ನಾರಾಯಣಗುರು ಆದರ್ಶ ಸಮಾಜಕ್ಕೆ ಮಾದರಿ: ಟಿ.ಡಿ.ರಾಜೇಗೌಡ

KannadaprabhaNewsNetwork | Published : Mar 26, 2025 1:38 AM

ಸಾರಾಂಶ

ಬಾಳೆಹೊನ್ನೂರು,ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣಗುರುಗಳ ಆದರ್ಶ ಇಡೀ ಸಮಾಜಕ್ಕೆ ಮಾದರಿ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಬಿಲ್ಲವ ಸಮಾಜ ಸೇವಾ ಸಂಘ ನೂತನವಾಗಿ ನಿರ್ಮಿಸಿದ ಕೋಟಿ ಚೆನ್ನಯ್ಯ ಬಯಲು ರಂಗಮಂದಿರ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣಗುರುಗಳ ಆದರ್ಶ ಇಡೀ ಸಮಾಜಕ್ಕೆ ಮಾದರಿ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ಪಟ್ಟಣದ ಬಿಲ್ಲವ ಸಮಾಜ ಸೇವಾ ಸಂಘ ನೂತನವಾಗಿ ನಿರ್ಮಿಸಿದ ಕೋಟಿ ಚೆನ್ನಯ್ಯ ಬಯಲು ರಂಗಮಂದಿರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ನಾರಾಯಣಗುರುಗಳ ಉದಾತ್ತ ಚಿಂತನೆ, ದೂರದೃಷ್ಟಿಯಿಂದ ಬೆಳೆದ ಸಮುದಾಯ ಬಿಲ್ಲವ ಸಮುದಾಯವಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಬಿಲ್ಲವ ಸಮಾಜ ಬಾಂಧವರು ತೊಡಗಿಸಿಕೊಂಡು ಸಕ್ರಿಯವಾಗಿದ್ದಾರೆ. ಬಿಲ್ಲವ ಸಮುದಾಯ ಬಾಂಧವರು ಒಂದು ಗುರಿ ಇಟ್ಟುಕೊಂಡು ಮುನ್ನಡೆದಲ್ಲಿ ಸಮಾಜದಲ್ಲಿ ಸಾಧನೆ ಮಾಡಲು ಸಾಧ್ಯವಿದೆ ಎಂದರು.

ಸಂಘಟನೆ ರಾಜಕೀಯ ರಹಿತವಾಗಿ ಮುನ್ನಡೆದಲ್ಲಿ ಮಾತ್ರ ಉನ್ನತ ಸ್ಥಾನ ಗಳಿಸಲು ಸಾಧ್ಯವಿದ್ದು, ಬಿಲ್ಲವ ಸಮುದಾಯ ನಂಬಿಕೆ ಅರ್ಹವಾದ ಸಮುದಾಯವಾಗಿದೆ. ಬ್ರಹ್ಮಶ್ರೀ ನಾರಾಯಣಗುರು ಎಲ್ಲ ಧರ್ಮದವರಿಗೂ ಪ್ರೇರಣಾಶಕ್ತಿ ಯಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಾರಾಯಣಗುರುಗಳ ಜಯಂತಿ ಆಚರಣೆ ಜಾರಿಗೆ ತಂದಿದೆ.ನನ್ನ ಅವಧಿಯಲ್ಲಿ ಶೃಂಗೇರಿ ಕ್ಷೇತ್ರದ ಬಿಲ್ಲವ, ಈಡಿಗ ಸಮುದಾಯದ ಸಂಘಟನೆಗಳಿಗೆ ಸಾಕಷ್ಟು ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ನೀಡಿದ್ದು, ಮುಂದಿನ ಒಂದು ವರ್ಷದಲ್ಲಿಯೂ ಸಹ ಇನ್ನಷ್ಟು ಅನುದಾನ ನೀಡುವುದಾಗಿ ಭರವಸೆ ನೀಡಿದರು.ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ. ಜೀವನ ಭದ್ರತೆ, ಕೂಲಿಗಾಗಿ ದಕ್ಷಿಣ ಕನ್ನಡದಿಂದ ವಲಸೆ ಬಂದ ಬಿಲ್ಲವ ಸಮುದಾಯದವರು ಶ್ರಮಿಕರಾಗಿದ್ದು, ಇಲ್ಲಿ ಈ ಸಮುದಾಯ ನೀಡಿದ ಕೊಡುಗೆ ಅಮೂಲ್ಯ. ನಾರಾಯಣ ಗುರುಗಳು ಕೇರಳದಲ್ಲಿ ನಡೆಯುತ್ತಿದ್ದ ಶೋಷಣೆ, ದೌರ್ಜನ್ಯದ ವಿರುದ್ಧ ನಾಯಕತ್ವ ವಹಿಸಿ ಶೋಷಿತರಿಗೆ ದನಿಯಾಗುವ ಕೆಲಸ ಮಾಡಿದರು.ದೇಶದ ಶೋಷಿತ ವರ್ಗದ ಪರ ಕೆಲಸ ಮಾಡಿದ ನಾರಾಯಣಗುರು ಇಡೀ ದೇಶಕ್ಕೆ ನಾಯಕರಾಗಿದ್ದರು. ಶೃಂಗೇರಿ ಕ್ಷೇತ್ರದಲ್ಲಿ ಬಿಲ್ಲವ ಸಮುದಾಯ ಹಲವು ಕೊಡುಗೆಗಳಿದ್ದು, ನನ್ನ ರಾಜಕೀಯ ಅಧಿಕಾರಕ್ಕೆ ಬಿಲ್ಲವ ಸಮುದಾಯದ ಶ್ರಮ ಅಪಾರವಿದೆ. ಈ ಸಮುದಾಯದ ಋಣ ನನ್ನ ಮೇಲಿದೆ ಎಂದರು.ಸಮುದಾಯದಲ್ಲಿ ರಾಜಕೀಯ ಹೊರತುಪಡಿಸಿದ ಸಂಘಟನೆ ಆಗಬೇಕಿದ್ದು, ನಾಯಕತ್ವವುಳ್ಳ ಸಮುದಾಯ ಬೆಳೆಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕಿದೆ ಎಂದರು.ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ, ನಾರಾಯಣಗುರುಗಳ ಚಿಂತನೆ ಇಂದಿನ ದಿನದಲ್ಲಿ ಪ್ರತಿ ಯೊಬ್ಬರಿಗೂ ಅವಶ್ಯಕ. ಸಮಾಜದಲ್ಲಿ ಸಮಾನತೆ ಚಿಂತನೆ ಹೊಂದಿದ್ದರು. ಬಿಲ್ಲವ ಸಮುದಾಯ ಬಾಂಧವರು ಶಿಕ್ಷಣದ ಮೂಲಕ ಸ್ವಾವಲಂಬನೆ ಪಡೆದುಕೊಳ್ಳಬೇಕು.

