ಬೆಳ್ತಂಗಡಿ : ಧರ್ಮಸ್ಥಳ ಕ್ಷೇತ್ರದ ಕುರಿತ ಸುಳ್ಳು ವದಂತಿಗಳಿಂದ ದೇಶ-ವಿದೇಶಗಳಲ್ಲಿರುವ ಕೋಟ್ಯಂತರ ಭಕ್ತರಿಗೆ ತೀವ್ರ ನೋವಾಗಿದೆ. ಭಯ ಮತ್ತು ಗೊಂದಲದ ವಾತಾವರಣ ಉಂಟಾಗಿದೆ. ಆದ್ದರಿಂದ ಪಾರದರ್ಶಕವಾಗಿ ತನಿಖೆ ನಡೆಸಿ ನ್ಯಾಯ ಒದಗಿಸಲು ಬುರುಡೆ ಪ್ರಕರಣವನ್ನು ಕೇಂದ್ರ ತನಿಖಾ ತಂಡಕ್ಕೆ ವಹಿಸಬೇಕು ಎಂದು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಭಾನುವಾರ ಜೆಡಿಎಸ್ ಕಾರ್ಯಕರ್ತರ ಜೊತೆ, ತಮ್ಮ ಸಾವಿರಾರು ಅಭಿಮಾನಿಗಳೊಂದಿಗೆ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ, ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.ಅನಾಮಧೇಯ ವ್ಯಕ್ತಿ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ದೊರಕಿಸುವ ಬದಲು ಸರ್ಕಾರ ಷಡ್ಯಂತರ ರೂಪಿಸಿದೆ. ತಾನು ಹಾಗೂ ಕುಟುಂಬದವರೆಲ್ಲರೂ ಧರ್ಮಸ್ಥಳದ ಪರಮಭಕ್ತರಾಗಿದ್ದು, ಪ್ರಕರಣದಲ್ಲಿ ಸತ್ಯವನ್ನು ಹೊರಗೆಳೆಯಲು ನೈತಿಕ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ತಾಳ್ಮೆ, ಸಂಯಮ, ಸಮಾಧಾನ ಮತ್ತು ಮೌನವನ್ನು ಶ್ಲಾಘಿಸಿದ ನಿಖಿಲ್ ಕುಮಾರಸ್ವಾಮಿ, ಯಾವುದೇ ನಿರೀಕ್ಷೆ ಹಾಗೂ ಪ್ರತಿಫಲಾಪೇಕ್ಷೆ ಬಯಸದೆ, ಲೋಕಕಲ್ಯಾಣಕ್ಕಾಗಿ ಹೆಗ್ಗಡೆಯವರು ಮಾಡುತ್ತಿರುವ ಚತುರ್ವಿಧ ದಾನಪರಂಪರೆಯೊಂದಿಗೆ ಗ್ರಾಮಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಮಹಿಳಾಸಬಲೀಕರಣ ಮೊದಲಾದ ಸಮಾಜಮುಖಿ ಸೇವಾಕಾರ್ಯಗಳಿಗೆ ಅಭಿನಂದಿಸಿದರು.
ಡಿ. ಸುರೇಂದ್ರ ಕುಮಾರ್ ಮತ್ತು ಶಾಸಕರಾದ ಜಿ.ಡಿ. ಹರೀಶ್ ಗೌಡ ಹುಣಸೂರು, ಮಂಜು ಅರಕಲಗೂಡು, ಸ್ವರೂಪ್ ಹಾಸನ, ಮಲ್ಲೇಶ್ ಬಾಬು ಕೋಲಾರ, ವಿಧಾನಪರಿಷತ್ ಸದಸ್ಯ ಭೋಜೇಗೌಡ ಮತ್ತು ಮಾಜಿ ಶಾಸಕ ಕೆ. ಮಹಾದೇವ ಮೊದಲಾದವರು ಉಪಸ್ಥಿತರಿದ್ದರು.
ಭಕ್ತರೇ ಕ್ಷೇತ್ರದ ಸಂಪತ್ತು: ಡಾ.ವೀರೇಂದ್ರ ಹೆಗ್ಗಡೆದೇಶ-ವಿದೇಶಗಳಲ್ಲಿರುವ ಕೋಟ್ಯಂತರ ಭಕ್ತಾದಿಗಳೇ ಧರ್ಮಸ್ಥಳದ ಅಪಾರ ಹಾಗೂ ಅಮೂಲ್ಯ ಸಂಪತ್ತು ಮತ್ತು ಶ್ರೀರಕ್ಷೆಯಾಗಿದೆ. ಇದರ ತೂಕ, ಘನತೆ, ಗೌರವವೇ ಅತಿ ಮಹತ್ವಪೂರ್ಣವಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಜೆಡಿಎಸ್ ಮುಖಂಡರ ಜೊತೆಗಿನ ಸಮಾವೇಶದಲ್ಲಿ ಅವರು ಮಾತನಾಡಿದರು.ಸತ್ಯ, ಧರ್ಮ, ನ್ಯಾಯ, ನೀತಿ ನಿತ್ಯವೂ ನೆಲೆನಿಂತಿರುವ ಪವಿತ್ರ ಕ್ಷೇತ್ರ ಧರ್ಮಸ್ಥಳ. ಇಲ್ಲಿ ಯಾವುದೇ ತಪ್ಪು ಅಥವಾ ಅಹಿತಕರ ಘಟನೆ ನಡೆಯದಂತೆ ಸದಾ ಎಚ್ಚರಿಕೆ ಹಾಗೂ ಮುಂಜಾಗರೂಕತೆ ವಹಿಸುತ್ತಿರುವುದಾಗಿ ಹೆಗ್ಗಡೆ ಸ್ಪಷ್ಟಪಡಿಸಿದರು.
ಎಸ್ಐಟಿ ತನಿಖೆ ಪೂರ್ತಿಯಾಗಿಲ್ಲ. ಹೀಗಾಗಿ ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ದೇವೇಗೌಡರು, ಕುಮಾರಸ್ವಾಮಿ ಬಗ್ಗೆ ಬಹಳ ಗೌರವವಿದೆ. ದೇವೆಗೌಡರಂತಹ ಮಹಾತ್ಮರನ್ನು ಸ್ಮರಿಸುತ್ತೇವೆ. ನಿಖಿಲ್, ಕ್ಷೇತ್ರದೊಂದಿಗೆ ನಾವಿದ್ದೇವೆ ಅಂದಿದ್ದಾರೆ. ಇಲ್ಲಿ ಬಂದು ಪ್ರೀತಿ ತೋರಿಸಿದ ನಿಮಗೆ ನಾನು ಅಭಾರಿ. ದೇವಸ್ಥಾನದ ಬಗ್ಗೆ ನಿಮ್ಮ ಪ್ರೀತಿ-ಗೌರವ ಹೀಗೆ ಇರಲಿ ಎಂದರು.