ನರೇಂದ್ರ ಮೋದಿ ಜನರ ಹೃದಯಗಳನ್ನೇ ಹ್ಯಾಕ್ ಮಾಡಿದ್ದಾರೆ-ಚಕ್ರವರ್ತಿ ಸೂಲಿಬೆಲೆ

KannadaprabhaNewsNetwork | Published : Feb 17, 2024 1:18 AM

ಸಾರಾಂಶ

ನರೇಂದ್ರ ಮೋದಿ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಹ್ಯಾಕ್ ಮಾಡುತ್ತಾರೆ ಎಂದು ಕಾಂಗ್ರೆಸ್‌ನವರು ಆರೋಪ ಮಾಡಿದ್ದರು. ಆದರೆ ಮೋದಿ ಜನರ ಹೃದಯಗಳನ್ನೇ ಹ್ಯಾಕ್ ಮಾಡಿದ್ದಾರೆ. ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಹ್ಯಾಕ್ ಮಾಡುವ ಅವಶ್ಯಕತೆ ಅವರಿಗಿಲ್ಲ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಮುಂಡರಗಿ: ನರೇಂದ್ರ ಮೋದಿ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಹ್ಯಾಕ್ ಮಾಡುತ್ತಾರೆ ಎಂದು ಕಾಂಗ್ರೆಸ್‌ನವರು ಆರೋಪ ಮಾಡಿದ್ದರು. ಆದರೆ ಮೋದಿ ಜನರ ಹೃದಯಗಳನ್ನೇ ಹ್ಯಾಕ್ ಮಾಡಿದ್ದಾರೆ. ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಹ್ಯಾಕ್ ಮಾಡುವ ಅವಶ್ಯಕತೆ ಅವರಿಗಿಲ್ಲ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.ಅವರು ಗುರುವಾರ ಸಂಜೆ ಪಟ್ಟಣದ ಕ.ರಾ. ಬೆಲ್ಲದ ಮಹಾವಿದ್ಯಾಲಯದ ಮೈದಾನದಲ್ಲಿ ನಮೋ ಬ್ರಿಗೇಡ್ ಮುಂಡರಗಿ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ''''ನಮೋ ಭಾರತ'''' ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲರ ಹೃದಯ ಗೆದ್ದ ಅಪರೂಪದ ವ್ಯಕ್ತಿ ಎಂದರೆ ಅದು ನಮ್ಮ ಪ್ರಧಾನಿ ನರೇಂದ್ರ ಮೋದಿ ಮಾತ್ರ. ಈ ದೇಶದ ಅನೇಕ ಹೆಸರಾಂತ ನಾಯಕರು ಜಾತಿ ಹೆಸರು ಹೇಳಿಕೊಂಡು, ಅವರ ತಂದೆ, ತಾಯಿ, ಸಂಬಂಧಿಗಳ ಹೆಸರು ಬಳಸಿಕೊಂಡು ರಾಜಕೀಯಕ್ಕೆ ಬಂದಿದ್ದಾರೆ. ಆದರೆ ನರೇಂದ್ರ ಮೋದಿ ಯಾರ ಹೆಸರೂ ಹೇಳಿಕೊಂಡು ಅಧಿಕಾರಕ್ಕೆ ಬಂದಿಲ್ಲ ಎಂದರು. ಅಬುದಾಬಿಯಂತಹ ಮುಸ್ಲಿಂ ನೆಲದಲ್ಲಿ ಮಂದಿರ ಕಟ್ಟುವ ಮೂಲಕ ನರೇಂದ್ರ ಮೋದಿ ಹೊಸ ಭಾರತದ ಪರಿಕಲ್ಪನೆ ಕಟ್ಟಿಕೊಟ್ಟಿದ್ದಾರೆ. ಕಾಂಗ್ರೆಸ್‌ನವರು ರಾಮಮಂದಿರ ನಿರ್ಮಾಣದ ಕ್ರೆಡಿಟ್‌ನ್ನು ಬಿಜೆಪಿ ಅವರು ತೆಗೆದುಕೊಂಡಿದ್ದಾರೆ ಎಂದು ಆರೋಪಿಸುತ್ತಿದ್ದು, ರಾಮ ಮಂದಿರಕ್ಕಾಗಿ ರಥಯಾತ್ರೆ ಪ್ರಾರಂಭಿಸಿದ್ದು, ರಾಮಮಂದಿರ ನಿರ್ಮಾಣಕ್ಕಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ರಾಮ ಮಂದಿರ ನಿರ್ಮಾಣಕ್ಕಾಗಿ ಕಾನೂನು ಹೋರಾಟ ಮಾಡಿದ್ದು ಎಲ್ಲವೂ ಬಿಜೆಪಿಯೇ. ಆದರೆ ಮಂದಿರ ನಿರ್ಮಾಣವಾಗದಂತೆ 26 ಜನ ವಕೀಲರನ್ನು ನೇಮಿಸಿದ್ದು ಕಾಂಗ್ರೆಸ್. ಕಾಂಗ್ರೆಸ್‌ಗೆ ರಾಮ ಮಂದಿರ ನಿರ್ಮಾಣದ ಕ್ರೆಡಿಟ್ ಕೊಡಬೇಕಿತ್ತಾ ಎಂದು ಪ್ರಶ್ನಿಸಿದರು.ಈ ಹಿಂದೆ ಅನೇಕ ಬಾರಿ ನರೇಂದ್ರ ಮೋದಿಯವರು ಕಾಂಗ್ರೆಸ್ ಮುಕ್ತ ಭಾರತ ಮಾಡುವ ಮಾತುಗಳನ್ನು ಹೇಳುತ್ತಿದ್ದರು. ಆದರೆ ಇದೀಗ ಸೋನಿಯಾ ಗಾಂಧಿಯವರು ತಾವು ಸ್ಪರ್ಧಿಸುತ್ತಿದ್ದ ಲೋಕಸಭಾ ಕ್ಷೇತ್ರದಿಂದ ಪ್ರಸ್ತುತ ಚುನಾವಣೆಯಲ್ಲಿ ದೂರ ಉಳಿದು ರಾಜ್ಯಸಭಾ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದನ್ನು ನೋಡಿದರೆ 2024ರಲ್ಲಿ ಕಾಂಗ್ರೆಸ್ ಮುಕ್ತ ಭಾರತದ ಮಾತು ಸತ್ಯವಾಗುತ್ತದೆ ಎನ್ನುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ ಎಂದರು.

