ಕಲಘಟಗಿ: ಪತ್ರಿಕೆಗಳು ಸಮಾಜಕ್ಕೆ ಸುದ್ದಿ ಮಾತ್ರವಲ್ಲ, ಜ್ಞಾನದ ಹಂಚಿಕೆಗೆ ಉಪಯುಕ್ತ ಸಾಧನವಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ನಾಗರಾಜ ಹಳ್ಳಿಯವರ ಹೇಳಿದರು.
ತಾಲೂಕು ದಂಡಾಧಿಕಾರಿ ಬಸವರಾಜ ಹೊಂಕಣ್ಣವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾಹಿತಿಗಾಗಿ ಹಗಲು-ರಾತ್ರಿ ಎನ್ನದೇ ದುಡಿಯುವ ಪತ್ರಕರ್ತರು ಸಮಾಜದ ಸುಧಾರಣೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಾರೆ. ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಂಡು ಕುಲಕರ್ಣಿ ಮಾತನಾಡಿ, ಎಲ್ಲ ಸುದ್ದಿ ಮಾಧ್ಯಮಗಳಿಗಿಂತಲೂ ಪತ್ರಿಕಾ ಮಾಧ್ಯಮ ಅತ್ಯಂತ ವಿಶ್ವಾಸಾರ್ಹವಾದದ್ದು. ನಿರ್ಭೀತಿಯಿಂದ ಸತ್ಯ ಶೋಧಿಸಿ, ನಿಖರವಾದ ಮಾಹಿತಿ ಸಂಗ್ರಹಿಸುವುದು ಪತ್ರಕರ್ತರ ಕರ್ತವ್ಯವಾಗಬೇಕು ಎಂದರು.ಪತ್ರಿಕಾ ವಿತರಕರಿಗೆ ಮತ್ತು ಕಳೆದ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು. ಉಚಿತ ಬ್ಯಾಗ್ ಮತ್ತು ನೋಟ್ಬುಕ್ ವಿತರಿಸಲಾಯಿತು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪಿ.ವೈ. ಸಾವಂತ್, ಪಪಂ ಮುಖ್ಯಾಧಿಕಾರಿ ಬಿ. ಚಂದ್ರಶೇಖರ್, ಧಾರವಾಡ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಗುರು ಬಾಂಡಗೆ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಕಾಶ್ ಲಮಾಣಿ, ವಕೀಲರಾದ ಅಣ್ಣಪ್ಪ ಓಲೇಕಾರ್, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಅಜಮತಖಾನ್ ಜಹಗೀರದಾರ, ಕಸಾಪ ತಾಲೂಕು ಅಧ್ಯಕ್ಷ ರಮೇಶ್ ಸೋಲಾರಗೊಪ್ಪ, ಪತ್ರಕರ್ತರಾದ ಉಮೇಶ್ ಜೋಶಿ, ವೀರೇಶ್ ಹಾರೂಗೇರಿ, ಉದಯಗೌಡರ, ಶಂಕರ ರೆಡ್ಡೇರ್, ಸುನೀಲ ಕಮ್ಮಾರ, ವಿನಾಯಕ ಭಟ್, ಸುಭಾಸ ಸುಣಗಾರ, ಪ್ರಕಾಶ ದೂಪದ ಹಾಜರಿದ್ದರು.