ಕನ್ನಡಪ್ರಭ ವಾರ್ತೆ ಮಂಗಳೂರು
ಹಿಂದೂ ಕಾರ್ಯಕರ್ತರ ಮನೆಗೆ ರಾತ್ರಿ ವೇಳೆ ಪೊಲೀಸ್ ಭೇಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ. ಜಿಲ್ಲಾ ಪೊಲೀಸರ ವಿರುದ್ಧ ತನಿಖೆಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಆದೇಶಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣದ ಸಮಗ್ರ ತನಿಖೆ ನಡೆಸಿ, ಸ್ಥಳ ತನಿಖೆ ನಡೆಸಿ ಎರಡು ವಾರದಲ್ಲಿ ‘Action Taken Report’ ವರದಿ ಸಲ್ಲಿಸಬೇಕು. ಈ ಸಂದರ್ಭ ಪೊಲೀಸರ ದಾಖಲೆ ಪರಿಶೀಲನೆ ಮತ್ತು ಎಲ್ಲ ಸಂತ್ರಸ್ತರ ಹೇಳಿಕೆಗಳನ್ನು ಆಧರಿಸಿ ವರದಿ ಮಾಡಲು ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ ತನಿಖಾ ವಿಭಾಗದ ಡಿಜಿಗೆ ಸೂಚನೆ ನೀಡಿದೆ.ಮಂಗಳೂರು ಉತ್ತರ ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ ದೂರು ಆಧರಿಸಿ ತನಿಖೆ ಸೂಚನೆ ನೀಡಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಸಾರ್ವಜನಿಕರು, ಸಮಾಜ ಸೇವಕರು, ಒಂದು ಸಮುದಾಯದ ಸಂಘಟನೆಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಬಗ್ಗೆ ಪೊಲೀಸರು ಕಾನೂನು ಬಾಹಿರ ನಿಗಾ ಇರಿಸಿದ್ದು, ತಡರಾತ್ರಿ ಪೊಲೀಸರು ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ರಾತ್ರಿ 11 ಗಂಟೆ ನಂತರ ಕಾನೂನು ಬದ್ಧ ವ್ಯಕ್ತಿಗಳಿಗೆ ತೊಂದರೆಯಾಗುತ್ತಿದೆ ಎಂದು ಡಾ. ಭರತ್ ಶೆಟ್ಟಿ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು.ಯಾವುದೇ ಅಪರಾಧದ ಹಿನ್ನೆಲೆ, ಎಫ್ಐಆರ್ ಅಥವಾ ತನಿಖೆ ಇಲ್ಲದೇ ಪೊಲೀಸರ ಭೇಟಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಪೊಲೀಸ್ ಸಿಬ್ಬಂದಿ ಯಾವುದೇ ವಾರಂಟ್ ಅಥವಾ ಕಾನೂನು ದಾಖಲೆ ನೀಡದೆ ಮನೆಗಳಿಗೆ ಹೋಗಿ ಛಾಯಾಚಿತ್ರ ತೆಗೆದು, ಜಿಪಿಎಸ್ ಸ್ಥಳ ಮಾಹಿತಿ ಸಂಗ್ರಹಿಸಿ, ಪ್ರಶ್ನೆ ಮಾಡಿದ್ದಾರೆ ಎಂದು ಆಕ್ಷೇಪಿಸಿ ದ.ಕ. ಜಿಲ್ಲಾ ಎಸ್.ಪಿ. ವಿರುದ್ಧ ಶಾಸಕ ಡಾ. ಭರತ್ ಶೆಟ್ಟಿ ದೂರು ನೀಡಿದ್ದರು.