ಗಂಗಾವತಿ: ತಂತ್ರಜ್ಞಾನದ ಸದ್ಭಳಕೆಯಿಂದ ದೇಶ ಪ್ರಗತಿ ಸಾಧ್ಯ ಎಂದು ಪ್ರಾಚಾರ್ಯ ಪ್ರೊ.ಕರಿಗೂಳಿ ಹೇಳಿದರು.
ವೈಜ್ಞಾನಿಕ ಚಿಂತನೆ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಮೂಲ ವಿಜ್ಞಾನದಲ್ಲಿ ಹೆಚ್ಚು ಆಸಕ್ತಿ ತೋರುತ್ತಾ ತಂತ್ರಜ್ಞಾನ ಬಳಸಿಕೊಳ್ಳಬೇಕು ಹಾಗೂ ನಮ್ಮ ಆಲೋಚನೆ ಅನ್ವೇಷಣೆಗಳಾಗಿ ಪರಿವರ್ತಿಸಲು ತಂತ್ರಜ್ಞಾನ ಸಾಧನವಾಗಿ ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಹಸಂಚಾಲಕ ಡಾ.ವಿರುಪಾಕ್ಷ ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಾನಗರಗಳಲ್ಲಿ ಮಾತ್ರ ಲಭ್ಯವಿರುವ ತಾರಾಲಯ ವೀಕ್ಷಣೆ ಸಾಧ್ಯವಾಗಿಸಿದೆ ಎಂದರು.ಸಂಚಾರಿ ತಾರಾಲಯದ ಸಿಬ್ಬಂದಿ ಚರಂತಯ್ಯ ಬೂಸನೂರುಮಠ, ಯೋಜನೆ ವಿಶೇಷವಾಗಿ ಹಳ್ಳಿಗಳಲ್ಲಿರುವ ಶಾಲಾ ವಿದ್ಯಾರ್ಥಿಗಳಿಗಾಗಿಯೇ ರೂಪಿಸಿದ ಕಾರ್ಯಕ್ರಮವಾಗಿದ್ದು ಇದರ ಉಪಯೋಗ ಪಡೆದುಕೊಂಡು ಮೂಲ ವಿಜ್ಞಾನ ಅಧ್ಯಯನಕ್ಕೆ ಆಸಕ್ತಿ ತೋರಬೇಕೆಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಕಾಲೇಜಿನವರೆಗೂ ತಮ್ಮ ತಾರಾಲಯ ಉಪಕರಣದೊಂದಿಗೆ ಬಂದು ಇಂತಹ ಅಪರೂಪದ ಕಾರ್ಯಕ್ರಮ ಸಾಧ್ಯ ಮಾಡಿದ್ದಕ್ಕೆ ಸಂಚಾರಿ ತಾರಾಲಯದ ಸಿಬ್ಬಂದಿ ಚರಂತಯ್ಯ ಬೂಸನೂರು ಮಠ ಮತ್ತು ಮಂಜುನಾಥ ಅವರನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಕರಿಗೂಳಿ ಸನ್ಮಾನಿಸಿದರು.