ಕನ್ನಡಪ್ರಭ ವಾರ್ತೆ ವಿಜಯಪುರ
ಈ ಐದು ದಿನಗಳಲ್ಲಿ ಜನಿಸಿದ ನಾಲ್ಕು ಶಿಶುಗಳಿಗೆ ಆಸ್ಪತ್ರೆಯಲ್ಲೇ ತೊಟ್ಟಿಲು ಕಾರ್ಯ ಹಾಗೂ ನಾಮಕರಣ ಮಾಡಲಾಗಿದೆ. ಮೂರು ಗಂಡು ಮಕ್ಕಳಿಗೆ ರಾಮ ಎಂದು ಹಾಗೂ ಒಂದು ಹೆಣ್ಣು ಮಗುವಿಗೆ ಸೀತಾ ಎಂದು ಹೆಸರಿಡಲಾಗಿದೆ. ಐದು ದಿನಗಳ ವರೆಗೆ ನಡೆದ ಅಯ್ಯೋಧ್ಯಾ ಸಂಭ್ರಮೋತ್ಸವದಲ್ಲಿ ಒಟ್ಟು 61 ಉಚಿತ ಹೆರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸಿದ್ಧಸಿರಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿರ್ದೇಶಕ ರಾಮಗನೌಡ ಪಾಟೀಲ ಯತ್ನಾಳ ಮಾತನಾಡಿ, ರಾಮ ಮಂದಿರದ ಹೋರಾಟದಲ್ಲಿ ನಮ್ಮ ತಂದೆಯವರಾದ ಬಸನಗೌಡ ರಾ. ಪಾಟೀಲ ಯತ್ನಾಳ ಅವರ ಪಾಲು ದೊಡ್ಡದಿದೆ. ಅವರ ಕನಸು ನನಸಾದ ಈ ಕ್ಷಣವನ್ನು ಇಂತ ಸಾಮಾಜಿಕ ಸೇವೆಯ ಮೂಲಕ ಅವಿಸ್ಮರಣಿಯಗೊಳಿಸುವಂತೆ ಮಾಡಿದ ಆಸ್ಪತ್ರೆಯ ವತಿಯಿಂದ ಈ ಅಪೂರ್ವ ಸೇವಾ ಕಾರ್ಯ ಕೈಗೊಳ್ಳಲಾಗಿದೆ ಎಂದರು.ಭಾರತದ ಇತಿಹಾಸದಲ್ಲಿಯೇ ರಾಮನ ಹೆಸರಿನಲ್ಲಿ ಇಂಥ ಸೇವೆಯನ್ನು ಒದಗಿಸಿದ್ದು ಜೆಎಸ್ಎಸ್ ಆಸ್ಪತ್ರೆ ಸಾಕ್ಷಿಯಾಯಿತು. ಈ ಸೇವೆ ಪಡೆದುಕೊಂಡ ಎಲ್ಲ ಮಹಿಳೆಯರಿಗೆ ಭವ್ಯ ರಾಮಮಂದಿರದ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಲಾಯಿತು.
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜೆಎಸ್ಎಸ್ (ಜ್ಞಾನಯೋಗಿ ಶ್ರೀ ಸಿದ್ಧೇಶ್ವರ) ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಹೆರಿಗೆಗೆ ಅವಕಾಶ ಕಲ್ಪಿಸಲಾಗಿತ್ತು. ನಾಮಕರಣ ವೇಳೆ ಇಲ್ಲಿನ ವೈದ್ಯರು, ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ತೊಟ್ಟಿಲು ಕಾರ್ಯ ಮಾಡಲಾಗಿದೆ. ಶಾಸಕ ಯತ್ನಾಳ ಅವರ ಪುತ್ರ ರಾಮನಗೌಡ ಪಾಟೀಲ್ ಯತ್ನಾಳ, ಆಸ್ಪತ್ರೆ ಸಿಇಒ ಶರಣು ಮಳಖೇಡ, ಮ್ಯಾನೇಜರ್ ಮಂಜುನಾಥ ಜುನಗೊಂಡ ಸೇರಿದಂತೆ ಇತರರು ಉಪಸ್ಥಿತರಿದ್ದರು.