ಗದಗ ಜಿಲ್ಲೆಯಾದ್ಯಂತ ನರೇಗಾ ಖಾತರಿ ಅಭಿಯಾನ

KannadaprabhaNewsNetwork |  
Published : Apr 02, 2024, 01:02 AM IST
ಮನರೇಗಾ ಯೋಜನೆಯಡಿ ನಡೆದ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿರುವ ಕಾಯಕ ಬಂಧುಗಳು. | Kannada Prabha

ಸಾರಾಂಶ

35 ಲಕ್ಷ ಮಾನವ ದಿನಗಳ ಗುರಿಗೆ ಅನುಗುಣವಾಗಿ ಗ್ರಾಮಸಭೆಗಳಲ್ಲಿ ಸಿದ್ಧಪಡಿಸಿ

ಗದಗ: ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2024 ಏ. 1ರಿಂದ ಮೇ ಅಂತ್ಯದ ವರೆಗೂ ವಲಸೆ ಯಾಕ್ರಿ? ನಿಮ್ಮೂರಲ್ಲೇ ಉದ್ಯೋಗ ಖಾತ್ರಿ, ದುಡಿಮೆ ಖಾತ್ರಿ ಅಭಿಯಾನ ನಡೆಸಲಾಗುತ್ತದೆ.ಗ್ರಾಮೀಣ ಭಾಗದ ಬಡ ಕುಟುಂಬಗಳ ಜೀವನೋಪಾಯದ ಭದ್ರತೆ ಹೆಚ್ಚಿಸುವ ಮತ್ತು ಬೇಸಿಗೆಯಲ್ಲಿ ಸ್ಥಳೀಯವಾಗಿ ನಿರಂತರ ಉದ್ಯೋಗ ಒದಗಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಅಭಿಯಾನ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಯೋಜನೆಯಡಿ ನೋಂದಾಯಿತ ಕುಟುಂಬದ ಕೂಲಿಕಾರರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ.

ಪ್ರಸಕ್ತ 2024-25ನೇ ಸಾಲಿಗೆ ಆಯುಕ್ತಾಲಯ ಒಟ್ಟು 35 ಲಕ್ಷ ಮಾನವ ದಿನಗಳ ಗುರಿಗೆ ಅನುಗುಣವಾಗಿ ಗ್ರಾಮಸಭೆಗಳಲ್ಲಿ ಸಿದ್ಧಪಡಿಸಿ ಸಲ್ಲಿಸಿರುವ ಕಾಮಗಾರಿಗಳ ಗುಚ್ಚ (ಕ್ರಿಯಾ ಯೋಜನೆಗೆ) ಜಿಲ್ಲಾ ಪಂಚಾಯಿತಿ ಅನುಮೋದನೆ ನೀಡಿದೆ. ಒಟ್ಟು 29937 ಕಾಮಗಾರಿಗಳಿಗೆ ಫೆಬ್ರುವರಿ ಅಂತ್ಯದೊಳಗೆ ಒಪ್ಪಿಗೆ ನೀಡಲಾಗಿದೆ. ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಮಾಡುವ ಉದ್ದೇಶದಿಂದ ಜಲ ಸಂಜೀವಿನಿ ಪರಿಕಲ್ಪನೆಯಡಿ ಮಧ್ಯಸ್ತರದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಾಮೂಹಿಕ ಬದು ನಿರ್ಮಾಣ, ಕೆರೆ, ಹಳ್ಳ, ಕಾಲುವೆ ಹೂಳೆತ್ತುವ, ಕಲ್ಲು ತಡೆ, ಕೃಷಿ ಹೊಂಡ, ಕೊಳವೆಬಾವಿ ಮರು ಪೂರಣ ಘಟಕ, ನಾಲಾ ಅಭಿವೃದ್ಧಿ, ಸರ್ಕಾರಿ ಕಟ್ಟಡಗಳಿಗೆ ಮಳೆ ನೀರು ಕೊಯ್ಲು, ಅರಣ್ಯ ಅಭಿವೃದ್ಧಿ, ರೇಷ್ಮೆ ಬೆಳೆ, ತೋಟಗಾರಿಕೆ, ಗೋಕಟ್ಟೆ ನಿರ್ಮಾಣ, ಶಾಲಾಭಿವೃದ್ಧಿ ಕಾಮಗಾರಿಗಳಾದ ಕಾಂಪೌಂಡ್, ಶೌಚಾಲಯ, ಅಡುಗೆ ಕೋಣೆಗಳಂತಹ ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಗ್ರಾಮೀಣ ಭಾಗದ ಜನರಿಗೆ ಬಹು ಬಾಳಿಕೆಯ ಆಸ್ತಿ ಸೃಜನೆಯ ಜತೆಗೆ ಅಕುಶಲ ಕೂಲಿಕಾರರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸಲು ಈ ಯೋಜನೆ ಸಹಕಾರಿಯಾಗಿದೆ.

