ಲಕ್ಷ್ಮೀನರಸಿಂಹ ದೇಗುಲದಲ್ಲಿ ಸಂಪನ್ನಗೊಂಡ ನವರಾತ್ರಿ ಮಹೋತ್ಸವ

KannadaprabhaNewsNetwork | Published : Oct 14, 2024 1:19 AM

ಸಾರಾಂಶ

ಶ್ರೀಕ್ಷೇತ್ರದ ಪರಂಪರಾವಧೂತ ಶ್ರೀ ಸತೀಶ್ ಶರ್ಮ ಅವಧೂತರ ಮಾರ್ಗದರ್ಶನದಲ್ಲಿ ಪ್ರತಿ ದಿನ ಪ್ರಾತಃ ಕಾಲದಿಂದಲೇ ವಿವಿಧ ಹೋಮ, ಹವನಾದಿಗಳೊಂದಿಗೆ ಲೋಕಕಲ್ಯಾಣಾರ್ಥವಾಗಿ ವಿಶೇಷ ಪ್ರಾರ್ಥನೆಗಳು ನೆರವೇರಿದವು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಶ್ರೀವಿದ್ಯಾ ನಗರ ಬಡಾವಣೆಯಲ್ಲಿರುವ ಶ್ರೀ ಲಕ್ಷ್ಮೀನರಸಿಂಹ, ವಿಷ್ಣು ಪಂಚಾಯತನ ಶ್ರೀಕ್ಷೇತ್ರದಲ್ಲಿ ನವರಾತ್ರಿಯ ಒಂಬತ್ತು ದಿನಗಳ ಕಾಲ ನಡೆದ ವಿಶೇಷ ಧಾರ್ಮಿಕ ಕಾರ್ಯಕ್ರಮ ಶಮೀಪೂಜೆಯೊಂದಿಗೆ ಸಂಪನ್ನಗೊಂಡಿತು.

ಶ್ರೀಕ್ಷೇತ್ರದ ಪರಂಪರಾವಧೂತ ಶ್ರೀ ಸತೀಶ್ ಶರ್ಮ ಅವಧೂತರ ಮಾರ್ಗದರ್ಶನದಲ್ಲಿ ಪ್ರತಿ ದಿನ ಪ್ರಾತಃ ಕಾಲದಿಂದಲೇ ವಿವಿಧ ಹೋಮ, ಹವನಾದಿಗಳೊಂದಿಗೆ ಲೋಕಕಲ್ಯಾಣಾರ್ಥವಾಗಿ ವಿಶೇಷ ಪ್ರಾರ್ಥನೆಗಳು ನೆರವೇರಿದವು.

ಅವಧೂತ ಸತೀಶ್ ಶರ್ಮಾಜೀ ಮಾತನಾಡಿ, ನಾಡಿನ ವಿವಿಧ ಭಾಗಗಳಿಂದ ಪ್ರತಿದಿನ ನೂರಾರು ಭಕ್ತಾದಿಗಳು ಶ್ರೀಕ್ಷೇತ್ರಕ್ಕೆ ಆಗಮಿಸಿ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ್ದಾರೆ. ವಿಷ್ಣು ಸ್ವರೂಪಿ ಲಕ್ಷ್ಮೀನರಸಿಂಹನ ಸನ್ನಿದಾನವು ಪಂಚಮುಖಿ ಗಣಪತಿ, ಸೂರ್ಯನಾರಾಯಣ, ಅಂಬಿಕಾ, ಶ್ರೀಕಂಠೇಶ್ವರ ಮತ್ತು ಪಂಚಾಯತ್ ಆಂಜನೇಯ ಒಂದೇ ಕ್ಷೇತ್ರದಲ್ಲಿರುವ ಏಕೈಕ ಕ್ಷೇತ್ರವಾಗಿದ್ದು, ಇಂದು ಕ್ಷೇತ್ರದಲ್ಲಿ ಆಯುಧಪೂಜಾ ಮತ್ತು ವಿಜಯದಶಮಿ‌ ಪ್ರಯುಕ್ತ ಶಮೀಪೂಜೆ ಆಯೋಜಿಸಲಾಗಿದ್ದು, ಈ ಧಾರ್ಮಿಕ ಕೈಂಕರ್ಯಗಳ ಮೂಲಕ ನಮ್ಮ ಸನಾತನ ಧರ್ಮದ ಸರ್ವೇಜನಃ ಸುಖಿನೋ ಭವತುಃ ನುಡಿಯಂತೆ ಲೋಕ ಕಲ್ಯಾಣಾರ್ಥವಾಗಿ ಪ್ರಾರ್ಥಿಸಲಾಯಿತು. ಯಾಗ ಶಾಲೆಯಲ್ಲಿ ಪ್ರತಿದಿನ ಹಳ್ಳಾಡಿ ಮುರಳೀಧರ ಕೆದ್ಲಾಯ ಮತ್ತು ಆದಿತ್ಯ ಶರ್ಮ ಕಣಕಟ್ಟೆ ತಂಡದಿಂದ ಹೋಮ- ಹವನಾದಿಗಳನ್ನು ನಡೆಸಲಾಯಿತು ಎಂದರು.

ತಳಿರು ತೋರಣ ಮತ್ತು ಹೂವುಗಳಿಂದ ಅಲಂಕೃತಗೊಂಡ ಪ್ರಾಂಗಣದಲ್ಲಿ ಬಾಣಾವರ ನಾರಾಯಣಪ್ಪ ಮತ್ತು ತ್ಯಾಗರಾಜು ತಂಡದಿಂದ ನಡೆಸಲಾದ ನಾದಸ್ವರದೊಂದಿಗೆ ಶ್ರೀಲಕ್ಷ್ಮೀನರಸಿಂಹ ದೇವರ ಉಯ್ಯಾಲೋತ್ಸವ ಮತ್ತು ಮೆರವಣಿಗೆ ನೆರವೇರಿತು.

ಶ್ರೀಕ್ಷೇತ್ರದ ಆಡಳಿತಾಧಿಕಾರಿ ಬಿ.ಎಸ್ ಸೇತೂರಾಮ್, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಗುಂಡೂಗೋಳ, ಸದಸ್ಯರಾದ ಕಾಳಕೂರ, ಶ್ರೀನಿವಾಸ್, ನಾಗೇಶ್ , ಶ್ರೀಕಂಠ ಶರ್ಮ, ರಾಮಚಂದ್ರು, ಪುರುಷೋತ್ತಮ, ಇಂದ್ರಮ್ಮ ಸೇರಿದಂತೆ ಶ್ರೀವಿದ್ಯಾ ನಗರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು, ಮಹಿಳೆಯರು, ನೂರಾರು ಭಕ್ತಾದಿಗಳು ಭಾಗವಹಿಸಿದ್ದರು.

Share this article