ಕನ್ನಡಪ್ರಭ ವಾರ್ತೆ ಹನೂರು ಮಲೆಮಹದೇಶ್ವರ ಬೆಟ್ಟಕ್ಕೆ ಬರುವ ಪ್ರವಾಸಿಗರನ್ನು ತನ್ನತ್ತ ಸೆಳೆಯಲು ಅಂಬಿಗರೇ ವಿನೂತನ ಮಾದರಿಯಲ್ಲಿ ನಾಮಫಲಕ ಅಳವಡಿಸುವ ಮೂಲಕ ಪ್ರವಾಸೋದ್ಯಮ ಇಲಾಖೆಗೆ ಸೆಡ್ಡು ಹೊಡೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೊಗೆನಕಲ್ ಫಾಲ್ಸ್ ಜಲಪಾತಕ್ಕೆ ಪ್ರವಾಸಿಗರ ಸಂಖ್ಯೆ ಕ್ಷೀಣಿಸುತ್ತಿದೆ. ಈ ಭಾಗದಲ್ಲಿ ಈಗಾಗಲೇ ಅರಣ್ಯ ಇಲಾಖೆ ವತಿಯಿಂದ ಸಫಾರಿ ಆರಂಭ ಮಾಡಲಾಗಿದೆ. ಹೊಗೇನಕಲ್ ಫಾಲ್ಸ್ ಜಲಪಾತದಲ್ಲಿ ತೆಪ್ಪದ ಮೂಲಕ ಫಾಲ್ಸ್ ವೀಕ್ಷಣೆ ಮಾಡಬಹುದು. ಆದರೆ ಅಭಿವೃದ್ಧಿಪಡಿಸಬೇಕಾದ ಪ್ರವಾಸೋದ್ಯಮ ಇಲಾಖೆ ಇತ್ತ ಗಮನ ಹರಿಸದೆ ಇರುವುದರಿಂದ ಪ್ರವಾಸೋದ್ಯಮಕ್ಕೆ ಪೆಟ್ಟು ನೀಡಿದೆ. ಈ ನಿಟ್ಟಿನಲ್ಲಿ ಅಂಬಿಗರೆ ಚಂದ ವಸೂಲಿ ಮಾಡಿ ನಾಮಫಲಕ ಅಳವಡಿಸಿದ್ದಾರೆ.
ಅರಣ್ಯ ಇಲಾಖೆಯಿಂದ ತಾರತಮ್ಯ:ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಅಜ್ಜೀಪುರ ಸಮೀಪದ ಉಡುತೊರೆ ಹಳ್ಳ ಜಲಾಶಯದ ಸಫಾರಿ ಕೇಂದ್ರದ ಬಗ್ಗೆ ಕೊಳ್ಳೇಗಾಲದಿಂದ ಅಜ್ಜೀಪುರ ಗ್ರಾಮದವರೆಗೆ, ಕೌದಳ್ಳಿ ಗ್ರಾಮದಿಂದ ಅಜ್ಜೀಪುರ ಗ್ರಾಮದವರೆಗೆ ಹಲವಾರು ನಾಮಪಲಕಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ಫಲಕಗಳನ್ನು ಹಾಕಿದ್ದಾರೆ. ಆದರೆ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿರುವ ಗೋಪಿನಾಥಂ ಸಫಾರಿ ಹಾಗೂ ಹೊಗೇನಕಲ್ ಫಾಲ್ಸ್ ಜಲಪಾತದ ಬಗ್ಗೆ ಯಾವುದೇ ನಾಮಫಲಕ ಅಳವಡಿಸದೆ ಇರುವುದರಿಂದ ಸಫಾರಿ ಹಾಗೂ ಹೊಗೆನಕಲ್ ಫಾಲ್ಸ್ ಜಲಪಾತಕ್ಕೆ ಪ್ರವಾಸಿಗರ ಸಂಖ್ಯೆ ಕ್ಷೀಣಿಸುತ್ತಿದೆ ಎನ್ನಲಾಗಿದೆ.
ಅರಣ್ಯ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಹೊಗೇನಕಲ್ ಫಾಲ್ಸ್ ಜಲಪಾತದ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಿದ್ದರೆ ಹೆಚ್ಚಿನ ಪ್ರವಾಸಿಗರು ಹೊಗೆನೇಕಲ್ ಫಾಲ್ಸ್ ಗೆ ಭೇಟಿ ನೀಡುತ್ತಿದ್ದರು. ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ಇಲ್ಲದೆ ಇರುವುದರಿಂದ ಪ್ರವಾಸಿಗರ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಅಂಬಿಗರೆ ನಾಮಫಲಕ ಅಳವಡಿಸಿದ್ದೇವೆ.ಮಣಿ, ಅಂಬಿಗ ಹೊಗೇನಕಲ್ ಜಲಪಾತ.