ವಿದ್ಯಾರ್ಥಿಗಳು ದೇಶದ ಆಧಾರ ಸ್ತಂಭ

KannadaprabhaNewsNetwork | Published : Sep 14, 2024 1:47 AM

ಹೊಸಮಠದ ಚಿದಾನಂದ ಶ್ರೀಗಳು ನೇರ ನಡೆ ನುಡಿಗೆ ಹೆಸರಾದವರು

ಕನ್ನಡಪ್ರಭ ವಾರ್ತೆ ಮೈಸೂರುವಿದ್ಯಾರ್ಥಿಗಳು ದೇಶದ ಆಧಾರ ಸ್ತಂಭವಾಗಿದ್ದಾರೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ಮತ್ತು ಶ್ರೀ ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ದೇಶದ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು ಎಂದರು.ಹೊಸಮಠದ ಚಿದಾನಂದ ಶ್ರೀಗಳು ನೇರ ನಡೆ ನುಡಿಗೆ ಹೆಸರಾದವರು. ಸಮಾಜ ಸೇವೆಯಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚು ಒತ್ತು ಕೊಡುತ್ತಾ ಬಂದಿದ್ದಾರೆ. ಶ್ರೀಗಳ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಅವರು ಹೇಳಿದರು.ಈ ಸಂಸ್ಥೆಯಲ್ಲಿ ವಿದ್ಯೆ ಪಡೆದಂತಹ ಎಷ್ಟೋ ವಿದ್ಯಾರ್ಥಿಗಳು ಹಲವಾರು ಉನ್ನತ ಸ್ಥಾನಗಳನ್ನು ಪಡೆದಿದ್ದಾರೆ. ಈ ವಿದ್ಯಾ ಸಂಸ್ಥೆಯಲ್ಲಿ ದೊರಕುತ್ತಿರುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ದೇಶದ ಸತ್ಪ್ರಜೆಗಳಾಗಿ ಬೆಳೆಯಬೇಕು ಎಂದು ಅವರು ಕರೆ ನೀಡಿದರು. ಪ್ರತಿಭೆಯಲ್ಲಿ ಬಡತನವಿಲ್ಲಅಧ್ಯಕ್ಷತೆ ವಹಿಸಿದ್ದ ಶ್ರೀ ನಟರಾಜ ಪ್ರತಿಷ್ಠಾನ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ಪ್ರತಿಭೆ ಇದ್ದರೆ ಪುರಸ್ಕಾರ ತಾನೇ ಹುಡುಕಿಕೊಂಡು ಬರುತ್ತದೆ. ಶ್ರೀಗಳ ಸೇವಾ ಕಾರ್ಯ ಎಂದೆಂದಿಗೂ ಇರುವಂತದ್ದು, ಬದುಕಿನಲ್ಲಿ ಬಡತನವಿದ್ದರೂ ಪ್ರತಿಭೆಯಲ್ಲಿ ಬಡತನವಿಲ್ಲ. ಇಂತಹ ವೇದಿಕೆಗಳು ಪ್ರತಿಭೆಯನ್ನು ಅನಾವರಣಗೊಳಿಸಲು ಸಹಾಯಕವಾಗುತ್ತವೆ ಎಂದರು.ಅದೇ ರೀತಿ ಶ್ರಮ ಇದ್ದ ಕಡೆ ಪುರಸ್ಕಾರ ಇದ್ದೇ ಇರುತ್ತದೆ. ಪ್ರತಿಭೆಗೆ ಯಾವುದೇ ಜಾತಿ, ಧರ್ಮ, ವರ್ಗ ಇರುವುದಿಲ್ಲ. ಎಲ್ಲರೂ ಮನುಜ ಮತದ ಮೂಲಕ ವಿಶ್ವ ಪಥವನ್ನು ಸಾಧಿಸಬೇಕು. ಅದಕ್ಕೆ ಶ್ರೀ ನಟರಾಜ ಕಾಲೇಜು ಪೂರಕವಾಗಿ ಸರ್ವಜನಾಂಗದ ಶಾಂತಿಯ ತೋಟವಾಗಿದೆ ಎಂದು ಅವರು ಹೇಳಿದರು.ಇದೇ ವೇಳೆ ವಾತ್ಸಲ್ಯ ತ್ರೈಮಾಸಿಕ ಸಂಚಿಕೆಯನ್ನು ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ಬಿಡುಗಡೆ ಗೊಳಿಸಿದರು. ನಂತರ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಬಳಿಕ ವಿದ್ಯಾರ್ಥಿನಿಯರ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು.ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಸಂಸದ ಪ್ರತಾಪ್ ಸಿಂಹ, ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದರಾಜು, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜಪ್ಪ, ಕನ್ನಡ ಕಲಾ ಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್, ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಡಾ.ಎಂ. ಶಾರದಾ, ಉಪ ಪ್ರಾಂಶುಪಾಲ ಜಿ. ಪ್ರಸಾದಮೂರ್ತಿ ಇದ್ದರು. ಚೂಡಾಮಣಿ ಪ್ರಾರ್ಥಿಸಿದರು. ಪಿಯು ಕಾಲೇಜು ಪ್ರಾಂಶುಪಾಲೆ ವಿ.ಡಿ. ಸುನೀತಾರಾಣಿ ಸ್ವಾಗತಿಸಿದರು.ಎಂ.ಎಸ್. ಸಂಧ್ಯಾರಾಣಿ ವಂದಿಸಿದರು. ಬಿ. ರಾಧಾ ನಿರೂಪಿಸಿದರು.