- ಜಿಲ್ಲಾ , ತಾಲೂಕು ಕಸಾಪ, ಮಹಿಳಾ ಘಟಕಗಳ ಸಹಯೋಗದಲ್ಲಿ ದತ್ತಿ ಉಪನ್ಯಾಸ, ಪರಿಸರ ದಿನಾಚರಣೆ
ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಾತ್ರ ತುಂಬಾ ಹಿರಿದಾಗಿದ್ದು ಅವರಿಂದಾಗಿ ನಾಡಿನಲ್ಲಿ ಅತ್ಯುತ್ತಮ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದು ಕಡೂರು ರೋಟರಿ ಕ್ಲಬ್ ಅಧ್ಯಕ್ಷ ಟಿ.ಡಿ. ರಾಜನ್ ಹೇಳಿದರು.
ತಾಲೂಕಿನ ಬಿಸಲೇಹಳ್ಳಿ ಗ್ರಾಮದ ಶ್ರೀ ಬಾಬು ನರೇಂದ್ರ ಪ್ರೌಢಶಾಲೆಯಲ್ಲಿ ಜಿಲ್ಲಾ , ತಾಲೂಕು ಕಸಾಪ, ಮಹಿಳಾ ಘಟಕಗಳ ಸಹಯೋಗದಲ್ಲಿ ನಡೆದ ದತ್ತಿ ಉಪನ್ಯಾಸ ಮತ್ತು ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಒಂದು ಮನೆ ಒಂದು ಮರ ಎನ್ನುವ ಚಿಂತನೆಯೊಂದಿಗೆ ಸಾಲುಮರದ ತಿಮ್ಮಕ್ಕನನ್ನು ನಾವು ಆದರ್ಶವಾಗಿ ಇರಿಸಿಕೊಂಡು ಅವರ ಪದ್ಧತಿಯನ್ನು ನಾವುಗಳು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.ವಚನ ಸಾಹಿತ್ಯ ಅತ್ಯಂತ ಶ್ರೀಮಂತ ಹಾಗೂ ಶರಣ ಸಂಸ್ಕೃತಿ ಬಿಂಬಿಸುವ ಕಲ್ಪನೆಯಾಗಿದೆ. ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯ ವಿಶೇಷ ಕೊಡುಗೆ ನೀಡಿದೆ. ಬಸವಣ್ಣನವರು ಹಾಗೂ ಅಂದಿನ ಎಲ್ಲ ಶಿವಶರಣರು ಕಾಯಕ ದಾಸೋಹಕ್ಕೆ ಹೆಚ್ಚು ಮನ್ನಣೆ ನೀಡಿ ಮಾನವೀಯತೆಯನ್ನು ಮುಂಚೂಣಿಗೆ ತಂದ ಅನುಭವಿಗಳು. ಜಾತಿ, ಮತ, ಪಂಥ ಪರಂಪರೆ, ಉಚ್ಚ ನೀಚ ಗಂಡು-ಹೆಣ್ಣು ಎಂಬ ಭೇದ ಭಾವ ತೊಡೆದು ಹಾಕಿ ಎಲ್ಲರಿಗೂ ಸಮಾನತೆ ನೀಡಿದವರು ಶರಣರು. ಒಂದು ವೇಳೆ ಅಂಬೇಡ್ಕರ್ ಕರ್ನಾಟಕದಲ್ಲಿ ಜನಿಸಿದ್ದರೆ ಅವರು ಬಸವಣ್ಣನವರ ಅನುಯಾಯಿಗಳಾಗುತ್ತಿದ್ದರು ಎಂಬುದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ ಎಂದು ಹೇಳಿದರು.
ತರೀಕೆರೆ ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್ ಕುಮಾರವ್ಯಾಸ ಭಾರತದ ಪಠ್ಯಾಧಾರಿತ ಪದ್ಯ ವಿಶ್ಲೇಷಣೆ ಮಾಡಿ ಗಮಕ ಗಾಯನ ಮತ್ತು ವಾಚನ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.
ಕಡೂರು ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜಶೇಖರ್ ಶಾಲಾ ಆವರಣದಲ್ಲಿ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಕ್ಷಕಿ ಪಲ್ಲವಿ ಪರಿಸರದ ಹಾನಿಯಿಂದಾಗುವ ದುಷ್ಪರಿಣಾಮದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಮಕ್ಕಳಿಗೆ ಪರಿಸರ ಕುರಿತು ಚಿತ್ರಕಲೆ ಬಿಡಿಸಿದಂತಹ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕರಾದ ಪಲ್ಲವಿ ಪರಮೇಶ್, ಅಪೂರ್ವ, ಪ್ರಕಾಶ್, ಸುಧಾಮಣಿ, ಲತಾ ಮುಂತಾದವರು ಉಪಸ್ಥಿತರಿದ್ದರು.
11ಕೆಕೆಡಿಯು2.ಕಡೂರು ತಾಲೂಕಿನ ಬಿಸಲೇಹಳ್ಳಿ ಗ್ರಾಮದ ಶ್ರೀ ಬಾಬು ನರೇಂದ್ರ ಪ್ರೌಢಶಾಲೆಯಲ್ಲಿ ಜಿಲ್ಲಾ, ತಾಲೂಕು ಕಸಾಪ ಮಹಿಳಾ ಘಟಕಗಳ ಸಹಯೋಗದಲ್ಲಿ ದತ್ತಿ ಉಪನ್ಯಾಸ ಮತ್ತು ಪರಿಸರ ದಿನಾಚರಣೆ ನಡೆಯಿತು.