- ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-25 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2024-25 ನೇ ಸಾಲಿನಲ್ಲಿ ₹6.40 ಲಕ್ಷ ನಿವ್ಹಳ ಲಾಭ ಗಳಿಸಿದೆ ಎಂದು ನರಸಿಂಹರಾಜಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್ ತಿಳಿಸಿದರು.
ಶುಕ್ರವಾರ ಕೃಷಿ ಭವನದಲ್ಲಿ ನಡೆದ ನರಸಿಂಹರಾಜಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-25 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಸಂಘ ಪ್ರಾರಂಭವಾಗಿ 68 ವರ್ಷ ದಾಟಿದ್ದು ಲಾಭದಾಯಕವಾಗಿ ಪ್ರಗತಿ ಪಥದತ್ತ ಮುನ್ನಡೆಯುತ್ತಿದೆ. ಸಂಘದಿಂದ 2024-25 ನೇ ಸಾಲಿನಲ್ಲಿ 243 ರೈತರಿಗೆ ₹ 3.53 ಕೋಟಿ ಕಿಸಾನ್ ಕ್ರಿಡಿಟ್ ಬೆಳೆ ಸಾಲ ನೀಡಿದ್ದೇವೆ. ಸಂಘದ ಸದಸ್ಯರು ನಮ್ಮ ಸಹಕಾರ ಸಂಘದ ಮೂಲಕ ಇನ್ನಷ್ಟು ವ್ಯವಹಾರ ಮಾಡಬೇಕು. ಮುಂದಿನ ದಿನಗಳಲ್ಲಿ ಹಂತುವಾನಿಯಲ್ಲಿ ರಸಗೊಬ್ಬರ, ಕೃಷಿ ಉಪಕರಣಗಳ ಶಾಖೆ ತೆರೆಯಲು ಚಿಂತನೆ ನಡೆಸಿದ್ದೇವೆ ಎಂದರು.ಸದಸ್ಯರಾದ ಬಿ.ಎಂ.ಸತೀಶ್ ಸಲಹೆ ನೀಡಿ, ನರಸಿಂಹರಾಜಪುರ ಪಟ್ಟಣದಲ್ಲೇ ರಸಗೊಬ್ಬರ, ಕೃಷಿ ಉಪಕರಣದ ಮಾರಾಟದ ಮಳಿಗೆ ತೆಗೆದರೆ ರೈತರಿಗೆ ಇನ್ನಷ್ಟು ಅನುಕೂಲವಾಗಬಹುದು ಎಂದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹಾಗೂ ಮಾಜಿ ಅಧ್ಯಕ್ಷ ಡಿ.ಆರ್.ಈಶ್ವರ್ ಮಾತನಾಡಿ, ಈಗಾಗಲೇ ಕಳ್ಳಿಕೊಪ್ಪದಲ್ಲಿ ನಮ್ಮ ಪ್ಯಾಪಾರ ಶಾಖೆ ಪ್ರಾರಂಭಿಸಲಾಗಿದ್ದು ಶೀಘ್ರ ರಸಗೊಬ್ಬರ, ಕೃಷಿ ಉಪಕರಣ ಮಾರಾಟ ಮಾಡಲಿದ್ದೇವೆ. 2 ತಿಂಗಳ ಹಿಂದೆ ಲೈಸನ್ಸ್ ಸಿಕ್ಕಿದೆ. ಕಳ್ಳಿಕೊಪ್ಪದ ಸುತ್ತ ಮುತ್ತ 15 ರಿಂದ 20 ಹಳ್ಳಿಗಳು ಬರುವುದರಿಂದ ವ್ಯಾಪಾರ ಹೆಚ್ಚುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಕಳ್ಳಿಕೊಪ್ಪದ ಶಾಖೆಯಲ್ಲಿ ಎಲ್ಲಾ ರೈತರು ವ್ಯಾಪಾರ ಮಾಡಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗದ ಐ ದೃಷ್ಠಿ ಆಸ್ಪತ್ರೆಯಿಂದ ಸಂಘದ 170 ಸದಸ್ಯರಿಗೆ ಕಣ್ಣಿನ ಪರೀಕ್ಷೆ ನಡೆಸಲಾಯಿತು. ಮೀನಾಕ್ಷಿ ಕಾಂತರಾಜ್ ಸ್ವಾಗತಿಸಿದರು.ವೈ.ಎಸ್.ರವಿ ವಂದಿಸಿದರು.