ಕನ್ನಡಪ್ರಭ ವಾರ್ತೆ ಮಡಿಕೇರಿನಗರದ ದಾಸವಾಳ ರಸ್ತೆಯ ವೀರಭದ್ರ ಮುನೇಶ್ವರ ದೇವಾಲಯ ಬಳಿ ‘ಮಡಿಕಟ್ಟೆ’ ನಿರ್ಮಿಸುವ ಸಂಬಂಧ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ತಿಳಿಸಿದ್ದಾರೆ.ನಗರದ ದಾಸವಾಳ ರಸ್ತೆಯ ವೀರಭದ್ರ ಮುನೇಶ್ವರ ದೇವಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಡಿವಾಳರ ಅಭಿವೃದ್ಧಿ ಸಂಘ ಸಹಕಾರದಲ್ಲಿ ಭಾನುವಾರ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಹಿಪ್ಪರಗಿಯ ಪರುತಯ್ಯ ಮತ್ತು ಸುಜ್ಞಾನವ್ವ ದಂಪತಿಯ ಪುತ್ರನಾಗಿ ರತ್ನ-ಶರಣ ಕಿರಣ ಮಡಿವಾಳ ಮಾಚಿದೇವರು ಜನಿಸಿದರು. ಅವರು ಹುಟ್ಟಿನಿಂದ ಮಡಿವಾಳನಾಗಿದ್ದರೂ ಅಚಲ ಕಾಯಕ ನಿಷ್ಠರಾಗಿದ್ದರು ಎಂದರು.
ಭಾರತದ ಇತಿಹಾಸದಲ್ಲಿ ಸಂಸತ್ ಭವನ ಮೊದಲು ಅಸ್ತಿತ್ವಕ್ಕೆ ಬಂದದ್ದು ಬಸವ ಕಲ್ಯಾಣದಲ್ಲಿ, ಆ ನಿಟ್ಟಿನಲ್ಲಿ ಅನುಭವ ಮಂಟಪ ಕಟ್ಟುವಲ್ಲಿ ಶರಣರೊಂದಿಗೆ ಮಡಿವಾಳ ಮಾಚಿದೇವರು ಶಕ್ತಿಮೀರಿ ದುಡಿದಿದ್ದಾರೆ ಎಂದು ವಿವರಿಸಿದರು.ರಾಜ್ಯದಲ್ಲಿ ಮಡಿವಾಳ ಸಮಾಜವು ೮ ಲಕ್ಷ ಜನಸಂಖ್ಯೆ ಹೊಂದಿದ್ದು, ಹಿಂದುಳಿದ ವರ್ಗವಾಗಿದೆ. ಆ ದಿಸೆಯಲ್ಲಿ ಸರ್ಕಾರದ ಹಲವು ಸವಲತ್ತುಗಳನ್ನು ಪಡೆದು ಮುಖ್ಯವಾಹಿನಿಗೆ ಬರಬೇಕು ಎಂದರು.
ಮಡಿವಾಳರ ಸಂಘ ಅಧ್ಯಕ್ಷ ಪಿ.ಜಿ.ಸುಕುಮಾರ್ ಮಾತನಾಡಿ, ವೀರಭದ್ರ ಮುನೇಶ್ವರ ದೇವಾಲಯ ಬಳಿ ಈ ಹಿಂದೆ ನಗರಸಭೆಯಿಂದ ಸೇತುವೆ ನಿರ್ಮಿಸಲಾಗಿದೆ. ಅದೇ ರೀತಿ ಈ ಬಾರಿ ಮಡಿಕಟ್ಟೆ ನಿರ್ಮಿಸಬೇಕು ಎಂದು ಮನವಿ ಮಾಡಿದರು. ಮಡಿವಾಳ ಸಮಾಜದ ಹಿರಿಯ ಮುಖಂಡರಾದ ಸುಬ್ರಹ್ಮಣ್ಯ, ಮಂಜುನಾಥ್ ಇತರರು ಇದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಸ್ವಾಗತಿಸಿದರು. ದೀಪಿಕಾ ಸಂದೀಪ್ ನಿರೂಪಿಸಿದರು. ಜ್ಯೋತಿ ಪ್ರಾರ್ಥಿಸಿದರು. ಕಾರ್ತಿಕ್ ವಂದಿಸಿದರು.