ನಂಜನಗೂಡು. ತಾಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರನ್ನು ಕತ್ತು ಕುಯ್ದು ಕೊಲೆ ಮಾಡಿ ಶವದ ಪಕ್ಕ ಕುಂಕುಮ ನೂರು ರೂಪಾಯಿ ನೋಟು ಇಟ್ಟು ವಾಮಾಚಾರ ಮಾಡಿ ಕೊಲೆ ಮಾಡಿರುವ ರೀತಿಯಲ್ಲಿ ಬಿಂಬಿಸಿ ಕೊಲೆಗೈದಿದ್ದ ಪ್ರಕರಣವನ್ನು ಹುಲ್ಲಹಳ್ಳಿ ಪೊಲೀಸರು ಭೇದಿಸಿದ್ದು ಈ ಸಂಬಂಧ ಕೊಲೆಯಾದ ಸದಾಶಿವ ರವರ ಪತ್ನಿ ಸೇರಿದಂತೆ ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಮಲ್ಕುಂಡಿ ಗ್ರಾಮದ ಸದಾಶಿವ ರವರ ಪತ್ನಿ ರಾಜೇಶ್ವರಿ ( 35), ಆಕೆಯ ಪ್ರಿಯತಮರಾದ ಮಲ್ಕುಂಡಿ ಗ್ರಾಮದ ಪುಟ್ಟ ಸುಬ್ಬಯ್ಯ ರವರ ಪುತ್ರ ಶಿವಯ್ಯ (33), ವೆಂಕಟರಾಮಯ್ಯ ರವರ ಪುತ್ರ ರಂಗಸ್ವಾಮಿ (38) ಬಂಧಿತ ಆರೋಪಿಗಳು. ತಾಲೂಕಿನ ಮಡುವಿನಹಳ್ಳಿ ಗ್ರಾಮದ ಶಾಲೆಯ ಹಿಂಭಾಗದಲ್ಲಿ ಅ 18 ರಂದು ಸದಾಶಿವನನ್ನು(45) ಚಾಕುವಿನಿಂದ ಕತ್ತನ್ನು ಕೊಯ್ದು. ಶವದ ಪಕ್ಕದಲ್ಲಿ ಕುಂಕುಮ, ನೂರು ನೋಟನ್ನು ಇಟ್ಟು ವಾಮಾಚಾರ ಮಾಡಿ ಬಲಿ ಕೊಟ್ಟಿರುವ ರೀತಿಯಲ್ಲಿ ಬಿಂಬಿಸಿ ಕೊಲೆ ಮಾಡಿದ್ದರು. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಪಿಎಸ್ಐ ಚೇತನ್ ಕುಮಾರ್, ಮೈಸೂರು ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಉಪ ವರಿಷ್ಠಾಧಿಕಾರಿ ನಾಗೇಶ್, ಡಿವೈಎಸ್ಪಿ ರಘು ರವರ ಮಾರ್ಗದರ್ಶನದಲ್ಲಿ ತನಿಖೆ ಆರಂಭಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು. ಕೊಲೆಯಾದ ಸದಾಶಿವ ಗಾರೆ ಕೆಲಸ ಮಾಡಿಕೊಂಡು ಕೆಲಸವಿದ್ದ ಕಡೆಯಲ್ಲೇ ವಾಸ ಮಾಡಿಕೊಂಡು ಮನೆ ಸೇರುತ್ತಿರಲಿಲ್ಲ ಎನ್ನಲಾಗಿದೆ. ಇದರಿಂದ ಪತ್ನಿ ರಾಜೇಶ್ವರಿ ಅದೇ ಊರಿನ ಶಿವಯ್ಯ, ಮತ್ತು ರಂಗಸ್ವಾಮಿ ರವರ ನಡುವೆ ಅಕ್ರಮ ಸಂಬಂಧ ಹೊಂದಿದ್ದಳು, ಪತಿ ಸದಾಶಿವ ಬದುಕಿದ್ದರೆ ಅಕ್ರಮ ಸಂಬಂಧಕ್ಕೆ ತಡೆಯಾಗುವುದು ಎಂದು ಯೋಚಿಸಿ ಸಂಚು ರೂಪಿಸಿ ಅ 18ರ ಹುಣ್ಣಿಮೆಯ ರಾತ್ರಿ ಸದಾಶಿವನನ್ನು ಚಾಕುವಿನಿಂದ ಕತ್ತು ಕೊಯ್ದು ಕೊಲೆಗೈದು, ಶವದ ಪಕ್ಕದಲ್ಲಿ ನೂರು ರೂಪಾಯಿ ನೋಟು, ಕುಂಕುಮ, ನಿಂಬೆಹಣ್ಣು, ಇಟ್ಟು ವಾಮಾಚಾರ ಮಾಡಿ ಬಲಿ ಕೊಟ್ಟಿರುವ ರೀತಿ ಬಿಂಬಿಸಿ ಕೊಲೆಗೈದು ಪರಾರಿಯಾಗಿದ್ದರು. ಆರೋಪಿಗಳನ್ನು ಬಂಧಿಸಿ ಪೋಲಿಸ್ ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ಬಂಧಿತ ಆರೋಪಿಗಳು ಸಂಚು ರೂಪಿಸಿ ಕೊಲೆ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾರೆ. ತನಿಖಾ ತಂಡದಲ್ಲಿ ಪಿಎಸ್ಐ ಗಳಾದ ಚೇತನ್ ಕುಮಾರ್, ಡಿ ಆರ್ ರಸೂಲ್ ಪಾಗೇವಾಲ, ಜಿಲ್ಲಾ ಅಪರಾಧ ಪತ್ತೆ ತಂಡದ ಸತೀಶ, ಅಬ್ದುಲ್ ಲತೀಫ್, ಅಶೋಕ, ಭಾಸ್ಕರ, ಶಿವಕುಮಾರ, ದೊಡ್ಡಯ್ಯ, ಮತ್ತು ಮಹಿಳಾಪಿಸಿ ಆಶಾ ಮತ್ತು ಶ್ರೀದೇವಿ ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿ ಯಶಸ್ವಿಯಾಗಿದ್ದಾರೆ. ಸದರಿ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ವಿಷ್ಣುವರ್ಧನ್ ರವರು ಪ್ರಸಂಸೆ ವ್ಯಕ್ತಪಡಿಸಿ ಸೂಕ್ತ ಬಹುಮಾನ ಘೋಷಣೆ ಮಾಡಿದ್ದಾರೆ.