತೆಗೆದುಕೊಳ್ಳುತ್ತಿಲ್ಲ. ನಾನು ಅಧ್ಯಕ್ಷನಾಗಿದ್ದಾಗ ನಿರಂತರ ಲಾಭದಲ್ಲಿ ಇದ್ದೆವು, ಇನ್ನೂ ಆಡಿಟ್‌ ವರದಿ ಬಂದಿಲ್ಲ, ಅದಾಗ್ಯೂ 118ಕೋಟಿ ರು. ನಷ್ಟದಲ್ಲಿದೆ ಎಂದು ಹೇಳಲಾಗುತ್ತಿದೆ. 2500 ಕೋಟಿ ರು.ಗಳ ಠೇವಣಿ ಈಗ 2 ಸಾವಿರ ಕೋಟಿ ರು.ಗಳಿಗೆ ಇಳಿದಿದೆ. ಇದು ಆತಂಕದ ವಿಷಯ ಎಂದು ಉಮಾಕಾಂತ ನಾಗಮಾರಪಳ್ಳಿ ತಿಳಿಸಿದರು. ಈ ಸಂದರ್ಭದಲ್ಲಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸಿದ್ರಾಮ ಇದ್ದರು.ಡಿಸಿಸಿ ಬ್ಯಾಂಕ್‌ನ ಕಿರುಕುಳ ನಿಂತಲ್ಲಿ 25ರ ಒಳಗಾಗಿ ಕಬ್ಬಿನ ಬಾಕಿ ಪಾವತಿ: ಸಿದ್ರಾಮ್‌ಬೀದರ್‌: ಡಿಸಿಸಿ ಬ್ಯಾಂಕ್‌ ಸಾಲ ವಸೂಲಾತಿ ನೆಪದಲ್ಲಿ ನೀಡುತ್ತಿರುವ ಕಿರುಕುಳ, ಅಡತಡೆ ನಿಂತಿದ್ದೆಯಾದಲ್ಲಿ ಇದೇ ಮಾರ್ಚ 25ರ ಒಳಗಾಗಿ ಕಬ್ಬು ಪೂರೈಸಿದ ರೈತ ಬೆಳೆಗಾರರಿಗೆ ಸಂಪೂರ್ಣ ಬಾಕಿ ಪಾವತಿಸಲು ಕಾರ್ಖಾನೆ ಸಜ್ಜಾಗಿದೆ ಎಂದು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸಿದ್ರಾಮ್‌ ತಿಳಿಸಿದರು.

ಅವರು ಈ ಕುರಿತು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಡಿಸೆಂಬರ್‌ 15ರ ವರೆಗೆ ಕಬ್ಬು ಪೂರೈಸಿದ ಎಲ್ಲ ರೈತರಿಗೆ ಹಣ ಪಾವತಿಸ ಲಾಗಿದೆ. ಇನ್ನುಳಿದ ಎಲ್ಲ ಬಾಕಿಯನ್ನೂ ಪಾವತಿ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಪ್ರಸಕ್ತ ಹಂಗಾಮಿನಲ್ಲಿ 3,01,699 ಮೆಟ್ರಿಕ್‌ ಟನ್‌ ಕಬ್ಬು ನುರಿಸಿ ಶೇ. 9.75 ಇಳುವರಿಯೊಂದಿಗೆ 2.94ಲಕ್ಷ ಟನ್‌ ಸಕ್ಕರೆ ಉತ್ಪಾದಿಸಲಾಗಿದೆ ಹಾಗೆಯೇ 14 ಸಾವಿರ ಟನ್‌ ಮೊಲ್ಯಾಸಿಸ್‌ 69ಲಕ್ಷ ಯುನಿಟ್‌ ವಿದ್ಯುತ್‌ ಉತ್ಪಾದಿಸಿದ್ದೇವೆ ಎಂದರು.ರೈತರ ಬಾಕಿ ಪಾವತಿ, ಕಾರ್ಖಾನೆಯ ಸಿಬ್ಬಂದಿ ವೇತನ, ರಿಪೇರಿ ಮತ್ತಿತರ ಎಲ್ಲ ಖರ್ಚುಗಳನ್ನು ತೆಗೆದಲ್ಲಿ (ಬ್ಯಾಂಕ್‌ ಸಾಲಕ ಬಡ್ಡಿ ಹೊರತುಪಡಿಸಿ) ಕಾರ್ಖಾನೆ 20ಕೋಟಿ ರು.ಗಳ ಲಾಭದಲ್ಲಿದೆ. ಪ್ರತಿ ವರ್ಷ 20ಕೋಟಿ ರು.ಗಳನ್ನು ಬ್ಯಾಂಕ್‌ಗೆ ಪಾವತಿಸಲು ಸಿದ್ದರಿದ್ದೇವೆ ಆದರೆಡಿಸಿಸಿ ಬ್ಯಾಂಕ್‌ ಅಧ್ಯಕ್ಷರು ಕಾರ್ಖಾನೆಯನ್ನು ಮುಚ್ಚಿಸಲು ಯತ್ನಿಸುವಿರುವಂತೆ ಕಾಣುತ್ತಿದೆ ಎಂದು ಆರೋಪಿಸಿದರು.ಕಾರ್ಖಾನೆಗೆ 55ಕೋಟಿ ರು.ಗಳ ಅಸಲು ಅದಕ್ಕೆ ಬಡ್ಡಿ ಸೇರಿ 669ಕೋಟಿ ರು.