ಕೇಂದ್ರ ಸರ್ಕಾರ ಕೇವಲ ಮಂದಿರಗಳನ್ನು ನಿರ್ಮಾಣ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ ನರೇಂದ್ರ ಮೋದಿ ಸರ್ಕಾರ ಮಂದಿರ ನಿರ್ಮಾಣಕ್ಕೂ ಮುನ್ನ ಭಾರತ ದೇಶ ಜಗತ್ತಿನ 5ನೇ ಆರ್ಥಿಕ ದೇಶವಾಗಿ ಹೊರ ಹೊಮ್ಮಿದೆ. ಈ ಹಿಂದಿನ ಎಲ್ಲ ಪ್ರಧಾನಿಗಳು ಸೇರಿ 74 ವಿಮಾನ ನಿಲ್ದಾಣ ನಿರ್ಮಾಣ ಮಾಡಿದ್ದರೆ 10 ವರ್ಷದಲ್ಲಿ ಮೋದಿ 78 ವಿಮಾನ ನಿಲ್ದಾಣ ನಿರ್ಮಿಸಿದ್ದಾರೆ. ಈ ಹಿಂದೆ 100 ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಮಾಡಿದ್ದರೆ ಮೋದಿ 600 ಮಾಡಿದ್ದಾರೆ. 2018ರಲ್ಲಿ 6 ಸಾವಿರ ಕೋಟಿ ವೆಚ್ಚದಲ್ಲಿ ಬೋಗಿಬೀಲ್ ಸೇತುವೆ ನಿರ್ಮಾಣ, ಹಿಂದೆ 91,287 ಕಿ.ಮೀ.ರಸ್ತೆಗಳನ್ನು ನಿರ್ಮಾಣ ಮಾಡಲಾಗಿತ್ತು, ಮೋದಿ 1,46.000 ಕಿ.ಮೀ.ರಸ್ತೆ ನಿರ್ಮಾಣ ಸೇರಿದಂತೆ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಇವೆಲ್ಲವೂ ದೇವಸ್ಥಾನ ನಿರ್ಮಾಣಕ್ಕೂ ಮುನ್ನವೇ ಮಾಡಿದ ಅಭಿವೃದ್ಧಿ ಕಾರ್ಯಗಳಾಗಿವೆ ಎಂದರು.

ಮುಖ್ಯ ಅತಿಥಿಯಾಗಿ ಪಟ್ಟಣದ ಗಣ್ಯ ವ್ಯಾಪಾರಸ್ಥ ಮಂಜುನಾಥ ಅಳವಂಡಿ ಪಾಲ್ಗೊಂಡು ಮಾತನಾಡಿದರು. ತ್ಯಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ನಮೋ ಬ್ರಿಗೇಡ್ ಬಳಗದ ವತಿಯಿಂದ ಹೇಮಗಿರೀಶ ಹಾವಿನಾಳ, ಕರಬಸಪ್ಪ ಹಂಚಿನಾಳ, ಲಿಂಗರಾಜಗೌಡ ಪಾಟೀಲ, ಮಂಜುನಾಥ ಇಟಗಿ, ಎಸ್.ವಿ. ಪಾಟೀಲ, ಯಲ್ಲಪ್ಪ ಗಣಾಚಾರಿ, ಶ್ರೀನಿವಾಸ ಕಟ್ಟೀಮನಿ ಸೇರಿದಂತೆ ಅನೇಕರು ಚಕ್ರವರ್ತಿ ಸೂಲಿಬೆಲೆ ಅವರಿಗೆ ಸನ್ಮಾನಿಸಿ ಗೌರವಿಸಿದರು. ಮಂಜುನಾಥ ಮುಧೋಳ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು.

Share this article