ಕನ್ನಡಪ್ರಭ ವಾರ್ತೆ ಶಿಕಾರಿಪುರ
ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾದ ಅವಧಿಯಲ್ಲಿ ಮೇಲ್ದರ್ಜೆಗೇರಿ ಹಲವು ಅತ್ಯಾಧುನಿಕ ಚಿಕಿತ್ಸಾ ಯಂತ್ರೋಪಕರಣದ ಮೂಲಕ ಗುಣಮಟ್ಟದ ಸೇವೆಗೆ ಹೆಸರುವಾಸಿಯಾಗಿ ನಿತ್ಯ ತಾಲೂಕಿನ ಜತೆಗೆ ಅಕ್ಕಪಕ್ಕದ ತಾಲೂಕಿನ 800 ರಿಂದ 1000 ಹೊರ ರೋಗಿಗಳು ಆಗಮಿಸುತ್ತಿರುವ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಇದೀಗ ನೂತನ ಯಂತ್ರದಿಂದ ರೋಗಿಗಳ ನಿರೀಕ್ಷೆ ಹೆಚ್ಚಿಸಿದೆ.
ಮಂಗಳವಾರ ಸಂಸದ ರಾಘವೇಂದ್ರ ಯಂತ್ರೋಪಕರಣದ ಘಟಕವನ್ನು ಲೋಕಾರ್ಪಣೆಗೊಳಿಸಿದರು.ಪ್ರಧಾನಿ ಮೋದಿ ಕ್ಷಯ ರೋಗಮುಕ್ತ ದೇಶವನ್ನಾಗಿಸಲು ಕರೆ ನೀಡಿದ ಹಿನ್ನಲೆ ರೋಗದ ಸಂಪೂರ್ಣ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಹೆಚ್ಚಿನ ಮಹತ್ವ ನೀಡಿದೆ. ಈ ದಿಸೆಯಲ್ಲಿ ಕ್ಷಯ ರೋಗವನ್ನು ತ್ವರಿತಗತಿಯಲ್ಲಿ ಪತ್ತೆ ಹಚ್ಚಲು ಅತ್ಯಾಧುನಿಕ ಯಂತ್ರೋಪಕರಣ ಪರಿಚಯಿಸಲಾಗಿದ್ದು, ಕ್ಷಯ ರೋಗಿಗಳಿಗೆ ನಿಕ್ಷಯ್ ಪೋಷಣ್ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ನೀಡಲಾಗುತ್ತಿದ್ದ ರು.500 ಸಹಾಯಧನವನ್ನು ರು.1000ಕ್ಕೆ ಹೆಚ್ಚಿಸಿ ನೇರವಾಗಿ ರೋಗಿಗಳ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತಿದೆ. ಕ್ಷಯ ರೋಗಿಗಳಿಗೆ ಚಿಕಿತ್ಸೆಗಾಗಿ ಕಳೆದ ಕೆಲ ವರ್ಷದ ಹಿಂದೆ ಅಂದಾಜು ರು. 10 ಲಕ್ಷ ವೆಚ್ಚದಲ್ಲಿ ಟ್ರೂನ್ಯಾಟ್ ಎಂಬ ಯಂತ್ರೋಪಕರಣದ ಮೂಲಕ ಚಿಕಿತ್ಸೆ ನೀಡಲಾಗುತ್ತಿದ್ದು, ಮಾಸಿಕ 400-500 ರೋಗಿಗಳು ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡುತ್ತಿದ್ದರು. ಅಂದಾಜು 10-15 ರೋಗಿಗಳನ್ನು ಪತ್ತೆ ಹಚ್ಚಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಹೆಚ್ಚಿನ ಮಹತ್ವ ನೀಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಚೇರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸಾರ್ವಜನಿಕ ಆಸ್ಪತ್ರೆ ಪ್ರೋತ್ಸಾಹದಿಂದ ಶಾಹಿ ಎಕ್ಸ್ ಪೋರ್ಟ್ ಪ್ರೈ.ಲಿ ಬೆಂಗಳೂರುರವರ ಸಹಕಾರದಿಂದ ಅತ್ಯಾಧುನಿಕ ಕ್ಷಯ ರೋಗ ಪತ್ತೆಹಚ್ಚುವ ಸಿಬಿನ್ಯಾಟ್ ( ಜೀನ್ ಎಕ್ಸಪರ್ಟ್ ) ಯಂತ್ರವನ್ನು ಇದೀಗ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ.
ತಾಲೂಕಿನಲ್ಲಿನ 22 ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ರೋಗಿಗಳ ಕಫ ಮಾದರಿಯನ್ನು ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಕಳುಹಿಸದೆ, ಕ್ಷಿಪ್ರಗತಿಯಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿ ರೋಗ ಪತ್ತೆ ಹಚ್ಚಿ ಕೂಡಲೇ ಚಿಕಿತ್ಸೆ ನೀಡಿ ಸಂಪೂರ್ಣ ಕ್ಷಯ ರೋಗ ನಿಯಂತ್ರಣಕ್ಕೆ ನೂತನ ಯಂತ್ರದಿಂದ ಪ್ರಯೋಜನವಾಗಲಿದೆ.