ಅನ್ಯಾಯವಾಗಿರುವುದು ನಿಖಿಲ್‌ಗಲ್ಲ, ಸಿಪಿವೈಗೆ: ಡಿಕೆ ಸುರೇಶ್

KannadaprabhaNewsNetwork | Updated : Nov 07 2024, 12:32 AM IST

ತಮ್ಮ ಭಾಷಣದ ಮಧ್ಯೆ ಚುನಾವಣೆ ವ್ಯವಸ್ಥೆ ಬಗ್ಗೆ ಕುಮಾರಸ್ವಾಮಿಯವರು ವಿಧಾನಸಭೆಯಲ್ಲಿ ಆಡಿದ ಆಡಿಯೋವನ್ನು ಡಿ.ಕೆ.ಸುರೇಶ್ ಸಭಿಕರಿಗೆ ಕೇಳಿಸಿ, ವ್ಯಂಗ್ಯವಾಡಿದರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ತಾಲೂಕಿನ ರೈತರ ಹಿತದೃಷ್ಟಿಯಿದ ಸಿ.ಪಿ.ಯೋಗೇಶ್ವರ್ ಕ್ಷೇತ್ರದ ಕೆರೆಗಳನ್ನು ತುಂಬಿಸಿದರು. ಬೇರೆಯವರು ನಿಖಿಲ್ ಕುಮಾರಸ್ವಾಮಿಗೆ ಅನ್ಯಾಯವಾಗಿದೆ ಎಂದು ಕಣ್ಣೀರು ಸುರಿಸುತ್ತಿದ್ದಾರೆ. ಆದರೆ, ನಿಜವಾಗಲು ಅನ್ಯಾಯವಾಗಿರುವುದು ಯಾರಿಗೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ತಾಲೂಕಿನ ಬೇವೂರು ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ದಳದ ನಾಯಕರು ನಿಖಿಲ್ ಕುಮಾರಸ್ವಾಮಿಗೆ ಅನ್ಯಾಯವಾಗಿದೆ ಎಂದು ಕ್ಷೇತ್ರದ ಉದ್ದಕ್ಕೂ ಪ್ರಚಾರ ಮಾಡುತ್ತಿದ್ದಾರೆ. ಚನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರದ ಜನ ನಿಖಿಲ್ ಕುಮಾರಸ್ವಾಮಿಗೆ ಅನ್ಯಾಯ ಮಾಡಿದ್ದಾರೆಯೇ? ಇವರಿಗೆ ಅನ್ಯಾಯ ಮಾಡಿದವರು ಯಾರು? ಎಂದು ಪ್ರಶ್ನಿಸಿದರು.

ರಾಮನಗರ ಜಿಲ್ಲೆಯ ಜನರು ದೇವೇಗೌಡರು, ಅನಿತಾ ಕುಮಾರಸ್ವಾಮಿ, ಕುಮಾರಸ್ವಾಮಿ ಅವರಿಗೆ ಅನ್ಯಾಯ ಮಾಡಿಲ್ಲ. ಅನ್ಯಾಯವಾಗಿರುವುದು ಮನೆ ಮಗ ಯೋಗೇಶ್ವರ್ ಅವರಿಗೆ. ಇವರು ಸತ್ತರೆ ಮಣ್ಣು ಮಾಡುವುದು ಚನ್ನಪಟ್ಟಣದ ಚಕ್ಕೆರೆಯಲ್ಲಿ ಎಂದರು.

ನಿಖಿಲ್ ಸೋತಿದಕ್ಕೆ ಎಚ್‌ಡಿಕೆ ಸಚಿವ:

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಅನ್ಯಾಯವಾಗಿದೆ ಎಂದು ಭಾವನಾತ್ಮಕವಾಗಿ ಮಾತನಾಡಿದ ಕುಮಾರಸ್ವಾಮಿ ಲೋಕಸಭಾ ಚುನಾವಣೆ ಗೆದ್ದು ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಹಾಗಾದರೆ ಇಲ್ಲಿ ಯಾರಿಗೆ ಅನ್ಯಾಯವಾಗಿದೆ. ನಿಖಿಲ್ ಕುಮಾರಸ್ವಾಮಿ ಸೋತ ಕಾರಣಕ್ಕೆ ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಯಾಗಿದ್ದಾರೆ ಎಂದರು.

ಬಿಜೆಪಿ ಮುಖ್ಯ ಜೆಡಿಎಸ್‌ನವರು ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ಆರೋಪಿಯನ್ನಾಗಿಸಬೇಕು ಎಂದು ಪ್ರಯತ್ನ ಪಡುತ್ತಿದ್ದಾರೆ. ಈ ಎಲ್ಲಾ ಆರೋಪಗಳಿಗೆ ಚನ್ನಪಟ್ಟಣ ತಾಲೂಕಿನ ಜನತೆ ಕಾಂಗ್ರೆಸ್‌ಗೆ ಮತ ನೀಡಿ ಉತ್ತರ ನೀಡಬೇಕು ಎಂದು ಮನವಿ ಮಾಡಿದರು.