ನಮ್ಮ ಮಕ್ಕಳಿಗೆ ನಮ್ಮ ಹಿರಿಯರು ಪಟ್ಟ ಶ್ರಮ ತಿಳಿಸಬೇಕಿದ್ದು, ಆಗ ಮಾತ್ರ ಯುವಕರು ಸಾಧನೆ ಮಾಡಲು ಸಾಧ್ಯವಿದೆ. ಸಮುದಾಯದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉದ್ಯೋಗ ಪಡೆದಲ್ಲಿ ಸಮುದಾಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಸಾಧ್ಯವಾಗಲಿದೆ ಎಂದರು.

ಬಿಲ್ಲವ ಸಂಘದ ಅಧ್ಯಕ್ಷ ಎಂ.ಜೆ.ಮೋಹನ್, ಗೌರವಾಧ್ಯಕ್ಷ ಸತೀಶ್ ಅರಳೀಕೊಪ್ಪ, ಗೆಜ್ಜೆಗೆರಿ ಕ್ಷೇತ್ರದ ಅಧ್ಯಕ್ಷ ರವಿ ಚಿಲಿಂಬಿ, ನಾರಾಯಣಗುರು ಒಕ್ಕೂಟದ ಅಧ್ಯಕ್ಷ ಎಚ್.ಎಂ.ಸತೀಶ್, ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ, ಗ್ರಾಪಂ ಅಧ್ಯಕ್ಷ ರವಿಚಂದ್ರ, ಪ್ರಮುಖರಾದ ಪಿ.ಆರ್.ಸದಾಶಿವ, ರಾಮ ಡಿ.ಸಾಲಿಯಾನ್, ಪಾರ್ವತಮ್ಮ, ಪ್ರಕಾಶ್ ಕರ್ಕೇಶ್ವರ, ಕೆ.ಜೆ. ಶ್ರೀನಿವಾಸ್, ಎಂ.ಎಸ್.ಅರುಣೇಶ್, ದೀಪಾ, ಹಿತೈಶಿ ಚೇತನ್, ಜಗದೀಶ್ ಅರಳೀಕೊಪ್ಪ, ಜಯ ಪ್ರಭಾಕರ್, ಶೇಖರ್ ಇಟ್ಟಿಗೆ, ಕುಮಾರ್ ಮತ್ತಿತರರು ಹಾಜರಿದ್ದರು.೨೫ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಬಿಲ್ಲವ ಸಮಾಜ ಸೇವಾ ಸಂಘದಿಂದ ನೂತನವಾಗಿ ನಿರ್ಮಿಸಿದ ಕೋಟಿ ಚೆನ್ನಯ್ಯ ಬಯಲು ರಂಗ ಮಂದಿರವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು. ಡಾ.ಅಂಶುಮಂತ್, ಎಂ.ಜೆ.ಮೋಹನ್, ಸತೀಶ್ ಅರಳೀಕೊಪ್ಪ, ಎಚ್.ಎಂ.ಸತೀಶ್, ಭಾಸ್ಕರ್ ವೆನಿಲ್ಲಾ ಇದ್ದರು.

Share this article