ವಾಲ್ಮೀಕಿ ಮಠದ 27ನೇ ವಾರ್ಷಿಕೋತ್ಸವ । ಫೆ.8, 9ರಂದು ದಾವಣಗೆಯಲ್ಲಿ ಮಠದ ಜಾತ್ರೆ
ರಾಜಕೀಯ ಸಂದರ್ಭದಲ್ಲಿ ರಾಜಕಾರಣ ಮಾಡಿ, ರಾಜಕೀಯ ಮುಗಿದ ನಂತರ ಪಕ್ಷ ಭೇದ ಭಾವ ಮರೆತು ನೀವೆಲ್ಲರೂ ಅಣ್ಣ ತಮ್ಮಂದಿರಾಗಿ ನಮ್ಮ ನಾಯಕ ಸಮುದಾಯದ ಮುಖಂಡರು ಸಮುದಾಯದ ಪರವಾಗಿ ಸಂಘಟಿತರಾಗಬೇಕು ಎಂದು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ತಿಳಿಸಿದರು.
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಶ್ರೀಮಠದ 27 ನೇ ವಾರ್ಷಿಕೋತ್ಸವ, ಲಿಂಗೈಕ್ಯ ಶ್ರೀ ಪುಣ್ಯಾನಂದಪುರಿ ಮಹಾಸ್ವಾಮೀಜಿಯವರ 18 ನೇ ವರ್ಷದ ಪುಣ್ಯಾರಾಧನೆ, ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಯವರ 17 ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದ ಜಾತ್ರೆಗೆ ಹನೂರು ತಾಲೂಕು ನಾಯಕ ಸಮುದಾಯದ ಮುಖಂಡರಿಗೆ ಜಾತ್ರೆಗೆ ಆಹ್ವಾನ ನೀಡಿ ಮಾತನಾಡಿದರು.ಫೆ.8 ಮತ್ತು 9ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನ ಹಳ್ಳಿಯಲ್ಲಿ ನಡೆಯುವ ಜಾತ್ರೆಗೆ ಪಕ್ಷ ಭೇದಗಳನ್ನು ಬದಿಗೊತ್ತಿ ಎಲ್ಲರೂ ಗ್ರಾಮದ ಪತ್ರಿ ಹಳ್ಳಿಗಳ ಜಾತ್ರಾ ಮಹೋತ್ಸವಕ್ಕೆ ಎಲ್ಲರನ್ನೂ ಕರೆತನ್ನಿ, ಜಾತ್ರೆಗೆ ಬರುವ ಜನರಿಗೆ ಊಟ, ವಸತಿ ಹಾಗೂ ಮೂಲಸೌಕರ್ಯ ಇರುತ್ತದೆ. ಹೀಗಾಗಿ ಸಮುದಾಯ ಒಗ್ಗಟ್ಟಿನಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದರು.
ಚಾಮರಾಜನಗರ ಕೇಂದ್ರ ಸ್ಥಾನದ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮುಂದಿನ ದಿನಗಳಲ್ಲಿ ಮಹರ್ಷಿ ವಾಲ್ಮೀಕಿ ಹಾಗೂ ಭಗೀರಥ, ಕನಕ ದಾಸ ಅವರ ಪ್ರತಿಮೆಗಳ ಸ್ಥಾಪನೆಗೆ ಭೂಮಿಪೂಜೆ ನೆರವೇರಿಸಲು ತಿಳಿಸಲಾಗಿದೆ ಎಂದರು.
ತಾಲೂಕು ನಾಯಕ ಸಂಘ ಅಧ್ಯಕ್ಷ ಪುಟ್ಟವೀರ ನಾಯಕ, ಕೊಪ್ಪಾಳಿ ಮಹಾದೇವ ನಾಯಕ, ಗೌರವ ಅಧ್ಯಕ್ಷ ಎಚ್.ಕೆ.ಶಿವಣ್ಣ, ಉಪಾಧ್ಯಕ್ಷರಾದ ವೆಂಕಟಾಚಲ (ತಿರುಪತಿ), ಖಜಾಂಚಿ ಮಲ್ಲೇಶ್, ಬಾಲುನಾಯಕ, ದೊಡ್ಡಿಸಿಗಾನಾಯಕ, ರಾಚಪ್ಪ ಜಗದೀಶ್, ನಂಜಪ್ಪ, ಸಮುದಾಯದ ಮುಖಂಡರು ಹಾಜರಿದ್ದರು.