ಊರಿನ ಹೆಸರು ಕೇಳುತ್ತಿರುವ ಎಚ್‌ಡಿಕೆ:

ಕ್ಷೇತ್ರದ ಜನರ ಕಷ್ಟ ಆಲಿಸಲಿಲ್ಲ. ಕ್ಷೇತ್ರದ ಅನೇಕ ಊರುಗಳ ರಸ್ತೆಗಳೇ ಗೊತ್ತಿಲ್ಲ. ಅಧಿಕಾರದಲ್ಲಿ ಇದ್ದಾಗ ನಿಮ್ಮ ಕಷ್ಟ ಕೇಳಿದವರು ಈಗ ನಿಮ್ಮ ಊರುಗಳನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಕುಮಾರಸ್ವಾಮಿ ನಿಖಿಲ್ ಕುಮಾರಸ್ವಾಮಿ ಮತ್ತು ದೇವೇಗೌಡರು ಚುನಾವಣೆ ಬಂದಾಗ ಬರುತ್ತಿದ್ದಾರೆ. ಆರು ವರ್ಷ ಚನ್ನಪಟ್ಟಣದ ಶಾಸಕರಾಗಿದ್ದ ಕುಮಾರಸ್ವಾಮಿ ಈ ಊರು ಯಾವುದು, ಈ ರಸ್ತೆ ಎಲ್ಲಿಗೆ ಹೋಗುತ್ತದೆ, ಈ ಮುಖಂಡ ಯಾರು ಎಂದು ಕೇಳಿಕೊಂಡು ಪ್ರಚಾರ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕುಮಾರಸ್ವಾಮಿಯವರ ಹಳೆಯ ಆಡಿಯೋ ಬಿತ್ತರಿಸಿದ ಸುರೇಶ್:

ತಮ್ಮ ಭಾಷಣದ ಮಧ್ಯೆ ಚುನಾವಣೆ ವ್ಯವಸ್ಥೆ ಬಗ್ಗೆ ಕುಮಾರಸ್ವಾಮಿಯವರು ವಿಧಾನಸಭೆಯಲ್ಲಿ ಆಡಿದ ಆಡಿಯೋವನ್ನು ಡಿ.ಕೆ.ಸುರೇಶ್ ಸಭಿಕರಿಗೆ ಕೇಳಿಸಿ, ವ್ಯಂಗ್ಯವಾಡಿದರು.

ಕ್ಷೇತ್ರದಲ್ಲಿ ಐದು ವರ್ಷ ಕೆಲಸ ಮಾಡಿ ಚುನಾವಣೆ ಗೆಲ್ಲೋದು ಕಷ್ಟ. ಚುನಾವಣೆಗೆ ಒಂದು ವಾರ ಹತ್ತು ದಿನ ಇದೆ ಎನ್ನುವಾಗ ಈಗಿನ ಚುನಾವಣಾ ಪದ್ಧತಿಗೆ ತಕ್ಕಂತೆ ತಯಾರಾಗಿ ಹೋಗಿ ಕೆಲಸ ಮಾಡಿದರೆ ಚುನಾವಣೆ ಗೆಲ್ಲಬಹುದು ಎಂದು ಚನ್ನಪಟ್ಟಣ ಜನರ ಮತವನ್ನು ಪಡೆದು ಕಾಣೆಯಾಗಿರುವ ಕುಮಾರಸ್ವಾಮಿ ಹೇಳಿದ್ದಾರೆ. ಇದು ಡಿ.ಕೆ. ಡಿ.ಕೆ. ಸಹೋದರರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪವಲ್ಲ ಎಂದು ಹೇಳಿದರು. ಇವು ಕುಮಾರಸ್ವಾಮಿ ಮಾತುಗಳು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಾರಕ್ಕೊಮ್ಮೆಯಾದರೂ ಮೈಸೂರಿನ ತಮ್ಮ ಕ್ಷೇತ್ರಕ್ಕೆ ಹೋಗುತ್ತಿರುತ್ತಾರೆ. ಅವರು ಸಂಸಾರದ ಜೊತೆ ಕಾಲ ಕಳೆಯಲು ಹೋಗುವುದಿಲ್ಲ. ಕ್ಷೇತ್ರದ ಜನರ ಕಷ್ಟಗಳನ್ನು ಆಲಿಸಲು ಹೋಗುತ್ತಾರೆ. ಜನರ ಕಷ್ಟವನ್ನು ನಿವಾರಿಸಬೇಕು ಎಂದು ಕ್ಷೇತ್ರಕ್ಕೆ ಹೋಗುತ್ತಾರೆ ಹೊರತು, ಬೂಟಾಟಿಕೆಗಲ್ಲ ಎಂದು ಹೇಳಿದರು.