ದಾಬಸ್ಪೇಟೆ: ಸೋಂಪುರ ಗ್ರಾಪಂ ವ್ಯಾಪ್ತಿಗೆ ಸೇರುವ ಶಿವಾಸ್ ಡಾಬಾ ಬಳಿಯ ರಾಷ್ಟ್ರೀಯ ಹೆದ್ದಾರಿ-48ರ ಸರ್ವಿಸ್ ರಸ್ತೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೆ ಚರಂಡಿ ಹಾಗೂ ಶೌಚಾಲಯದ ನೀರು ರಸ್ತೆಗೆ ಹರಿಯುತ್ತಿದ್ದು, ವಾಹನ ಹಾಗೂ ಜನ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿದೆ. ಜಾಸ್ ಟೋಲ್ ಕಂಪನಿಯವರು ಈ ರಸ್ತೆಯನ್ನು ನಿರ್ವಹಿಸುತ್ತಿದ್ದು ಚರಂಡಿ ನಿರ್ಮಿಸದೆ ಕಾಟಾಚಾರಕ್ಕೆ ರಸ್ತೆ ನಿರ್ಮಿಸಿರುವುದೇ ಈ ಕೊಳಚೆ ನೀರು ರಸ್ತೆಗೆ ಬರಲು ಕಾರಣವೆಂಬುದು ಸಾರ್ವಜನಿಕರ ಆರೋಪ. ಈ ಸರ್ವಿಸ್ ರಸ್ತೆ ಮುಖಾಂತರ ದಕ್ಷಿಣಕಾಶಿ ಶಿವಗಂಗಾ ಕ್ಷೇತ್ರ, ಗೊರವನಹಳ್ಳಿ ಲಕ್ಷ್ಮೀ ದೇವಾಲಯ, ಸಾವನದುರ್ಗ, ಮಾಗಡಿ ರಂಗನಾಥ ಸ್ವಾಮಿ, ದೇವರಾಯನದುರ್ಗ, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬೇಕಿದೆ. ಪ್ರತಿನಿತ್ಯ ಸಾವಿರಾರು ಜನರು ಈ ಗಲೀಜು ನೀರನ್ನು ಸಿಡಿಸಿಕೊಂಡೆ ಪ್ರವಾಸಿ ತಾಣಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಸರ್ವಿಸ್ ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಒಳಪಡುತ್ತದೆ. ಈಗಾಗಲೇ ಪ್ರಾಧಿಕಾರ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರು ರಸ್ತೆ ಸ್ವಚ್ಛಗೊಳಿಸಲು ಖಾಸಗಿಯವರಿಗೆ ವಹಿಸಿದ್ದಾರೆ. ಗ್ರಾಪಂಗೆ ಸ್ವಚ್ಛತೆಗೊಳಿಸಲು ವಹಿಸಿದರೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ವಹಿಸುತ್ತೇವೆ.
-ರವಿಶಂಕರ್, ಪಿಡಿಒ, ಸೋಂಪುರ ಗ್ರಾಪಂಕೋಟ್..........ಸರ್ವೀಸ್ ರಸ್ತೆ ನಿರ್ಮಾಣ ಮಾಡಿದವರು ಚರಂಡಿಯನ್ನು ಸರಿಯಾಗಿ ನಿರ್ಮಿಸದಿರುವುದೇ ಈ ಅವ್ಯವಸ್ಥೆಗೆ ಮುಖ್ಯ ಕಾರಣವಾಗಿದೆ. ರಸ್ತೆ ಸರಿಪಡಿಸಲು ಎಷ್ಟು ಬಾರಿ ಮನವಿ ಮಾಡಿದರೂ ಹೆದ್ದಾರಿ ಪ್ರಾಧಿಕಾರ ಸ್ಪಂದಿಸುತ್ತಿಲ್ಲ. ಈಗಲಾದರೂ ಅಧಿಕಾರಿಗಳು ಗಮನಹರಿಸಿ ಕೂಡಲೇ ಸಮಸ್ಯೆ ಬಗೆಹರಿಸಬೇಕು.
-ಬಸವರಾಜು, ಸ್ಥಳೀಯ ನಿವಾಸಿ(ಒಂದು ಫೋಟೋ ಮಾತ್ರ ಬಳಸಿ)
ಪೋಟೋ 1 * 2 : ದಾಬಸ್ಪೇಟೆಯ ಶಿವಾಸ್ ಡಾಬಾ ಸಮೀಪ ರಾಷ್ಟ್ರೀಯ ಹೆದ್ದಾರಿ-48ರ ಸರ್ವೀಸ್ ರಸ್ತೆಯಲ್ಲಿ ಚರಂಡಿ ಹಾಗೂ ಶೌಚಾಲಯದ ನೀರು ರಸ್ತೆಗೆ ಹರಿಯುತ್ತಿರುವುದು.