ಕನ್ನಡಪ್ರಭ ವಾರ್ತೆ ಬೆಂಗಳೂರು
ಎನ್ಎಸ್ಜಿ ದೆಹಲಿಯ ಮನೇಸರ್ನಲ್ಲಿ ನ.11ರಿಂದ 16ರ ವರೆಗೆ ಆಯೋಜಿಸಿದ್ದ ರಾಷ್ಟ್ರೀಯ ಜಂಟಿ ಐಇಡಿ ನಿಷ್ಕ್ರಿಯ ಸ್ಪರ್ಧೆಯಲ್ಲಿ ಅರೆ ಮಿಲಿಟರಿ ಪಡೆಗಳು, ರಾಜ್ಯ ವಿಶೇಷ ಪಡೆಗಳು ಮತ್ತು ರಾಜ್ಯ ಪೊಲೀಸ್ ತಂಡಗಳು ಸೇರಿ ದೇಶದ 18 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳು ಮತ್ತು 5 ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಭಾಗವಹಿಸಿದ್ದವು. 11 ವಿಭಾಗಗಳಲ್ಲಿ ನಡೆ ಸ್ಪರ್ಧೆಯಲ್ಲಿ ರಾಜ್ಯ ಐಇಡಿ ನಿಷ್ಕ್ರಿಯ ತಂಡವು ಪ್ರತಿ ವಿಭಾಗದಲ್ಲಿ ಮೊದಲ ಸ್ಥಾನ ಪಡೆದು ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಸ್ಪರ್ಧೆಯಲ್ಲಿ ವಿವಿಧ ಬಾಂಬ್ ನಿಷ್ಕ್ರಿಯ ತಂತ್ರಗಳು ಮತ್ತು ಕಠಿಣ ಐಇಡಿ ಸನ್ನಿವೇಶ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಸ್ಪರ್ಧೆಯ ಮೂಲಕ ತಂಡಗಳ ಅಸಾಧಾರಣ ಕಾರ್ಯಕ್ಷಮತೆ, ನಾವೀನ್ಯತೆ ಮತ್ತು ಬಾಂಬ್ ನಿಷ್ಕ್ರಿಯ ತಂತ್ರಗಳ ಶ್ರೇಷ್ಟತೆಯನ್ನು ಗುರುತಿಸಲಾಗುತ್ತದೆ. ಈ ಸ್ಪರ್ಧೆಯ ಎಲ್ಲಾ ವಿಭಾಗಗಳಲ್ಲಿ ರಾಜ್ಯ ಐಇಡಿ ನಿಷ್ಕ್ರಿಯ ತಂಡವು ಮೊದಲ ಸ್ಥಾನ ಪಡೆದು ಅದ್ಭುತ ಸಾಧನೆ ಮಾಡಿದೆ. ಈ ಸಾಧನೆ ರಾಜ್ಯ ಪೊಲೀಸ್ ಇಲಾಖೆಯ ಆಂತರಿಕಾ ಭದ್ರತಾ ವಿಭಾಗದ ಐಇಡಿ ನಿಷ್ಕ್ರಿಯ ತಂಡದ ಕಠಿಣ ತರಬೇತಿ, ಪರಿಶ್ರಮ, ಸಮರ್ಪಣೆಯ ಪ್ರತಿ ಬಿಂಬವಾಗಿದೆ. ರಾಜ್ಯ ಪೊಲೀಸರ ರಾಷ್ಟ್ರ ಮಟ್ಟದ ಈ ಶ್ರೇಷ್ಠ ಸಾಧನೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಶ್ಲಾಘಿಸಿದ್ದಾರೆ.