ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ನಾರ್ಗಾಣೆ ಗ್ರಾಮದ ಶ್ರೀದೇವಿಯ ಅಣ್ಣಪ್ಪಸ್ವಾಮಿ ದೇವಾಲಯದಲ್ಲಿ 36ನೇ ವರ್ಷದ ಧರ್ಮ ದೈವದ ನೇಮೋತ್ಸವ 2 ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯದೊಂದಿಗೆ ಅತೀ ವಿಜೃಂಭಣೆಯಿಂದ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು.ಅಣ್ಣಪ್ಪಸ್ವಾಮಿ ದೇವಾಲಯದಲ್ಲಿ ಧರ್ಮ ದೈವದ ನೇಮೋತ್ಸವದ ಅಂಗವಾಗಿ ದೇವಾಲಯದ ಆವರಣದ ವ್ಯಾಪ್ತಿಯಲ್ಲಿ ತಳಿರು ತೋರಣ, ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.
14ರಂದು ರಾತ್ರಿ 8 ಗಂಟೆಗೆ ಭಂಡಾರ ಮೆರವಣಿಗೆ, 8.30ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ, ರಾತ್ರಿ 9 ಗಂಟೆಗೆ ಅನ್ನದಾನ 10ಗಂಟೆಗೆ ಅಧಿದೇವತೆ ಕಲ್ಲುರ್ಟಿ(ಪಾಷಣಮೂರ್ತಿ) ದೈವದ ನೇಮೋತ್ಸವವು ನಡೆದು ಭಕ್ತಾದಿಗಳಿಗೆ ದರ್ಶನ ನೀಡಿತು. ನಂತರ ಭಕ್ತಾದಿಗಳಿಗೆ ಗಂಧ ಪ್ರಸಾದ ವಿತರಿಸಲಾಯಿತು. ರಾತ್ರಿ 1 ಗಂಟೆಗೆ ಧರ್ಮ ದೈವವಾದ ಅಣ್ಣಪ್ಪ, ಪಂಜುರ್ಲಿ ದೈವದ ಗಗ್ಗರ ಸೇವೆ ನೇಮವು ನೆರವೇರಿತು.15ರಂದು ಬೆಳಗ್ಗೆ 5 ಗಂಟೆಗೆ ಚಾಮುಂಡೇಶ್ವರಿ ಹಾಗೂ ಬಲ ಬಂಟ ಗುಳಿಗ ರಾಜ ದೈವದ ಜೋಡಿ ಕೋಲವು ಬೆಳಗ್ಗೆ 8 ಗಂಟೆಯವರೆಗೆ ನಡೆಯಿತು. ಧರ್ಮ ದೈವಕ್ಕೆ ಅರ್ಪಣೆಯನ್ನು ನೀಡಲಾಯಿತು. 9 ಗಂಟೆಗೆ ಧರ್ಮ ದೈವದ ಹರಕೆ, ಬೇಡಿಕೆಗಳನ್ನು ಭಕ್ತಾದಿಗಳು ಅರ್ಪಿಸಿದರು. ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರೆವೇರಿತು.
ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆಯನ್ನು ನೆರೆದಿದ್ದ ಭಕ್ತಾದಿಗಳಿಗೆ ನೀಡಲಾಯಿತು.ಈ ನಾರ್ಗಾಣೆ ಗ್ರಾಮದ ಶ್ರೀ ದೇವಿಯ ಅಣ್ಣಪ್ಪಸ್ವಾಮಿ ದೇವಾಲಯ ಪ್ರಮುಖರಾದ ಬಿ.ಡಿ.ರಾಜು ರೈ ಹಾಗೂ ಶಿವಪ್ರಸಾದ್ ರೈ ಕುಟುಂಬಸ್ಥರು ಇದ್ದರು.
ಸುತ್ತ ಮುತ್ತಲ ಗ್ರಾಮ ಹಾಗೂ ಊರುಗಳಾದ ವಿರಾಜಪೇಟೆ, ಸಿದ್ಧಾಪುರ, ಕುಶಾಲನಗರ ಹಾಗೂ ನೆರೆಯ ಜಿಲ್ಲೆಯ ಸುಳ್ಯ, ಪುತ್ತೂರು ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ನೆರದಿದ್ದರು.