ಕನ್ನಡಪ್ರಭ ವಾರ್ತೆ ನಂಜನಗೂಡು
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂಜನಗೂಡು ಒಂದು ಪ್ರಮುಖ ಧಾರ್ಮಿಕ ಕ್ಷೇತ್ರ. ಪ್ರಪಂಚದ ಮೂಲೆ ಮೂಲೆಯಲ್ಲೂ ನಂಜುಂಡೇಶ್ವರನ ದೇವಾಲಯ ಪ್ರಸಿದ್ದಿ ಪಡೆದಿದೆ. ಜೊತೆಗೆ ಪ್ರಮುಖ ಧಾರ್ಮಿಕ ಕ್ಷೇತ್ರವನ್ನಾಗಿ ನಿರ್ಮಿಸುವ ಹಂಬಲದಿಂದ ನಾನು ಸಾಕಷ್ಟು ಅನುದಾನ ತಂದು ದೇವಾಲಯ ಅಭಿವೃದ್ಧಿ ನಾಂದಿ ಹಾಡಿದ್ದೇನೆ. ನಾನು ಕಳೆದ 5 ವರ್ಷದಿಂದ ಕ್ಷೇತ್ರವನ್ನು ಶಾಂತಿಯ ಗೂಡಾಗಿ ಇಟ್ಟುಕೊಂಡಿದ್ದೆ. ನನ್ನ ಅವಧಿಯಲ್ಲಿ ಯಾವೊಂದು ದುರ್ಘಟನೆಯೂ ಸಂಭವಿಸದಂತೆ ಎಚ್ಚರಿಕೆ ವಹಿಸಿ ಶಾಂತಿಯ ಗೂಡನ್ನಾಗಿದ್ದೆ ಅಲ್ಲದೆ ಪ್ರತಿಯೊಂದು ಘಟನೆಯ ಸೂಕ್ಷ್ಮತೆಯನ್ನು ಅರಿತು ಕೆಲಸ ಮಾಡುತ್ತಿಿದ್ದೆೆ. ದೇವಾಲಯದ ಅಧಿಕಾರಿಗಳು ಜಾತ್ರೆೆ ಸೇರಿದಂತೆ ಪ್ರತಿಯೊಂದು ಕಾರ್ಯಕ್ರಮ ರೂಪಿಸುವಾಗಲೂ ನನ್ನ ಜೊತೆ ಚೆರ್ಚಿಸಿ ನಿರ್ಧಾರ ಕೈಗೊಳ್ಳುತ್ತಿದ್ದರು. ಆದರೆ ಇಲ್ಲಿನ ಸಂಪ್ರದಾಯದಂತೆ ಡಿ. 26 ರಂದು ಅಂಧಕಾಸುರನ ಸಂಹಾರ ಕಾರ್ಯಕ್ರಮದಲ್ಲಿ ದುರ್ಘಟನೆ ನಡೆದಿರುವುದು ನನಗೆ ಅತೀವ ದುಃಖ ತಂದಿದೆ ಎಂದರು.
ಈ ಪ್ರಕರಣದಿಂದ ನಂಜನಗೂಡಿನಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಆಪಾದಿಸಿದರು.ಶ್ರೀಕಂಠೇಶ್ವರ ಲಕ್ಷಾಂತರ ಭಕ್ತರ ಆರಾಧ್ಯ ದೈವ. ಹಲವು ವರ್ಷಗಳಿಂದ ಸಂಪ್ರದಾಯ ನಡೆದು ಬಂದಿದೆ. ಅದನ್ನು ಮೂಡನಂಬಿಕೆ ಎಂದು ಬಿಂಬಿಸುವವರು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಿ. ಅದನ್ನು ಬಿಟ್ಟು ದೇವರ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಅವರಿಗೆ ಧೈರ್ಯವಿದ್ದಲ್ಲಿ ಅಲ್ಪಸಂಖ್ಯಾತರ ಬಗ್ಗೆ ಪ್ರಶ್ನೆ ಮಾಡಲಿ ನೋಡೋಣ ಎಂದು ಗುಡುಗಿದರು.