ಗಳಿಗೆ ಬಂದು ನಿಂತಿದೆ. ಇದಕ್ಕೆ ಮೂಲ ಕಾರಣ ಉಚಿತ ಸಕ್ಕರೆ ವಿತರಣೆ, ಎಫ್‌ಆರ್‌ಪಿ ದರಕ್ಕಿಂತ ಹೆಚ್ಚಿನ ದರ ನೀಡುವ ಕುರಿತು ಆಯಾ ವರ್ಷಗಳಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರುಗಳು, ಸರ್ಕಾರದ ನಿರ್ದೇಶನ. ನಾವು ಕಾರ್ಖಾನೆಗಾಗಿ ಪಡೆದ ಸಾಲದ ಪೈಕಿ ಇಲ್ಲಿಯವರೆಗೆ 280ಕೋಟಿ ರು.ಗಳನ್ನು ರೈತರಿಗೇ ನೀಡಿದ್ದೇವೆ ಹೊರತು ಸ್ವಂತಕ್ಕಾಗಿ ಬಳಸಿಲ್ಲ ಅದಕ್ಕಾಗಿ ಸಾಲ 588 ಕೋಟಿ ರು.ಗಳಿಗೆ ಏರಿಕೆಯಾಗಿದೆ ಅದಕ್ಕೆ ಕಾರ್ಖಾನೆಯ 809ಕೋಟಿ ರು.ಗಳ ಕಾರ್ಖಾನೆಯ ಆಸ್ತಿಯನ್ನು ಅಡವಿಡಲಾಗಿದೆ ಎಂದು ವಿವರ ನೀಡಿದರು.ನಾವು ಸಾಲ ಮರುಪಾವತಿಗೆ ಸಿದ್ಧರಿದ್ದೇವೆ. ಓಟಿಸ್‌ಗೆ ಮುಂದೆ ಬಂದರೆ 200 ಕೋಟಿ ರು.ಗಳ ವರೆಗೆ ಸಾಲ ಚುಕ್ತಾ ಮಾಡಲು ಸಿದ್ದ. ಇಲ್ಲವಾದಲ್ಲಿ ಪ್ರತಿ ವರ್ಷ 20ಕೋಟಿ ರು.ಗಳನ್ನು ನೀಡ್ತೇವೆ ಅದೂ ಇಲ್ಲಾಂದ್ರೆ ಕೇಂದ್ರದ ಎನ್‌ಸಿಡಿಸಿ ಇಂದ ಸಾಲ ಕೊಡಿಸಲು ರಾಜ್ಯ ಸರ್ಕಾರದ ಗ್ಯಾರಂಟಿ ಕೊಡಿಸಿ. ರೈತರ ಹಿತಕ್ಕಾಗಿ ನಮ್ಮನ್ನು ಜೈಲಿಗೆ ಕಳುಹಿಸಿದರೂ ಹೋಗಲು ಸಿದ್ದ ಆದರೆ ಕಾರ್ಖಾನೆ ಮುಳುಗಲು ಬಿಡೋಲ್ಲ ಎಂದು ಎಚ್ಚರಿಸಿದರು.ಅಕ್ಟೋಬರ್‌ ತಿಂಗಳಲ್ಲಿ ನನ್ನ ಅಧಿಕಾರ ಅವಧಿ ಮುಗಿಯುತ್ತೆ ಚುನಾವಣೆ ಎದುರಾಗುತ್ತಿದೆ ಅದಕ್ಕಾಗಿ ಅಮರ ಖಂಡ್ರೆ ಅವರು ತಮ್ಮ ಪ್ಯಾನಲ್‌ ಮಾಡಿಕೊಳ್ಳಲು ತಯಾರಿ ನಡೆಸಿದ್ದಾರೆ ಅದಕ್ಕಾಗಿಯೇ ನಮಗೆ ಈ ರೀತಿಯ ಕಿರುಕುಳ ನೀಡುತ್ತಿದ್ದಾರೆ ಬ್ಯಾಂಕ್‌ನ ನೂರಾರು ಜನ ಕಾರ್ಖಾನೆಗೆ ಬೀಗ ಜಡಿಯಲು ಬಂದರೆ 10ಸಾವಿರ ರೈತರು ಅಲ್ಲಿಗೆ ಬರ್ತಾರೆ ಎಚ್ಚರ ಎಂದರು.--ಬಾಕ್ಸ್‌---

ನಿರ್ಲಕ್ಷ್ಯಕ್ಕೆ ಒಳಗಾದ ಬ್ಯಾಂಕ್‌ ಪರಿಸರಡಿಸಿಸಿ ಬ್ಯಾಂಕ್‌ ಆವರಣದಲ್ಲಿ ಇರುವ ಬ್ಯಾಂಕ್‌ ಕಟ್ಟಿ ಬೆಳೆಸಿದ ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರ ಮೂರ್ತಿಯ ಪರಿಸರ ಅತ್ಯಂತ ನಿರ್ಲಕ್ಷಕ್ಕೆ ಒಳಗಾಗಿದೆ. ಕಸವನ್ನೂ ಹೊಡೆಸಿಲ್ಲ. ದೀಪವನ್ನೂ ಹಚ್ಚೋಲ್ಲ. ಒಂದು ಹೂವು ಕೂಡ ಅಲ್ಲಿಲ್ಲ. ಅಧಿಕಾರ ಹಾಗೂ ಹಣದ ಮದ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಮರ ಖಂಡ್ರೆ ಅವರಿಗೆ ತಲೆಗೇರಿದೆ ದೇವರು ನಿಮ್ಮನ್ನು ಕ್ಷಮಿಸೋಲ್ಲ ಎಂದು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸಿದ್ರಾಮ್‌ ಬೇಸರ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