ಕನ್ನಡಪ್ರಭ ವಾರ್ತೆ ಮಡಿಕೇರಿ
ಬೆಂಗಳೂರಿನಲ್ಲಿ ನಡೆಯುತ್ತಿರುವ ಅಸೋಸಿಯೇಷನ್ ಆಫ್ ಓಟೋಲರಿಂಗೋಲಜಿಸ್ಟ್ ಆಫ್ ಇಂಡಿಯಾದ 75ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಕೊಡಗಿನ ಸಂಸ್ಕೃತಿ ಸಿರಿಯ ಆಕರ್ಷಿಸಿತು.ಬೆಂಗಳೂರಿನ ಸ್ವಿಸ್ ಟೌನ್ನ ಕ್ಲಾಕ್ಸ್ ಎಕ್ಸೋಟಿಕಾ ಸೆಂಟರ್ನಲ್ಲಿ ಜ.5ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಡಗಿನ ಸಂಸ್ಕೃತಿ ಬಿಂಬಿಸುವ ಮದುಮಗ, ಮದುಮಗಳು, ಬೇಟೆಗಾರ, ಬಿಳಿ ಮತ್ತು ಕಪ್ಪು ಕುಪ್ಯಾಧಾರಿಗಳು ಗಮನ ಸೆಳೆದರು.ಕೊಡವ ಸಂಸ್ಕೃತಿಯ ಆಭರಣಗಳ ವಿವರಣೆ ಸಹಿತ ಫ್ಯಾಶನ್ ಶೋ, ಕೊಡವ ಹಾಡಿನ ನೃತ್ಯ, ವಾಲಗ ನೃತ್ಯ ಕೊಡಗಿನ ನಟಿ, ನಿರ್ಮಾಪಕಿ, ಸಹ ನಿರ್ದೇಶಕಿ, ಕವಿಯತ್ರಿ ಈರಮಂಡ ಹರಿಣಿ ವಿಜಯ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಕೃತಿ ಸಿರಿ ಬಳಗ ಮೂರ್ನಾಡುವಿನ ಸದಸ್ಯರಾದ ತೋರೆರ ನಳಿನಿ ಅಯ್ಯಪ್ಪ, ಕೋಲೆಯಂಡ ನಿಶಾ ಮೋಹನ್, ಹೈ ಕೋರ್ಟ್ ನ್ಯಾಯವಾದಿ ಆನೇಡ ಹರೀಶ್ ಗಣಪತಿ, ತೋತಿಯಂಡ ಕಿರಣ್ ಸೋಮಣ್ಣ, ಅಮ್ಮಾಟಂಡ ದೇವಯ್ಯ, ವಿಂದ್ಯಾ ದೇವಯ್ಯ ಸೇರಿದಂತೆ 25 ಮಂದಿಯ ತಂಡ ಕೊಡವ ಸಂಸ್ಕೃತಿಯನ್ನು ಪ್ರತಿಬಿಂಬಿಸಿ ನೆರೆದಿದ್ದ ಗಣ್ಯರು ಹಾಗೂ ವೈದ್ಯ ಪ್ರತಿನಿಧಿಗಳ ಪ್ರಶಂಸೆಗೆ ಪಾತ್ರರಾದರು.
ಕೊಡಗಿನ ಸಂಸ್ಕೃತಿಯನ್ನು ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರದರ್ಶಿಸಿ ಯಶಸ್ವಿಯಾದ ಬಗ್ಗೆ ಆಯೋಜಕರಾದ ಡಾ.ಮೋಹನ್ ಅಪ್ಪಾಜಿ, ಹರಿಣಿ ವಿಜಯ್ ಹಾಗೂ ಈರಮಂಡ ವಿಜಯ್ ಅವರು ಹರ್ಷ ವ್ಯಕ್ತ ಪಡಿಸಿದರು. ಕಾರ್ಯಕ್ರಮದಲ್ಲಿ ಈರಮಂಡ ಹರಿಣಿ ವಿಜಯ್ ದಂಪತಿಯನ್ನು ಅಸೋಸಿಯೇಷನ್ ಆಫ್ ಓಟೋಲರಿಂಗೋಲಜಿಸ್ಟ್ ಆಫ್ ಇಂಡಿಯಾದ ವೈದ್ಯ ಪ್ರಮುಖರು ಸನ್ಮಾನಿಸಿ ಗೌರವಿಸಿದರು.ಮುಂದಿನ ದಿನಗಳಲ್ಲಿ ನಡೆಯುವ ವೈದ್ಯರ ರಾಜ್ಯ ಮಟ್ಟದ ಸಮ್ಮೇಳನಕ್ಕೆ ಸಂಸ್ಕೃತಿ ಸಿರಿ ತಂಡ ಆಯ್ಕೆಗೊಂಡಿತು.
ಜ.4ರಿಂದ 7ರ ವರೆಗೆ ನಡೆದ ಸಮ್ಮೇಳನದಲ್ಲಿ ಕೊಡಗಿನ ಹಿರಿಯ ವೈದ್ಯ ಡಾ.ಕೋಲೆಯಂಡ ಮೋಹನ್ ಅಪ್ಪಾಜಿ, ಬೆಂಗಳೂರು ಜಯದೇವ ಆಸ್ಪತ್ರೆಯ ಮುಖ್ಯಸ್ಥ, ಖ್ಯಾತ ಹೃದಯ ತಜ್ಞ ಡಾ.ಮಂಜುನಾಥ್, ಪ್ರೊ.ಡಾ.ವಿಜಯೇಂದ್ರ ಹೊನ್ನೂರಪ್ಪ, ಡಾ.ಹರಿಹರ ಮೂರ್ತಿ ಸೇರಿದಂತೆ 2000ಕ್ಕೂ ಅಧಿಕ ವೈದ್ಯರು ಪಾಲ್ಗೊಂಡಿದ್ದರು.