ಘಟನೆ ನಡೆದು ಮೂರು ದಿನವಾದರೂ ಶಾಸಕ ದರ್ಶನ್ ಧ್ರುವನಾರಾಯಣ್ ಮೌನವಹಿಸಿರುವುದು ಅವರಿಗೆ ಶೋಭೆಯಲ್ಲ. ಕ್ಷೇತ್ರದಲ್ಲಿ ತಾಲೂಕು ಆಡಳಿತದ ವೈಫಲ್ಯ, ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದ್ದು ಕಳೆದ 8 ತಿಂಗಳಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ನಿಮ್ಮ ಕೈಯಲ್ಲಿ ಕಾನೂನು ಸುವ್ಯಸ್ಥೆ ಕಾಪಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಈ ಘಟನೆಯಿಂದ ಸಾಬೀತಾಗಿದೆ. ಜೊತೆಗೆ ಪ್ರಕರಣದಲ್ಲಿ ದೇವರಿಗೆ ಅಪಚಾರ ಎಸಗಿದ ಕಿಡಿಗೇಡಿಗಳಿಗೆ ಶಿಕ್ಷೆ ವಿಧಿಸದೆ ಪಕ್ಷದ ಕಾರ್ಯಕರ್ತರ ಬಗ್ಗೆ ದೂರು ದಾಖಲಿಸಿಕೊಡಿರುವುದು ಎಷ್ಟು ಸರಿ? ಶಾಸಕರು ಘಟನೆಯ ಬಗ್ಗೆ ಏನು ಪ್ರತಿಕ್ರಿಯೆ ನೀಡುತ್ತಾರೆಂದು ನಾನು ಕಾದಿದ್ದೆ. ಆದರೆ ಅವರು ತುಟಿ ಬಿಚ್ಚದೆ ಇರುವುದು ಸರಿಯಲ್ಲ. ಅವರ ಹೇಳಿಕೆಯ ಬಗ್ಗೆ ಜನರು ಕಾಯುತ್ತಿದ್ದಾರೆ ಎಂದು ಹರಿಹಾಯ್ದರು.
ಆಡಳಿತ ಪಕ್ಷ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನಗರಸಭೆಯ ಉಪ ಚುನಾವಣೆಯಲ್ಲಿ ಅಧಿಕಾರಿಗಳನ್ನು ಬಳಸಿಕೊಂಡು ಒತ್ತಡಹೇರಿದ್ದರೂ ಕೂಡ ಪ್ರಜ್ಞಾವಂತ ಮತದಾರರು ನಮ್ಮ ಪಕ್ಷದ ಕೈಹಿಡಿದಿದ್ದಾರೆ. ಈ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಸಣ್ಣ ಮಾದರಿ. ಮುಂದೆ ಮುಂದಿನ ಲೋಕಸಭಾ ಚುನಾವನೆಯಲ್ಲಿ ನಂಜನಗೂಡು ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಅತಿ ಹೆಚ್ಚು ಮುನ್ನಡೆ ಬರುವುದು ಖಚಿತ ಎಂದರು.
ದುರ್ಘಟನೆಯಿಂದಾಗಿ ಗ್ರಾಮಾಂತರ ಭಾಗದ ಜನರು ಆಕ್ರೋಶ ಭರಿತರಾಗಿದ್ದು, ಜಿಲ್ಲಾಧಿಕಾರಿಗಳು ಮತ್ತು ಎಸ್ಪಿ ಇನ್ನು 2 ದಿನದ ಒಳಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡದೆ ಹೋದಲ್ಲಿ ನಂಜನಗೂಡು ಬಂದ್ ಗೆ ಕರೆ ನೀಡಲಾಗುವುದು. ಒಂದು ವೇಳೆ ಅಲ್ಲಿ ಏನಾದರೂ ದುರ್ಘಟನೆ ಸಂಭಿಸಿದಲ್ಲಿ ನಮ್ಮ ಪಕ್ಷ ಹೊಣೆಯಲ್ಲ ಎಂದರು.