ಕನ್ನಡಪ್ರಭ ವಾರ್ತೆ ಮಂಡ್ಯ
ಪತ್ರಿಕೆ ಎಂಬದು ಇಂದಿಗೂ ಪ್ರಬಲ ಮಾಧ್ಯಮವಾಗಿದೆ. ದೃಶ್ಯ ಮಾಧ್ಯಮದ ನಡುವೆಯೂ ಪತ್ರಿಕೆಯು ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಹೇಳಿದರು.ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಪತ್ರಿಕಾ ಮಿತ್ರರು ಹಾಗೂ ಹಿತೈಷಿಗಳ ಬಳಗದಿಂದ ಹಿರಿಯ ಪತ್ರಕರ್ತರಾದ ಕೆ.ಕೆ.ಶೆಟ್ಟಿ ಕುತ್ತಿಕಾರ್ ಪ್ರಶಸ್ತಿ ಪುರಸ್ಕೃತ ಮತ್ತೀಕೆರೆ ಜಯರಾಮ್ ಹಾಗೂ ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ ಪುರಸ್ಕೃತ ಬಸವರಾಜ ಹೆಗ್ಗಡೆ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪತ್ರಿಕೆ ಮಾಧ್ಯಮವನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ. ಪ್ರಬಲವಾದ ಮಾಧ್ಯಮದ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಪತ್ರಿಕೆಯಲ್ಲಿ ಸುದ್ದಿ ಬಂದೊಡನೆ ಸತ್ಯ ಎಂದು ನಂಬುವವರು ಇಂದಿಗೂ ನಮ್ಮ ನಡುವೆಯಿದ್ದಾರೆ. ಪತ್ರಿಕೆ ಹಲವರ ಜೀವನ ರೂಪಿಸಿದೆ. ಹಲವರ ಜೀವನವನ್ನು ಕಡೆಗಣಿಸಿದೆ ಎಂದರು.ದಿವ್ಯಸಾನ್ನಿಧ್ಯ ವಹಿಸಿದ್ದ ವಿಶ್ವ ಒಕ್ಕಲಿಗ ಮಠದ ಪೀಠಾಧ್ಯಕ್ಷ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಅವಿರತ ಕಷ್ಟಗಳನ್ನು ಅನುಭವಿಸಿ ಸಮಾಜಕ್ಕೆ ಕೊಡುಗೆಯನ್ನು ನೀಡಿದಾಗ ಜನರು ಪತ್ರಕರ್ತರನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂದರು.
ಪತ್ರಕರ್ತರು ಜನಸಾಮಾನ್ಯರ ನಡುವಿನಲ್ಲಿದ್ದು ಸಮಸ್ಯೆ ಅರಿತವರಾಗಿರುತ್ತಾರೆ. ಕಷ್ಟದಲ್ಲಿರುವ ಪತ್ರಕರ್ತರಿಗೆ ಬೇಕಾದ ಸವಲತ್ತುಗಳನ್ನು ಒದಗಿಸುವಂತಹ ಹಿರಿಯ ಪತ್ರಕರ್ತರ ಕಾರ್ಯ ವೈಖರಿ ಪತ್ರಕರ್ತರಿಗೆ ಶಕ್ತಿಯನ್ನು ತುಂಬುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಕೆ.ಕೆ.ಶೆಟ್ಟಿ ಕುತ್ತಿಕಾರ್ ಪ್ರಶಸ್ತಿ ಪುರಸ್ಕೃತ ಮತ್ತೀಕೆರೆ ಜಯರಾಮ್ ಹಾಗೂ ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ ಪುರಸ್ಕೃತ ಬಸವರಾಜ ಹೆಗ್ಗಡೆ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಅಭಿನಂದಿತರ ಕುರಿತು ಹಿರಿಯ ಪತ್ರಕರ್ತ ಕೆ.ಎನ್.ರವಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್, ಶಶಿಧರ್, ಕೆ.ಶ್ರೀನಿವಾಸ್, ಶಿವನಂಜಯ್ಯ, ಎಂ.ಎಸ್.ಶಿವಪ್ರಕಾಶ್, ಎನ್.ನಾಗೇಶ್, ರವಿ ಸಾವಂದಿಪುರ, ಸಿ.ಎ.ಲೋಕೇಶ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ನವೀನ್ಕುಮಾರ್, ಮಾಜಿ ಅಧ್ಯಕ್ಷ ಬಿ.ಪಿ.ಪ್ರಕಾಶ್ ಸೇರಿದಂತೆ ಹಲವು ಪತ್ರಕರ್ತರು ಉಪಸ್ಥಿತರಿದ್ದರು.