ಜಿಲ್ಲೆಯಲ್ಲಿ ಮನರೇಗಾ ಯೋಜನೆಯಡಿ ಪ್ರಸಕ್ತ 2024 ಏ. 1ರಿಂದ ಮೇ ಅಂತ್ಯದವರೆಗೂ ಅಭಿಯಾನ ಹಮ್ಮಿಕೊಂಡಿದ್ದು, ಬೇಸಿಗೆ ತಾಪ ಹೆಚ್ಚಾಗಿರುವ ಕಾರಣ ಗ್ರಾಮೀಣ ಕೂಲಿಕಾರರಿಗೆ ಸ್ಥಳೀಯವಾಗಿ ಉದ್ಯೋಗ ನೀಡಿ ಕೂಲಿ ಹಣವನ್ನು ಇ-ಎಫ್ಎಂಎಸ್ ಮುಖಾಂತರ ನೇರವಾಗಿ ವೈಯಕ್ತಿಕ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಜಿಪಂ ಸಿಇಒ ಭರತ್ ಎಸ್‌. ಹೇಳುತ್ತಾರೆ. ಯೋಜನೆಯ ಐಇಸಿ ಚಟುವಟಿಕೆ ಮುಖಾಂತರ ಗ್ರಾಮೀಣ ಪ್ರದೇಶದ ಹಿರಿಯ ನಾಗರಿಕರಿಗೆ, ವಿಶೇಷ ಚೇತನರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಹಾಗೂ ಮಹಿಳೆಯರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸಲು ಅಗತ್ಯ ಕ್ರಮವಹಿಸಲಾಗಿದೆ. ಗ್ರಾಮೀಣ ಜನರು ಉದ್ಯೋಗ ಬೇಡಿಕೆ ನೀಡಿದ ತಕ್ಷಣ ಸ್ಥಳೀಯವಾಗಿ ಉದ್ಯೋಗ ಒದಗಿಸಲು ಹಾಗೂ ಸಕಾಲದಲ್ಲಿ ಕೂಲಿ ಪಾವತಿ ಮಾಡಲು ಎಲ್ಲ ಪಿಡಿಒ ಮತ್ತು ಅನುಷ್ಠಾನ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.

ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾಯಕ ಬಂಧುಗಳ ಸಭೆ ಆಯೋಜಿಸಿ ಕ್ರಿಯಾಶೀಲವಲ್ಲದ ಉದ್ಯೋಗ ಚೀಟಿದಾರರನ್ನು ಒಳಗೊಂಡು ಕೂಲಿಕಾರರ ಸಂಘವನ್ನು ರಚಿಸಲಾಗುತ್ತಿದೆ. ಅದಕ್ಕೆ ಒಬ್ಬ ಹೊಸ ಕಾಯಕ ಬಂಧುವನ್ನು ನೇಮಿಸಲಾಗುತ್ತಿದೆ. ಅವರ ಮೂಲಕ ಕೂಲಿ ಬೇಡಿಕೆ ಪಡೆಯಲು ಗ್ರಾಪಂಗಳ ವಾರ್ಡ್‌ಗಳಲ್ಲಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಕಾಲನಿಗಳಲ್ಲಿ ವಿಶೇಷ ಅಭಿಯಾನ ಆಯೋಜಿಸಲಾಗುತ್ತಿದೆ. ಕೂಲಿಕಾರರಿಂದ ಕೂಲಿ ಬೇಡಿಕೆ ಪಡೆದು ಕೆಲಸ ಒದಗಿಸಲಾಗುತ್ತಿದೆ ಎಂದು ಜಿಪಂ ಉಪ ಕಾರ್ಯದರ್ಶಿ ಸಿ.ಬಿ. ದೇವರಮನೆ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