- ಎನ್ಸಿಪಿ ಕುರಿತು ಮಾಹಿತಿ ಕೇಳಿದ ಸಂಸದೆ ಡಾ.ಪ್ರಭಾಗೆ ಕೇಂದ್ರ ಉತ್ತರ
ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಷ್ಟ್ರೀಯ ಸಹಕಾರ ನೀತಿ (NCP)–2025 ಅನ್ನು 24 ಜುಲೈ 2025ರಂದು ಆರಂಭಿಸಲಾಗಿದೆ. ಸಹಕಾರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮಾರ್ಗದರ್ಶಿಯಾಗುವ ಈ ನೀತಿಯಲ್ಲಿ 6 ತಂತ್ರಾತ್ಮಕ ಸ್ತಂಭಗಳು, 16 ಉದ್ದೇಶಗಳು ಮತ್ತು 83 ಶಿಫಾರಸುಗಳು ಒಳಗೊಂಡಿವೆ. ರಾಜ್ಯಗಳು ತಮ್ಮ ಸಹಕಾರ ನೀತಿಗಳನ್ನು ಈ ಹೊಸ ನೀತಿಗೆ ಅನುಗುಣವಾಗಿ ರೂಪಿಸಿಕೊಳ್ಳಲು ಪ್ರೋತ್ಸಾಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.ಹೊಸ ರಾಷ್ಟ್ರೀಯ ಸಹಕಾರ ನೀತಿ ಕುರಿತು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕೇಂದ್ರ ಸಹಕಾರ ಸಚಿವಾಲಯಕ್ಕೆ ಪ್ರಶ್ನೆ ಕೇಳಿದ್ದರು. ಹೊಸ ರಾಷ್ಟ್ರೀಯ ಸಹಕಾರ ನೀತಿಯನ್ನು ದೇಶದ ಎಲ್ಲ ರಾಜ್ಯಗಳಲ್ಲಿ ಜಾರಿಗೆ ತಂದಿರುವುದೇ, ಅದರ ಅನುಷ್ಠಾನ ಮಾರ್ಗಸೂಚಿಗಳು, ಕಾಲಮಿತಿಗಳು ಹಾಗೂ ಅಳೆಯಬಹುದಾದ ಗುರಿಗಳನ್ನು ಪ್ರಕಟಿಸಿರುವರೇ ಎಂಬುದರ ಕುರಿತು ಮಾಹಿತಿ ಕೇಳಿದ್ದಾರೆ. ಜೊತೆಗೆ ಈ ನೀತಿ ರೂಪಿಸುವ ವೇಳೆ ರಾಜ್ಯ ಸರ್ಕಾರಗಳು ಮತ್ತು ಸಹಕಾರ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆಯೇ, ಸಹಕಾರ ಸಂಘಗಳ ಆಡಳಿತ, ಲೆಕ್ಕಪರಿಶೋಧನೆ, ಸಾಲ ಸೌಲಭ್ಯ ಮತ್ತು ಡಿಜಿಟಲೀಕರಣದಲ್ಲಿ ಸುಧಾರಣೆಗಳಾಗಿದೆಯೇ ಎಂಬ ಬಗ್ಗೆ ವಿವರ ಕೇಳಿದ್ದು, ಕೇಂದ್ರ ಸರ್ಕಾರ ಉತ್ತರಿಸಿದೆ.
