ನೂತನ ತಂತ್ರಜ್ಞಾನದ 108 ಆರೋಗ್ಯ ರಕ್ಷಾ ಕವಚ ಯೋಜನೆ । ಗುಡ್ಡಗಾಡಿನ ಬಡ ರೋಗಿಗಳಿಗೆ ಅನುಕೂಲ
ತಾಲೂಕಿನ ಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂತನ ತಂತ್ರಜ್ಞಾನದ 108 ಆರೋಗ್ಯ ರಕ್ಷಾ ಕವಚ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸಲಾಗಿದೆ.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ ಐದಾರು ವರ್ಷಗಳಿಂದ ಸಾರ್ವಜನಿಕರಿಗೆ ಬಹತೇಕ ಎಲ್ಲಾ ಸೇವಾ ಸೌಲಭ್ಯಗಳನ್ನು ಉತ್ತಮವಾಗಿ ನೀಡಲಾಗುತ್ತಿದ್ದರೂ ತುರ್ತು ಪರಿಸ್ಥಿಯಲ್ಲಿ ಹಾಗೂ ವ್ಯಾಪ್ತಿಯ ಬಡರೋಗಿಗಳಿಗೆ 108 ಆರೋಗ್ಯ ರಕ್ಷಾ ಕವಚ ಸೇವೆ ಇರಲಿಲ್ಲ. ಈ ಹಿಂದೆ ಇದ್ದ ಆ್ಯಂಬುಲೆನ್ಸ್ ದುರಸ್ತಿಗೊಂಡಿತ್ತು. ಆದರೆ ಇದೀಗ ಜನರ ಜೀವ ರಕ್ಷಿಸುವ ಹಾಗೂ ತುರ್ತು ಪರಿಸ್ಥಿತಿಗೆ ಉಚಿತ ತುರ್ತು ಸಾಗಾಣಿಕೆ ಮತ್ತು ಆಸ್ಪತ್ರೆಗೆ ದಾಖಲಿಸುವ ಮುನ್ನ ಪ್ರಥಮ ಉಪಚಾರ ತುರ್ತು ಸೇವೆಯನ್ನು ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಆರೋಗ್ಯ ರಕ್ಷ ಕವಚ (108) ಆ್ಯಂಬುಲೆನ್ಸ್ ಸೇವೆ ಮೂಲಕ ತುರ್ತು ಸೇವಾಕಾಂಕ್ಷಿಗಳ ಇನ್ನಷ್ಟು ಜೀವ ರಕ್ಷಣೆ ಹಾಗೂ ಆರೋಗ್ಯಕರ ಬೆಳವಣಿಗೆಗೆ ನಾಂದಿಯಾಗಿದೆ.ಈ ಸಂದರ್ಭದಲ್ಲಿ ಡಾಕ್ಟರ್ ಮಮತಾ ಮಾತನಾಡಿ, ಕಳೆದೈದು ವರ್ಷಗಳಿಂದ ಕಾಡಾನೆಗಳ ಉಪಟಳ ಹೆಚ್ಚಾಗಿರುವ ಮಲೆನಾಡು ಭಾಗದ ಅರೇಹಳ್ಳಿ ಮತ್ತು ಸುತ್ತಮುತ್ತಲಿನ ಗುಡ್ಡಗಾಡು ಹಾಗೂ ಕಾಫಿ ತೋಟಗಳ ನಡುವೆ ಇರುವ ಹಳ್ಳಿ ಪ್ರದೇಶಗಳಲ್ಲಿ ರೋಗಿಗಳಿಗೆ ಸಂಕಷ್ಟವಿತ್ತು. ಆದರೆ ಸರ್ಕಾರದ ಈ ಯೋಜನೆಯಿಂದ ಬಡವರಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಈ ವೇಳೆ ಆರೋಗ್ಯ ರಕ್ಷಾ ಕವಚದ ಸಿಬ್ಬಂದಿ ಮೋಹನ್, ಲತೆಶ್, ಮಂಜುನಾಥ್, ಚಂದ್ರು, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು, ವೈದ್ಯಾಧಿಕಾರಿಗಳು, ದಾದಿಯರು ಇತರರು ಇದ್ದರು.