ನೀತಿ ರೂಪಿಸುವ ಸಂದರ್ಭದಲ್ಲಿ ರಾಜ್ಯಗಳು ಮತ್ತು ಹಿತಾಸಕ್ತಿಪಕ್ಷಗಳೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಲಾಗಿದೆ. ಸುರೇಶ್ ಪ್ರಭು ಅಧ್ಯಕ್ಷತೆಯಲ್ಲಿ 48 ಸದಸ್ಯರ ಸಮಿತಿ ರಚಿಸಲಾಗಿದ್ದು, 17 ಸಭೆಗಳು ಹಾಗೂ 4 ಪ್ರಾದೇಶಿಕ ಕಾರ್ಯಾಗಾರಗಳ ಮೂಲಕ ಒಟ್ಟು 648 ಸಲಹೆಗಳು ಸಂಗ್ರಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದೇ ವೇಳೆ, ಈ ನೀತಿ ಇತ್ತೀಚೆಗೆ ಜಾರಿಗೆ ಬಂದಿರುವುದರಿಂದ ಅದರ ಸ್ಪಷ್ಟ ಪರಿಣಾಮಗಳನ್ನು ಅಳೆಯಲು ಇನ್ನೂ ಸಮಯ ಬೇಕಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ನೀತಿಯ ಅನುಷ್ಠಾನ ಮತ್ತು ಪ್ರಗತಿಯನ್ನು ಪರಿಶೀಲಿಸಲು ** Implementation Cell ** ಹಾಗೂ ** Policy Implementation & Monitoring Committee ** ರಚಿಸಲಾಗಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.- - -
* (ಮಿಡ್ಲ್) ಸಂಸತ್ ಭವನದಲ್ಲಿ ಪ್ರತಿಭಟನೆ; ಸಂಸದೆ ಡಾ.ಪ್ರಭಾ ಭಾಗಿದಾವಣಗೆರೆ: ದೆಹಲಿಯ ಸಂಸತ್ ಭವನದ ಮಕರ ದ್ವಾರದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ದಾವಣಗೆರೆ ಕ್ಷೇತ್ರ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭಾಗವಹಿಸಿದ್ದರು.ಗಲ್ಫ್ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಹೆಚ್ಚುತ್ತಿರುವ ಉದ್ವಿಗ್ನತೆ ಜಾಗತಿಕ ಮಟ್ಟದಲ್ಲಿ ಆತಂಕ ಉಂಟುಮಾಡುತ್ತಿದೆ. ಈ ಪರಿಸ್ಥಿತಿ ಮುಂದುವರಿದರೆ ತೈಲಗಳ ಬೆಲೆಗಳಲ್ಲಿ ಏರಿಕೆ ಸಂಭವಿಸುವ ಸಾಧ್ಯತೆ ಇದೆ. ಆ ಪ್ರದೇಶದಲ್ಲಿ ವಾಸಿಸುತ್ತಿರುವ ಭಾರತೀಯರು ಸಂಕಷ್ಟದ ಪರಿಸ್ಥಿತಿ ಎದುರಿಸುವ ಭೀತಿ ವ್ಯಕ್ತವಾಗುತ್ತಿದೆ. ಈ ಮಹತ್ವದ ವಿಷಯದ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟ ಮತ್ತು ಸಮರ್ಪಕ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ವಿರೋಧ ಪಕ್ಷದವರು ಆರೋಪಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ನೀತಿಗಳು ಮತ್ತು ಕ್ರಮಗಳನ್ನು ಪ್ರಶ್ನಿಸುವುದು, ಅವುಗಳ ಬಗ್ಗೆ ಚರ್ಚೆ ನಡೆಸುವುದು ಹಾಗೂ ಪರ್ಯಾಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ವಿರೋಧ ಪಕ್ಷಗಳ ಮೂಲಭೂತ ಜವಾಬ್ದಾರಿಯಾಗಿದೆ. ವಿರೋಧ ಪಕ್ಷದ ಧ್ವನಿಯನ್ನು ತಡೆದು ಮೌನಗೊಳಿಸುವ ಪ್ರಯತ್ನಗಳು ನಡೆದರೆ ಅದು ಜನರ ಧ್ವನಿಯನ್ನೇ ಕುಂಠಿತಗೊಳಿಸುವಂತಾಗುತ್ತದೆ ಎಂದು ಸಂಸದರು ಪ್ರತಿಭಟನೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.- - --10ಕೆಡಿವಿಜಿ31:
- - --10ಕೆಡಿವಿಜಿ32: ಡಾ.ಪ್ರಭಾ ಮಲ್ಲಿಕಾರ್ಜುನ